ಬಂಟ್ವಾಳ: ಪಂಜಿಕಲ್ಲು ಗ್ರಾಮದಲ್ಲಿ ಮೂರು ಮಂದಿ ಕಾರ್ಮಿಕರನ್ನು ಬಲಿತೆಗೆದುಕೊಂಡ ಮುಕ್ಕುಡದ ಗುಡ್ಡ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ. ಗುಡ್ಡದ ಮೇಲ್ಭಾಗದ ರಸ್ತೆಯಲ್ಲಿ ಸುಮಾರು 500 ಮೀಟರ್ ನಷ್ಟು ಸ್ಥಳ ನೆಲದಲ್ಲೇ ಇಬ್ಬಾಗವಾದ ಸ್ಥಿತಿಯಲ್ಲಿದ್ದು, ಅಪಾಯ ಎದುರಾಗುವ ಎಲ್ಲಾ ಸಾಧ್ಯತೆ ಕಂಡುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗುಡ್ಡದ ಹತ್ತಿರ ಯಾರೂ ತೆರಳದಂತೆ ಕಂದಾಯ ಇಲಾಖೆ ಕ್ರಮಕೈಗೊಂಡಿದೆ.
ಘಟನೆ ಹಿನ್ನೆಲೆ
ಹೆನ್ರಿ ಕಾರ್ಲೋ ಎಂಬವರಿಗೆ ಸೇರಿದ ರಬ್ಬರ್ ತೋಟದ ಶೆಡ್ ರೀತಿಯ ಮನೆ ನಿರ್ಮಾಣವಾಗಿದ್ದು, ಇದರಲ್ಲಿ ಕೇರಳ ಮೂಲದ ಐವರು ವಾಸ್ತವ್ಯಿದ್ದರು. ಈ ಪೈಕಿ ಓರ್ವರು ಮನೆಯ ಹೊರಗಿದ್ದ ಸಂದರ್ಭ ಭೂಕುಸಿತ ಉಂಟಾಗಿದೆ. ಕೂಡಲೇ ಸ್ಥಳೀಯರು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ, ಒಬ್ಬರನ್ನು ರಕ್ಷಿಸಿದ್ದು, ಆಂಬುಲೆನ್ಸ್ ನಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನೂ ಮೂವರು ಅದರಡಿ ಸಿಲುಕಿದ್ದರು. ಸುದ್ದಿ ತಿಳಿದ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕದಳ, ಎನ್.ಡಿ.ಆರ್.ಎಫ್ ದಳ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು ಜೆಸಿಬಿ ಹಾಗೂ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರ ರಕ್ಷಣಾ ಕಾರ್ಯನಡೆಸಲಾಯಿತು. ಆದರೆ ನಾಲ್ವರ ಪೈಕಿ ಮೂವರು ಮೃತರಾಗಿದ್ದಾರೆ.
ಮನೆಮಾಲಕಿ ವಿರುದ್ಧ ಪ್ರಕರಣ
ಘಟನೆಯ ಕುರಿತಾಗಿ ಪಂಜಿಕಲ್ಲು ಗ್ರಾಮಕರಣಿಕ ಕುಮಾರ್ ನೀಡಿದ ದೂರಿನಂತೆ ಮನೆಮಾಲಕಿಬೆನೆಡಿಕ್ಟ್ ಕಾರ್ಲೋ ಎಂಬವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಜು.5 ರಂದು ಬೆನೆಡಿಕ್ಟ್ ಕಾರ್ಲೋ ಎಂಬವರು ಗ್ರಾಮಕರಣಿಕರಿಗೆ ಕರೆ ಮಾಡಿ ಗುಡ್ಡ ಕುಸಿಯುವ ಬಗ್ಗೆ ದೂರು ನೀಡಿದ್ದರು, ಅದರಂತೆ ಸ್ಥಳಕ್ಕೆ ಆಗಮಿಸಿದ್ದ ಗ್ರಾಮಕರಣಿಕ ಕುಮಾರ್ ಅವರು, ಪರಿಶೀಲನೆ ನಡೆಸಿದಾಗ, ಎತ್ತರದ ಧರೆಯು