ಮೈಸೂರು: ಅರ್ಹ ಸಾರ್ವಜನಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಗಳನ್ನು ಸಕಾಲದಲ್ಲಿ ನೀಡಿ. ಇದರಿಂದ ಬಡವರಿಗೆ ಉಚಿತ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿ ಜನರ ಆರೋಗ್ಯ ದೃಷ್ಟಿಯಿಂದಾಗಿ ಜನರಿಗೆ ಆರೋಗ್ಯ ಕಾರ್ಡ್ಗಳನ್ನು ಆದಷ್ಟು ಬೇಗ ವಿತರಣೆ ಮಾಡಬೇಕು. ಮೂರರಿಂದ ನಾಲ್ಕು ತಿಂಗಳು ಎಲ್ಲಾ ಮಂಗಳವಾರದಂದು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಮೇಳವನ್ನು ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ರಸ್ತೆಯಲ್ಲಿನ ನೀರು ಗಿಡಗಳಿಗೆ ಹೋಗುವಂತೆ ಸರಿಯಾದ ಮಾರ್ಗ ಮಾಡಬೇಕು. ಜನರಿಗೆ ಸರಿಯಾಗಿ ನೀರು ಸರಬರಾಜು ಮಾಡುವ ಕೆಲಸ ಮಾಡಬೇಕು. ಕಸ ತುಂಬಿರುವ ಪ್ರದೇಶವನ್ನು ಸ್ವಚ್ಚ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಸಡಕ್ ಯೋಜನೆ ಅಧಿಕಾರಿಗಳು ಆದಷ್ಟು ಬೇಗ ರಸ್ತೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು. ಗಿಡ ಮರಗಳನ್ನು ಬೆಳೆದರೆ ಅದರ ಪ್ರತಿಫಲವನ್ನು ನಾವು ಪಡೆಯುತ್ತೇವೆ. ಹೊಸದಾಗಿ ನಿರ್ಮಾಣ ವಾಗುವಂತಹ ರಿಂಗ್ ರಸ್ತೆಯ ಬದಿಯಲ್ಲಿ ಗಿಡಗಳನ್ನು ನೆಡುವಂತೆ ಸೂಚಿಸಿದ ಅವರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಕ್ಕಳಿಗೆ ಹತ್ತಿರ ವಾಗುವಂತಹ ಸ್ಥಳಗಳಲ್ಲಿ ಹಾಸ್ಟೆಲ್ ನಿರ್ಮಿಸಿ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಬಗಾದಿ ಗೌತಮ್, ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷಿö್ಮಕಾಂತರೆಡ್ಡಿ ಅವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.