ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿಯಲ್ಲಿರುವ ಹಿಂದೂ ಮುಸ್ಲಿಂ ಸಾಮರಸ್ಯದ ಸಾರುವ ದೇವಾಲಯ ಮಸೀದಿ ಹಾಗೂ ಮಸೀದಿಯ ಮುಂಭಾಗದ ಮಾರಮ್ಮನ ದೇವಾಲಯದ ಆವರಣದಲ್ಲಿ ಪ್ರತಿ ವರ್ಷ ಅದ್ದೂರಿ ಕೊಂಡೋತ್ಸವ ನಡೆಯುತ್ತದೆ. ಅದೇ ರೀತಿಯಾಗಿ ಈ ಬಾರಿಯ ಕೊಂಡೋತ್ಸವ ಗುರುವಾರ ಬೆಳಗ್ಗೆ ಅದ್ಧೂರಿಯಾಗಿ ನಡೆಯಿತು.
ತಾಳವಾಡಿಯಲ್ಲಿರುವ ಗ್ರಾಮ ದೇವತೆಯಾಗಿರುವ ಮಾರಮ್ಮನ ದೇವಾಲಯದ ಅರ್ಚಕ ಶಿವಣ್ಣ ಸಂಪ್ರದಾಯದಂತೆ ಕೊಂಡ ಹಾಯುವ ಮೂಲಕ ಕೊಂಡೋತ್ಸವಕ್ಕೆ ಚಾಲನೆ ನೀಡಿದರು. ತಾಳವಾಡಿಯಲ್ಲಿ ನಡೆಯುವ ಅದ್ಧೂರಿ ಕೊಂಡೋತ್ಸವ ಕರ್ನಾಟಕ ತಮಿಳುನಾಡಿನ ಸಾವಿರಾರು ಮಂದಿ ಪಾಲ್ಗೊಂಡು ಸಾಮರಸ್ಯ ಸಾರುವ ಕೊಂಡೋತ್ಸವಕ್ಕೆ ಸಾಕ್ಷಿಯಾದರು.
ಕೊಂಡೋತ್ಸವ ಹಿನ್ನಲೆಯಲ್ಲಿ ಬುಧವಾರ ರಾತ್ರಿ ಕೊಂಡೋತ್ಸವಕ್ಕೆ ಬೇಕಾಗುವ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು ರಾತ್ರಿ ಅಗ್ನಿ ಸ್ಪರ್ಶವೂ ನಡೆಯಿತು. ದೇವಾಲಯದ ಸುತ್ತಲೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಗುರುವಾರ ಬೆಳಗ್ಗೆ ಕೊಂಡೋತ್ಸವ ಹಿನ್ನಲೆಯಲ್ಲಿ ಇಡೀ ತಾಳವಾಡಿ ತಳಿರು ತೋರಣದಿಂದ ಕಂಗೊಳಿಸುತ್ತಿದ್ದವು. ಬೆಳಗ್ಗೆ ಅರ್ಚಕ ಶಿವಣ್ಣ ಕೊಂಡ ಹಾಯುವ ಮೂಲಕ ಚಾಲನೆ ನೀಡಿದಾಗ ಸುತ್ತಲೂ ನೆರೆದಿದ್ದ ಸಾವಿರಾರು ಭಕ್ತರಲ್ಲಿ ರೋಮಾಂಚನ ಅನುಭವ ಕಂಡಿತು.
ತಾಳವಾಡಿಯಲ್ಲಿ ನಡೆದ ಸಾಮರಸ್ಯದ ಕೊಂಡೋತ್ಸವದಂತೆ ಇನ್ನಿತರ ಕಡೆ ನಡೆದರೆ ಎಲ್ಲ ಕಡೆಯಲ್ಲೂ ಸಾಮರಸ್ಯ ಮೂಡಲಿದೆ.