ಬಂಟ್ವಾಳ: ವ್ಯವಸಾಯ ಸೇವಾ ಸಹಕಾರಿ ಬ್ಯಾಂಕೊಂದರಲ್ಲಿ ವಂಚಿಸಿದ್ದಾರೆ ಎಂದು ಸಾಲ ಪಡೆದು ವಂಚನೆಗೊಳಗಾದ ಮಹಿಳೆ ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ನೀಡಿದ್ದಾರೆ.
ಕಾರಿಂಜೇಶ್ವರ ದೇವಾಲಯಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರಿಗೆ ನೊಂದ ಮಹಿಳೆ, ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅನೇಕ ಸಾಲಗಾರರನ್ನು ವಂಚನೆ ಮಾಡಲಾಗಿದೆ ಎಂಬ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದ್ದ ಬೆನ್ನಲ್ಲೇ ಮಹಿಳೆಯೋರ್ವರು ಇದೇ ಬ್ಯಾಂಕ್ ನಲ್ಲಿ ವಂಚಿಸಲಾಗಿದೆ ಎಂದು ಸಚಿವರಲ್ಲಿ ಮನವಿ ಮಾಡಿದ್ದು, ಬಾರೀ ಚರ್ಚೆಗೆ ಗ್ರಾಸವಾಗಿದೆ.
ಮುಲ್ಕಾಜೆ ಮಾಡ ನಿವಾಸಿ ಡೀಕಮ್ಮ ಎಂಬವರು ತನ್ನ 3.70 ಎಕರೆ ಕೃಷಿ ಜಮೀನಿಗೆ 3 ಲಕ್ಷ ರೂ ಸಾಲ ಪಡೆದಿದ್ದರು. ಆದರೆ ಬ್ಯಾಂಕ್ ನವರು 3 ಲಕ್ಷವನ್ನು 19 ಲಕ್ಷ ಎಂದು ನಮೂದಿಸಿ ನನಗೆ ವಂಚನೆ ಮಾಡಿದ್ದಾರೆ, ನನಗೆ ನ್ಯಾಯ ಒದಗಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು, ನನಗೆ ಸ್ಥಳೀಯರು ಸಹಕಾರಿ ಸಂಘದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಸಹಕಾರಿ ಇಲಾಖೆಗೆ ಸೂಚಿಸಿದ್ದೇನೆ. ತನಿಖೆ ನಡೆಯುತ್ತಿದೆ, ವರದಿ ಬಳಿಕ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಮನವಿಗೆ ಸ್ಪಂದಿಸಿದ ಸಚಿವ ಸುನಿಲ್ ಕುಮಾರ್, ಈಗಾಗಲೇ ತನಿಖೆಯಲ್ಲಿರುವುದರಿಂದ ಮಾಹಿತಿ ಪಡೆದು ವಂಚನೆಗೊಳಗಾದವರಿಗೆ ನ್ಯಾಯ ಒದಗಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.