ಕುಸಿದು ಮನೆಯ ಅಂಗಳಕ್ಕೆ ಬಿದ್ದು ಅಡಿಕೆ ಒಣಗಿಸಲು ಮಾಡಿದ್ದ ಟರ್ಪಾಲಿನಿಂದ ರಚಿಸಿದ ಶೆಡ್ ಜಖಂ ಗೊಂಡಿದ್ದು. ಅಂಗಳದ ಬದಿಯಲ್ಲಿದ್ದ ಬೆನಡಿಕ್ಟ ಕಾರ್ಲೋ ರವರ ಹಂಚು ಛಾವಣಿಯ ಹಳೆಯ ಮನೆಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ಕೆಲಸದವರು ವಾಸ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ ಪಿರ್ಯಾದಿದಾರರು ಎತ್ತರದ ಧರೆಯನ್ನು ಪರಿಶೀಲಿಸಲಾಗಿ ಅದು ಇನ್ನೂ ಸ್ವಲ್ಪ ಸ್ವಲ್ಪವೇ ಕುಸಿಯುತ್ತಲೇ ಇದ್ದುದರಿಂದ ಹಳೆ ಮನೆಯಲ್ಲಿ ವಾಸವಾಗಿರುವ ರಬ್ಬರ್ ಟ್ಯಾಪಿಂಗ್ ಕಾರ್ಮಿಕರನ್ನು ತೆರವುಗೊಳಿಸುವಂತೆ ಮೌಖಿಕ ಸೂಚನೆ ನೀಡಿದ್ದರು.ಜು.6 ರಂದೂ ಗ್ರಾಮಕರಣಿಕ ಕುಮಾರ್ ಟಿ.ಸಿ. ಯವರು, ಬೆನಡಿಕ್ಟ್ ಕಾರ್ಲೋರವರಿಗೆ ಪೋನು ಮಾಡಿ ಮಳೆ ಮತ್ತೆ ಜೋರಾಗಿ ಸುರಿಯುತ್ತಿದೆ ಜಾಗ್ರತೆ ವಹಿಸಿ ಕಾರ್ಮಿಕರನ್ನು ತೆರವುಗೊಳಿಸಿ ಎಂದು ಹೇಳಿದ್ದರೂ, ಮಾಲಕಿ ಕಾರ್ಮಿಕರನ್ನು ಮನೆಯಿಂದ ತೆರವುಗೊಳಿಸದೇ ಇರುವುದೇ ದುರಂತಕ್ಕೆ ಕಾರಣ ಎಂದು ಕುಮಾರ್ ಟಿ.ಸಿ.ಯವರು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ವಿಎ ಸುಳ್ಳು ಹೇಳುತ್ತಿದ್ದಾರೆ : ಮನೆಮಾಲಕಿ
ಮನೆಮಾಲಕಿ ಹೇಳುವಂತೆ ಕಳೆದ ಜು.5 ರಂದೇ ಗುಡ್ಡ ಕುಸಿಯುವ ಕುರಿತಾಗಿ ಗ್ರಾಮಕರಣಿಕರಿಗೆ ಮಾಹಿತಿ ನೀಡಿದ್ದರೂ, ಆದರೆ ಗ್ರಾಮಕರಣಿಕರು ಈ ಕುರಿತಾಗಿ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ. ಕಾರ್ಮಿಕರು ವಾಸ್ತವ್ಯವಿದ್ಧ ಗುಡ್ಡ ಕುಸಿಯುವ ಯಾವ ಪರಿಕಲ್ಪನೆಯೂ ಇರಲಿಲ, ದುರ್ಘಟನೆ ನಡೆಯುವವರೆಗೂ ಯಾರೊಬ್ಬರೂ ಮನೆ ಖಾಲಿ ಮಾಡುವಂತೆ ಹೇಳಿಲ್ಲ, ವಿಎ ಸುಳ್ಳು ಹೇಳುತ್ತಿದ್ದು, ನನ್ನ ವಿರುದ್ಧವೇ ಸುಳ್ಳುದೂರು ನೀಡಿದ್ದಾರೆ , ಈ ದಿನ ಬೆಳಿಗ್ಗೆ ಶಾಸಕರು, ಸಚಿವರು ಬಂದ ಸಮಯದಲ್ಲೂ ನನಗೆ ಇಲ್ಲಿಗೆ ಬರಲು ಬಿಡಲಿಲ್ಲ, ನಾನೇ ಶಾಸಕರ ಬಳಿ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಮನೆಮಾಲಕಿ ಬೆನೆಡಿಕ್ಟ್ ಕಾರ್ಲೋ ಅವರು ಮಾಧ್ಯಮಗಳ ಮುಂದೆ ತಮ್ಮ ನೋವು ಹೇಳಿಕೊಂಡಿದ್ದಾರೆ.