ಬಂಟ್ವಾಳ: ಬಂಟ್ವಾಳ ತಾ. ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ ರವಿವಾರ ನಡೆಯಿತು.
ಉಡುಪಿ ಸೋಧೆ ಮಠಾಧಿಶರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿ ವೇ.ಮೂ. ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಪ್ರಶಾಂತ ಐತಾಳ ಅವರ ಪೌರೋಹಿತ್ಯದಲ್ಲಿ ಪ್ರತಿಷ್ಠಾ ವಿಧಿ ವಿಧಾನಗಳು ನೆರವೇರಿತು.
ಬಳಿಕ ನಡೆದ ಸಭಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮೀಜಿ ಅವರು, ಸರ್ವಾಂತರ್ಯಾಮಿಯಾದ ದೇವರನ್ನು ಅನುಭವ ರೂಪದಲ್ಲಿ ಕಾಣಲು ದೇವಸ್ಥಾನಗಳ ನಿರ್ಮಾಣವಾಗಿದೆ. ದೇಗುಲವನ್ನು ಸುಸ್ಥಿತಿಯಲ್ಲಿರಿಸಲು ಪುನರ್ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಜಾತಿ ಮತ ಧರ್ಮ ಭಾಷೆಗಳ ವಿಶಿಷ್ಟ ದೇಶ ನಮ್ಮ ದೇಶ. ನಮ್ಮ ತುಳುನಾಡಿನಲ್ಲಿ ಹುಟ್ಟಿದ ನಾವು ಭಾಗ್ಯವಂತರು.ಪ್ರೀತಿಯಿಂದ ಮಾನವ ಜನ್ಮವನ್ನು ಸಾರ್ಥಕ ಗೊಳಿಸಬೇಕು. ನಮ್ಮ ಆತ್ಮವನ್ನು ಶುದ್ದೀಕರಿಸುವ ಬ್ರಹ್ಮಕಲಶವಾಗಬೇಕು ಎಂದು ಹೇಳಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಸಾಧು ಸಂತರು, ಧಾರ್ಮಿಕ ನೇತಾರರು ತಮ್ಮ ಆಧ್ಯಾತ್ಮಿಕ ಚಿಂತನೆಯನ್ನು ಬೆಳಗಿಸಿದ ದೇಶ ನಮ್ಮದು ಎಂದು ಹೇಳಿದರು.
ರಾಜ್ಯ ನಗರ ನೀರು ಮತ್ತು ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಮುಂಬಯಿ ಉದ್ಯಮಿ ಜಯರಾಮ ಶೆಟ್ಟಿ ಕಾಪು, ಪುತ್ತೂರು ತಾ.ಪಂ.ನ ಮಾಜಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್, ಆರೆಸ್ಸೆಸ್ ಪ್ರಮುಖ ಸುಭಾಶ್ಚಂದ್ರ ಅಯ್ಯನಕಟ್ಟೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಆಡಳಿತ ಸಮಿತಿ ಅಧ್ಯಕ್ಷ ಜಾರಪ್ಪ ಕುಲಾಲ್, ನಿವೃತ್ತ ಶಿಕ್ಷಕ ಶ್ರೀಪತಿ ಭಟ್, ಪ್ರಮುಖರಾದ ಪ್ರಮೋದ್ ಕುಮಾರ್ ರೈ, ಹರೀಂದ್ರ ಪೈ,ಮಹಾಬಲ ಗೌಡ, ವೀರೇಂದ್ರ ಅಮೀನ್, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೇಸಪ್ಪ ಕೋಟ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಪ್ರಕಾಶ್ ಗಟ್ಟಿ ಸ್ವಾಗತಿಸಿದರು. ಯೋಗೀಶ್ ಕಲಸಡ್ಕ ಪ್ರಸ್ತಾವಿಸಿದರು. ಸುರೇಶ್ ಉರುಡಾಯಿ ವಂದಿಸಿದರು. ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.