ಬಂಟ್ವಾಳ: ಬಿಸಿಲಿನ ತೀವ್ರತೆ ಎರ್ರಾಬಿರ್ರಿ ಏರಿಕೆಯಾಗಿ ಮಂಗಳೂರಿನ ತಾಪಮಾನ ದಾಖಲೆ ಸೃಷ್ಟಿಸುತ್ತಿದ್ದರೆ, ಇತ್ತ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ದಿನದಿಂದ ದಿನಕ್ಕೆ ನೀರಿನಮಟ್ಟ ಕುಸಿಯುತ್ತಿದೆ. ಮೂಲಗಳ ಪ್ರಕಾರ ಎಪ್ರಿಲ್ ನಲ್ಲಿ ಮಳೆಯಾಗದೇ ಇದ್ದಲ್ಲಿ 2019 ರ “ನೀರ ಬರ” ಮತ್ತೆ ಮಂಗಳೂರನ್ನು ಕಾಡಲಿದೆಯಂತೆ..??
ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಒದಗಿಸುವ ವೆಂಟೆಡ್ ಡ್ಯಾಂ ನ ನೀರಿನಮಟ್ಟ 5.85 ಮೀ.ಇಳಿದಿದ್ದು, ಇದರ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲೂ ಮಹಾನಗರ ಪಾಲಿಕೆಯೂ ಇಲ್ಲ-ಸಲ್ಲದ ಸರ್ಕಸ್ ನಡೆಸುತ್ತಿದೆ.
ಒಂದೆಡೆ ಕುಡಿಯುವ ನೀರಿಗೆ ಮೊದಲ ಆದ್ಯತೆಯನ್ನುನೀಡಿರುವ ಮನಪಾ, ಕೈಗಾರಿಕಾ ಉದ್ದೇಶಗಳಿಗೆ ನೀರ ಬಳಸುವುದಕ್ಕೆ ಬ್ರೇಕ್ ಹಾಕಿದೆ. 5.85 ಮೀ.ಗೆ ಇಳಿಕೆಯಾಗಿರುವ ನೀರ ಮಟ್ಟವನ್ನು ಕಾಯ್ದುಕೊಳ್ಳಲು, ಶಂಭೂರಿನ ಎಎಂಆರ್ ಡ್ಯಾಂನಿಂದ ನೀರು ಪಡೆಯಲು ಪಾಲಿಕೆ ನಿರ್ಧರಿಸಿದೆ. ಅದರಂತೆ ಈಗಾಗಲೇ ಎಎಂಆರ್ನಿಂದ ತುಂಬೆ ಡ್ಯಾಂಗೆ ನೀರು ಹರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ನೀರು ಪೂರೈಕೆಗೆ ಸಮಸ್ಯೆಯಾಗದಂತೆ ಪಾಲಿಕೆ ಕ್ರಮಕೈಗೊಂಡಿದೆ.
ತುಂಬೆ ಡ್ಯಾಂನಲ್ಲಿ ಕಳೆದ ಮಾ.3ಕ್ಕೆ 5.85 ಮೀಟರ್ಗೆ ನೀರ ಮಟ್ಟಇಳಿಕೆಯಾಗಿತ್ರು, ಇದು ಕಳೆದ 4 ವರ್ಷದಲ್ಲೇ ಅತಿ ಕಡಿಮೆಯಾಗಿದ ನೀರಿನ ಮಟ್ಟ ಎಂಬುದು ತಜ್ಞರ ಅಭಿಪ್ರಾಯ. 2019ರ ಬಳಿಕದ ವರ್ಷದಲ್ಲಿ ಕೊರೋನಾ ಮಹಾಮಾರಿ ಕಾಡಿದ್ದ ಹಿನ್ನೆಲೆಯಲ್ಲಿ ಉಂಟಾಗಿದ್ದ ಲಾಕ್ ಡೌನ್ ನಿಂದ ಕೈಗಾರಿಕೆಗಳು ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡು ನೀರಿನ ಬಳಕೆ ಕಡಿಮೆಯಾಗಿತ್ತು. ಇದೀಗ ಮಾರುಕಟ್ಟೆ, ವ್ಯಾಪಾರ ವಹಿವಾಟು, ಕೈಗಾರಿಕೆ, ಕಾಮಗಾರಿ ಎಲ್ಲವೂ ಮತ್ತೆ ಚೇತರಿಸಿಕೊಂಡಿದ್ದು, 2019 ಕ್ಕೆ ಹೋಲಿಸಿದರೆ ಈ ವರ್ಷದ ನೀರ ಬೇಡಿಕೆ ಶೇ.12ರಷ್ಟು ಹೆಚ್ಚಳವಾಗಿದೆಯಂತೆ. ಕೇವಲ 5.85 ಮೀಟರ್ ನೀರು ಹೊಂದಿ, ಒಳಹರಿವೂ ಕಡಿಮೆಯಾಗಿರುವ ಈ ಸಂದರ್ಭ ಇರುವ ನೀರು ಮುಂದಿನ ಮೂವತ್ತು- ನಲುವತ್ತು ದಿನಗಳಿಗೆ ಮಾತ್ರ ಸಾಕಾದೀತು.. ಎನ್ನುವ ಆತಂಕವೂ ಎದುರಾಗಿದೆ.
ಇಂತಹಾ ಸನ್ನಿವೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಂಡಿದೆಯಾದರೂ, ನೀರ ಬಳಕೆಯಲ್ಲಿ ಮಂಗಳೂರು ಜನತೆ, ಕೈಗಾರಿಕೆಗಳು”ಸ್ವಯಂ ನಿಯಂತ್ರಣ” ಹೇರುವ ಮೂಲಕ ಪಾಲಿಕೆಯ ಜೊತೆ ಸಹಕರಿಸಬೇಕಿದೆ.
ಹುಯ್ಯೋ ಹುಯ್ಯೋ… ಮಳೆರಾಯ ತುಂಬೆ ಡ್ಯಾಮಲ್ಲಿ ನೀರಿಲ್ಲ…
ಈ ಎಲ್ಲಾ ಆತಂಕಗಳ ನಡುವೆ ಪ್ರಕೃತಿಯೇ ನೀರ ಬವಣೆಯನ್ನು ನೀಗಿಸಬೇಕಿದೆ. ಬರಿದಾಗುತ್ತಿರುವ ನೇತ್ರಾವತಿಯ ಉದ್ದುದ್ದಕ್ಕೂ ಸಾಲು ಸಾಲು ಡ್ಯಾಂ ಗಳಿದ್ದು, ಕೊನೆಯ ತುಂಬೆ ಡ್ಯಾಂ ನಲ್ಲಿ ನೀರ ಕೊರತೆಯಾಗುವುದು ಸಾಮಾನ್ಯ. ಆದರೆ ಮಂಗಳೂರು ಮಹಾಜನತೆ ಕುಡಿಯುವ ನೀರಿಗಾಗಿ ನಂಬಿರುವ ವೆಂಟೆಡ್ ಡ್ಯಾಂ ಬರಿದಾದರೆ, ಮುಂದಿನ ದಿನಗಳಲ್ಲಿ ನೀರ ಹಾಹಾಕಾರ ಮುಗಿಲು ಮುಟ್ಟೀತು. ಹಾಗಾಗಿ ಮಳೆರಾಯನ ಪ್ರವೇಶವೊಂದೇ ಸಮಸ್ಯೆಗೆ ಮುಕ್ತಿ ಎನ್ನುವುದು ಹಿರಿಯರ ಅಭಿಪ್ರಾಯ.