ಬಂಟ್ವಾಳ: ಏರ್ಯರು ಕೃಷಿ ಮತ್ತು ಸಾಹಿತ್ಯವನ್ನು ತನ್ನ ಬದುಕಿನ ಜೀವಧಾತು ಆಗಿ ರೂಢಿಸಿಕೊಂಡವರು. ಸಾಹಿತ್ಯದ ಜೊತೆಯಲ್ಲಿ ಭಾವನಾತ್ಮಕತೆ ಮತ್ತು ವಿಚಾರಗಳನ್ನು ಸೇರಿಸಿಕೊಂಡು, ಮನುಷ್ಯಪ್ರೀತಿಯನ್ನು ತೋರಿದ ಮಾನವತಾವಾದಿಯಾಗಿದ್ದರು ಎಂದು ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಹೇಳಿದರು.
ಏರ್ಯ ಆಳ್ವ ಫೌಂಡೇಷನ್ ಆಶ್ರಯದಲ್ಲಿಏರ್ಯಬೀಡಿನಲ್ಲಿ ಭಾನುವಾರ ನಡೆದ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ
ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ “ಏರ್ಯ ಸಾಹಿತ್ಯ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ಕಾಲಘಟ್ಟದಲ್ಲಿ ಮನುಷ್ಯ ಸಂಬಂಧಗಳನ್ನು ಇಟ್ಟುಕೊಂಡು ಬದುಕುವುದು ಕಷ್ಟ, ಆದರೆ ಏರ್ಯರು ಅಂತಹಾ ಬದುಕನ್ನು ಸಾಧಿಸಿದ್ದಾರೆ ಎಂದರು.
ಓದುವಿಕೆ ಹಾಗೂ ಜ್ಞಾನಶೋಧನೆ ಕಡಿಮೆಯಾಗುತ್ತಿರುವ ಸನ್ನಿವೇಶದಲ್ಲಿ ನಾವೆಲ್ಲರೂ ಬೌದ್ಧಿಕವಾಗಿ ಅನಾಥರಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಎಲ್ಲಾ ಬಗೆಯ ಸಾಹಿತ್ಯ ಪ್ರಕಾರಗಳ ಓದು ಏರ್ಯ ಅವರನ್ನು ಎತ್ತರಕ್ಕೆ ಬೆಳೆಸಿದೆ. ಅವರು ಬರೆದುದನ್ನು ಬಾಳಿ ತೋರಿಸಿದವರು ಎಂದರು.
ಏರ್ಯರ ಶತಮಾನ ಆಚರಣೆಗೆ ಇನ್ನು ಕೆಲವೇ ವರ್ಷಗಳಿದ್ದು ಅದಕ್ಕೂಮೊದಲು ಏರ್ಯರ ಸಮಗ್ರ ಸಾಹಿತ್ಯವನ್ನು ಪ್ರಕಟಿಸುವ ಕಾರ್ಯ ಏರ್ಯರ ಅಭಿಮಾನಿ ಹಾಗೂ ಶಿಷ್ಯವರ್ಗದಿಂದ ಆಗಬೇಕಿದೆ, ಏರ್ಯರ ಋಣವನ್ನು ತೀರಿಸಲು ಎಲ್ಲರೂ ಸಂಕಲ್ಪತೊಡಬೇಕಾಗಿದೆ ಎಂದರು.
ಬಳಿಕ ಸಂಜೆಯ ವರೆಗೂ ನಡೆದ ಕಾರ್ಯಕ್ರಮದಲ್ಲಿ ಏರ್ಯರ ವಿವಿಧ ಕೃತಿಗಳ ಕುರಿತಾಗಿ ಡಾ.ತಾಳ್ತಜೆ ವಸಂತ್ ಕುಮಾರ್, ಡಾ.ನಾ.ದಾಮೋದರ ಶೆಟ್ಟಿ, ಪ್ರೊ.ಪಿ.ಕೃಷ್ಣಮೂರ್ತಿ, ಡಾ.ಯು.ಮಹೇಶ್ವರಿ, ಡಾ.ತುಕಾರಾಮ ಪೂಜಾರಿ, ಡಾ.ಸತ್ಯನಾರಾಯಣ ಮಲ್ಲಿಪಟ್ಣ, ಡಾ.ಆರ್.ನರಸಿಂಹ ಮೂರ್ತಿ, ಡಾ.ಅರುಣ ಕುಮಾರ್ ಎಸ್.ಆರ್ ವಿಶ್ಲೇಷಣೆ ನಡೆಸಿದರು.
ಕಿಶೋರ್ ಪೆರ್ಲ ಅವರು ಏರ್ಯರ ಕವನಗಳನ್ನು ವಾಚಿಸಿದರು. ಏರ್ಯ ಬಾಲಕೃಷ್ಣ ಹೆಗ್ಡೆ ಸ್ವಾಗತಿಸಿದರು. ಆನಂದಿ ಆಳ್ವ, ಸುಖದಾ ಬಾಲಕೃಷ್ಣ ಹೆಗ್ಡೆ, ಭಕ್ತಿ ಹೆಗ್ಡೆ ಉಪಸ್ಥಿತರಿದ್ದರು.
ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್, ಕೇಶವ ಎಚ್ ಕಾರ್ಯಕ್ರಮ ನಿರೂಪಿಸಿದರು.