ಬಂಟ್ವಾಳ: ಶಿವಮೊಗ್ಗದಲ್ಲಿ ಬಂಧನವಾಗಿ ಪೊಲೀಸ್ ವಶದಲ್ಲಿರುವ ಶಂಕಿತ ಉಗ್ರ ಮಾಝ್ ಅಹ್ಮದ್ ನನ್ನು ಬುಧವಾರ ಪೊಲೀಸರು ಬಂಟ್ವಾಳಕ್ಕೆ ಕರೆ ತಂದಿದ್ದಾರೆ.
ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಶಂಕಿತ ಉಗ್ರನನ್ನು ಬಂಟ್ವಾಳಕ್ಕೆ ಕರೆ ತಂದಿದ್ದು, ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರ ಸಮೀಪದ ಸಿಂಥಣಿ ಕಟ್ಟೆ ಅಗ್ರಹಾರ ಬಳಿ ಮಹಜರು ನಡೆಸುತ್ತಿದ್ದಾರೆ.
ಮಹಜರು ವೇಳೆ ಶ್ವಾನ ದಳ ಮತ್ತು ಬಾಂಬ್ ಸ್ಜ್ವಾಡ್ ಮೂಲಕ ಪರಿಶೀಲನೆ ನಡೆಸಲಾಗಿದ್ದು, ಈ ಜಾಗಗಳಲ್ಲಿ ಬಾಂಬ್ ಬ್ಲಾಸ್ಟಿಂಗ್ ರಿಹರ್ಸಲ್ ಮಾಡುತ್ತಿದ್ದ ಎನ್ನಲಾಗಿದೆ.
ನಿರ್ಜನಪ್ರದೇಶದಲ್ಲಿ ರಿಹರ್ಸಲ್..!
ಸರಪಾಡಿ ಗ್ರಾಮದ ಅಗ್ರಹಾರ , ಸಿಂಥಾಣಿಕಟ್ಟೆ, ನಾವೂರದಲ್ಲಿ ಬಾಂಬ್ ರಿಹರ್ಸ್ ಲ್ ನಡೆಸುತ್ತಿದ್ದ ಸ್ಥಳಗಳಲ್ಲಿ ಆರೋಪಿಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಗಿದೆ.
ಸರಪಾಡಿ ಗ್ರಾಮದ ಮತ್ತಕುದುರು ಎಂಬ ಸ್ಥಳಕ್ಕೆ ಸಿಂಥಾಣಿಕಟ್ಟೆ ಎಂಬಲ್ಲಿಂದ ನದಿ ದಾಟಿ ಹೋಗಬೇಕು.ಮತ್ತಕುದುರು ಎಂಬ ಸ್ಥಳ ಹೆಚ್ಚಾಗಿ ದನ ಮೇಯುವ ಜಾಗವಾಗಿದ್ದು, ನದಿ ತಟವೂ ಆಗಿದ್ದು ದ್ವೀಪದಂತಿದೆ. ಆ ಸ್ಥಳದಲ್ಲಿ ಜನಸಂಚಾರವೂ ಇಲ್ಲದೆ ನಿರ್ಜನವಾಗಿರುತ್ತದೆ ಜನವಸತಿ ಇಲ್ಲದ ಇಂತಹಾ ಸ್ಥಳ ದಲ್ಲಿ ಬಾಂಬ್ ರಿಹರ್ಸಲ್ ನಡೆಸಲಾಗುತ್ತಿತ್ತು ಎಂಬ ಮಾತುಗಳು ಇದೀಗ ಕೇಳಿಬರುತ್ತಿದೆ. ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಭಯೋತ್ಪಾದಕ ಕೃತ್ಯದಲ್ಲಿ ಬಂಟ್ವಾಳ ವೂ ತಗಲಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಸ್ಥಳ ಮಹಜರು ನಡೆದದ್ದು ಹೀಗೆ..!
ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಸ್ಥಳಮಹಜರು ನಡೆಸಿದ್ದಾರೆ. ಶಂಕಿತ ಉಗ್ರ ತೋರಿಸಿದ ಸ್ಥಳದಲ್ಲಿ ಮೊದಲ ಹಂತದಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಪರಿಶೀಲನೆ ನಡೆಸಿದ್ದು ಬಳಿಕ ಶಂಕಿತ ಉಗ್ರನನ್ನು ಸ್ಥಳಕ್ಕೆ ಕೊಂಡೊಯ್ದು ಮಹಜರು ನಡೆಸಲಾಗಿದ್ದು, ಮಹತ್ವದ ಮಾಹಿತಿಗಳನ್ನು ಕಲೆಹಾಕಲಾಗಿದೆ ಎಂದು ತಿಳಿದು ಬಂದಿದೆ.