ಬಂಟ್ವಾಳ: ಯುವಕನೋರ್ವ ಮಹಿಳೆಯೋರ್ವರಿಗೆ ರಸ್ತೆ ಬದಿಯಲ್ಲಿಯೇ ಚೂರಿಯಿಂದ ಇರಿದು ಕೊಲೆಗೈದ ಘಟನೆ ನೆಟ್ಲ ಮುಡ್ನೂರು ಗ್ರಾಮದ ನೇರಳಕಟ್ಟೆ ಜಂಕ್ಷನ್ ನಲ್ಲಿ ಸೋಮವಾರ ನಡೆದಿದೆ.
ಅನಂತಾಡಿ ದೇವಿನಗರ ನಿವಾಸಿ ಸಂಜೀವ ರವರ ಪತ್ನಿ ಶಕುಂತಲಾ(೩೫ ವ.) ರವರು ಮೃತಪಟ್ಟ ಮಹಿಳೆ.
ಘಟನೆ ವಿವರ: ಅನಂತಾಡಿ ದೇವಿನಗರ ನಿವಾಸಿಯಾಗಿರುವ ಶಕುಂತಳಾ ಅವರು, ಪುತ್ತೂರಿನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು ಇಂದು ಅಪರಾಹ್ನ ತನ್ನ ದ್ವಿಚಕ್ರ ವಾಹನದಲ್ಲಿ ಪುತ್ತೂರಿಗೆ ತೆರಳುವ ದಾರಿ ಮಧ್ಯೆ ಈ ಘಟನೆ ಸಂಭವಿಸಿದೆ. ಕೃತ್ಯವೆಸಗಿದ ಆರೋಪಿಯನ್ನು ಪುತ್ತೂರು ನಿವಾಸಿ ರಿಕ್ಷಾ ಚಾಲಕ ಶ್ರೀಧರ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಿಕ್ಷಾದಲ್ಲಿ ಬಂದ ಶ್ರೀಧರ ಮಹಿಳೆಯ ಬಳಿ ಕೆಲ ನಿಮಿಷ ಮಾತುಕತೆ ನಡೆಸಿದ್ದು, ಮಾತಿನ ಚಕಮಕಿ ತೀವ್ರಗೊಂಡು ಶ್ರೀಧರ ಚೂರಿಯಿಂದ ಶಕುಂತಳಾಗೆ ತಿವಿದು , ಪುತ್ತೂರು ಕಡೆಗೆ ಪರಾರಿಯಾಗಿದ್ದ. ಇದೇ ವೇಳೆ ಘಟನೆಯನ್ನು ಕಂಡ ಖಾಸಗಿ ಬಸ್ ನ ಚಾಲಕ. ತನ್ನ ಮೊಬೈಲ್ ನಲ್ಲಿ ರಿಕ್ಷಾವನ್ನು ಚಿತ್ರೀಕರಿಸಿ ಪೊಲೀಸರಿಗೆ ಒಪ್ಪಿಸಿದ್ದಾನೆ. ಈತನ್ಮಧ್ಯೆ ಗಂಭೀರ ಗಾಯಗೊಂಡ ಶಕುಂತಳಾರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಈ ಹಿಂದೆಯೂ ಶ್ರೀಧರ ಶಕುಂತಳಾ ಗೆ ಬೆದರಿಕೆ ಒಡ್ಡಿದ್ದ ಕುರಿತಾಗಿ ವಿಟ್ಲ ಠಾಣೆಗೆ ದೂರುನೀಡಿದ್ದರು, ಪೊಲೀಸರು ಶ್ರೀಧರಗೆ ಎಚ್ಚರಿಕೆ ನೀಡಿದ್ದರು. ಇದೀಗ ಅದೇ ದ್ವೇಷದಿಂದ ಕೊಲೆ ನಡೆಸಿದ್ದಾನೆ ಎಂದು ಮೃತ ಶಕುಂತಳಾ ರ ಪತಿ ಸಂಜೀವ ವಿಟ್ಲಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಪರಿಶೀಲನೆ ನಡೆಸಿದೆ.