ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2022-23ರ ಚೆಸ್ ಪಂದ್ಯಾಟವು ಪೊಳಲಿ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಉದ್ಘಾಟಿಸಿ ಮಾತನಾಡಿ “ಚೆಸ್ ಎಂಬುದು ಮಕ್ಕಳನ್ನು ಮಾನಸಿಕವಾಗಿ ಶಿಸ್ತು ಬದ್ಧವಾಗಿ ಮಾಡುವ ಕ್ರೀಡೆ, ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿಭೆಗಳನ್ನು ತೋರಿಸಿ ಮುಂದೆ ರಾಷ್ಟ್ರಮಟ್ಟದಲ್ಲಿ ಬೆಳಗಬೇಕು ಎಂದರು.
ಶಾಲಾ ಕಾಲೇಜುಗಳ ವಾರ್ಷಿಕೋತ್ಸವ, ಕ್ರೀಡೋತ್ಸವ ಅಥವಾ ಇನ್ನಿತರ ಯಾವುದೇ ಕಾರ್ಯಕ್ರಮಗಳಲ್ಲಿ ಭಾಷಣವನ್ನು ಸೀಮಿತಗೊಳಿಸಿ ಎಂದು ಶಾಸಕರು ಸೂಚನೆ ನೀಡಿದರು. ಅಧ್ಯಕ್ಷತೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ ವಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಪಿ, , ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಕರಾದ ವಿಷ್ಣುಹೆಬ್ಬಾರ್ ಮತ್ತು ರವಿಶಂಕರ್, ತಾಲೂಕು ದೈಹಿಕ ಶಿಕ್ಷಕರ ಗ್ರೇಟ್ ಸಂಘದ ಅಧ್ಯಕ್ಷ ಜತ್ತಪ್ಪ ಗೌಡ, ಬಂಟ್ವಾಳ ತಾಲೂಕು ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀಮತಿ ರಂಜಿತಾ, ತಾಲೂಕಿನ ಶಿಕ್ಷಣ ಸಂಯೋಜಕರಾಗಿರುವ ಸುಜಾತ ಮತ್ತು ಪ್ರತಿಮಾ, ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ವೆಂಕಟೇಶ ನಾವುಡ, ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯಸ್ಥ ರಾಧಾಕೃಷ್ಣ ಭಟ್ ಕೆ ಸ್ವಾಗತಿಸಿದರು, ಜಾನೇಟ್ ಲೋಬೋ ನಿರೂಪಿಸಿದರು. ಶಿಕ್ಷಕಿ ಉಮಾ ವಂದಿಸಿದರು.