ಮಂಡ್ಯ, ಜೂ26: ರೈತರೊಬ್ಬರು ತನ್ನ ಮಗನಿಗೆ ಪಿಎಸ್ಐ ಕೆಲಸ ಕೊಡಿಸೋ ಆಸೆಯಿಂದ 30.25 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ವ್ಯಕ್ತಿ ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ನಿವಾಸಿ ನಿಂಗರಾಜು ಅವರು ತನಗೆ ವಂಚನೆ ಮಾಡಿದ ಕೋಲಾರ ಮೂಲದ ಜೆ.ಅಕ್ಷಯ್ ಅಲಿಯಾಸ್ ಮಂಜುನಾಥ್ ಎಂಬುವರ ವಿರುದ್ಧ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ, ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ, ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.
ನಿಂಗರಾಜು ಮಗ ಅರುಣ್ಕುಮಾರ್ ಕಳೆದ ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದ ವೇಳೆ ತಮಗೆ ಪರಿಚಯದ ಬಿಜೆಪಿ ಮುಖಂಡರೊಬ್ಬರ ಮೂಲಕ ವಂಚಕ ಮಂಜುನಾಥ್ ಪರಿಚಯವಾಗಿದ್ದನು. ಭೇಟಿ ವೇಳೆ ತಾನು ಸಿ.ಎಂ.ಬಸವರಾಜ ಬೊಮ್ಮಾಯಿ, ಬಿ.ವೈ.ವಿಜಯೇಂದ್ರ ಆಪ್ತ ಎಂದು ಹೇಳಿಕೊಂಡಿದ್ದನು. 40 ಲಕ್ಷ ರೂ. ಕೊಟ್ಟರೆ ನಿಮ್ಮ ಮಗನಿಗೆ ಪಿಎಸ್ಐ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದನು ಎಂದು ನಿಂಗರಾಜು ದೂರಿನಲ್ಲಿ ತಿಳಿಸಿದ್ದಾರೆ.38 ಲಕ್ಷ ರೂ. ಕೊಡುವುದಾಗಿ ಸಮ್ಮತಿಸಿ 30.25 ಲಕ್ಷ ರೂ.ಗಳನ್ನು ನೀಡಿದ್ದಾರೆ. ಇದರಲ್ಲಿ 18 ಲಕ್ಷ ರೂ.ಗಳನ್ನು ಆರ್ಟಿಜಿಎಸ್ ಮೂಲಕ ಹಾಗೂ ಉಳಿದ ಹಣವನ್ನು ನಗದು ರೂಪದಲ್ಲಿ ನೀಡಲಾಗಿದೆ. ದೂರು ನೀಡಿದರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕುಟುಂಬದವರು ಹೇಳುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಹಾಗೂ ಮಂಡ್ಯ ಎಎಸ್ಪಿಗೆ ನಿಂಗರಾಜು ದೂರು ನೀಡಿದ್ದು, ಎಫ್ಐಆರ್ ದಾಖಲು ಮಾಡದೇ ಮಂಜುನಾಥ್ ಕರೆಸಿ, ಮಾತನಾಡುವುದಾಗಿ ಪೊಲೀಸರು ಹೇಳುತ್ತಿದ್ದಾರೆ ಎಂದು ನಿಂಗರಾಜು ತಿಳಿಸಿದ್ದಾರೆ.
ನಿಂಗರಾಜು ಅವರು ಬಡ್ಡಿಗೆ ಸಾಲ ಮಾಡಿ, ಜತೆಗೆ ಒಂದೂವರೆ ಎಕರೆ ಜಮೀನು ಮಾರಿ ಹಣ ನೀಡಿದ್ದರು ಆದರೆ, ಆಯ್ಕೆ ಪಟ್ಟಿಯಲ್ಲಿ ಮಗನ ಹೆಸರೇ ಇರಲಿಲ್ಲ. ಆಗ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ವಂಚಕ ಅಕ್ಷಯ್ ಸಬೂಬು ಹೇಳುತ್ತಿದ್ದಾರೆ. ತನ್ನ ಹಾಗೂ ತನ್ನ ಮಗನ ಭವಿಷ್ಯವನ್ನು ಹಾಳು ಮಾಡಿದ ಅಕ್ಷಯ್ ವಿರುದ್ಧ ಕಾನೂನು ಕ್ರಮ ಕೈಗೊಂಡು ತಾನು ನೀಡಿರುವ ಹಣವನ್ನು ವಾಪಸ್ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.