ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳ್ತಂಗಡಿ ತಾಲೂಕು ಪ್ರೌಢಶಾಲೆ ಮತ್ತು ಸಹ ಶಿಕ್ಷಕರ ಸಂಘದವರ ನೇತೃತ್ವದಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಇವರ ಮಾರ್ಗದರ್ಶನದಲ್ಲಿ, ತಾಲೂಕಿನ ಎಲ್ಲಾ ಸರಕಾರಿ, ಖಾಸಗಿ ಅನುದಾನಿತ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ಗ್ರಂಥಾಲಯದ ಬಳಕೆ ಹಾಗೂ ಕಥೆ ಕವನ ಬರೆಯುವ, ಓದುವ ಪ್ರೇರಣಾ ಕಾರ್ಯಕ್ರಮ “ಮಗುವಿಗೊಂದು ಪುಸ್ತಕ ನೀಡಿ” ಅಭಿಯಾನ ಉದ್ಘಾಟನೆಗೊಂಡಿತು. ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಬೆಳ್ತಂಗಡಿಯಲ್ಲಿ ಜರಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ ಎಚ್ ಎಸ್ ರವರು ಮಾತನಾಡುತ್ತಾ , ಸಾಹಿತ್ಯಿಕ ಚಟುವಟಿಕೆಗಳು ಶೈಕ್ಷಣಿಕ ಪೂರಕವಾಗಿರುವುದರಿಂದ ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಓದುವ ಅಭಿರುಚಿಯು ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ವ್ಯಕ್ತಿತ್ವ ವಿಕಾಸಕ್ಕೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮತ್ತು ಶಿಕ್ಷಕ ಸಂಘಟನೆಗಳವರು ಅತ್ಯುತ್ತಮ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳವರೂ ತಮ್ಮ ಸಂಸ್ಥೆಯಲ್ಲಿ ಮಗುವಿಗೊಂದು ಪುಸ್ತಕ ನೀಡಿ ಅಭಿಯಾನದ ಅಂಗವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯರಾದ ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿಯವರು ಉಪನ್ಯಾಸ ನೀಡುತ್ತಾ ಕಲಿಕೆಗೆ ಮತ್ತು ಬದುಕಿನ ಯಶಸ್ಸಿಗೆ ಮಾಧ್ಯಮ ಮುಖ್ಯವಲ್ಲ. ಕಲಿಯುವ ಮನಸ್ಸು ಮತ್ತು ಇಚ್ಛಾಶಕ್ತಿ ಬೇಕು. ಜೊತೆಗೆ ಆನಂದದ ಕಲಿಕೆ ನಡೆಯಬೇಕಿದ್ದರೆ ಶಾಲೆಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾದ ಚಟುವಟಿಕೆಗಳನ್ನು ಆಯೋಜಿಸಬೇಕು.ಆಗ ಶಾಲೆಯಲ್ಲಿ ಆನಂದದ ವಾತಾವರಣ ನಿರ್ಮಾಣವಾಗುತ್ತದೆ.ಈ ನೆಲೆಯಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಅವಳಿ ಮಕ್ಕಳ ಹಾಗೆ. ಕಲಿಕಾವಧಿಯಲ್ಲಿ ಅಂಕವೇ ಮುಖ್ಯವಲ್ಲ.ಬದುಕನ್ನು ರೂಪಿಸುವ ಮತ್ತು ಗುಣವನ್ನು ಪೋಷಿಸುವ ಶಿಕ್ಷಣ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥರು ವಹಿಸಿದ್ದರು. ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಕುಮಾರ್ ಜೈನ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ವೆಂಕಟೇಶ್ ತುಳಪುಳೆ, ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ಮಯ್ಯರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ವತಿಯಿಂದ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸಿದ್ದಲ್ಲದೆ, ಮಗುವಿಗೊಂದು ಪುಸ್ತಕವನ್ನೂ ನೀಡುವುದರ ಮೂಲಕ ಅಭಿಯಾನಕ್ಕೆ ವಿಶೇಷ ರೀತಿಯಲ್ಲಿ ಚಾಲನೆ ನೀಡಲಾಯಿತು. ಸಭೆಯಲ್ಲಿ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.
ಅಭಿಯಾನದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಎಪ್ಪತ್ತಮೂರು ಪ್ರೌಢಶಾಲೆಗಳಲ್ಲೂ ನವಂಬರ ಮಾಸದಾದ್ಯಂತ, ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಈ ಬಗ್ಗೆ ಸೂಕ್ತ ಮಾಹಿತಿ ಮತ್ತು ಸೂಚನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ, ಶಿಕ್ಷಕರ ಸಂಘಟನೆಗಳವರ ನೇತೃತ್ವದಲ್ಲಿ, ಎಲ್ಲಾ ಶಾಲೆಗಳಿಗೂ ನೀಡಲಾಗುವುದೆಂದು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಯದುಪತಿ ಗೌಡರವರು ಸ್ವಾಗತ ಭಾಷಣದಲ್ಲಿ ತಿಳಿಸಿದರು. ಬೆಳ್ತಂಗಡಿ ಸರಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದರಾದ ರಾಜೇಂದ್ರ ರವರು ಧನ್ಯವಾದ ಸಲ್ಲಿಸಿದರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ಬೆಳಾಲು ಶ್ರೀ ಧಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರೂ ಆದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಕಾರ್ಯಕ್ರಮ ಸಂಯೋಜಿಸಿದರು.