ಉಳ್ಳಾಲ: ದುಷ್ಕರ್ಮಿಯೊಬ್ಬ ಆಹಾರದಲ್ಲಿ ವಿಷ ಬೆರೆಸಿ ಸುಮಾರು 25 ನಾಯಿಗಳ ಮಾರಣ ಹೋಮ ನಡೆಸಿದ್ದಾನೆ. ಇನ್ನು, ಅದೇ ವಿಷಾಹಾರವನ್ನ ತಿಂದ ಹಸು ಕೂಡಾ ಸಾವನ್ನಪ್ಪಿದ್ದು, ಕೃತ್ಯ ಎಸಗಿರುವ ದುರುಳನನ್ನು ಬಂಧಿಸುವಂತೆ ಬಜರಂಗದಳ ಆಗ್ರಹಿಸಿದೆ.
ತಲಪಾಡಿಯ ಅಲಂಕಾರಗುಡ್ಡೆ, ಭಂಡಾರಮನೆ ಬಳಿ ನಿವಾಸಿ ಅಮಿತ್ ಎಂಬುವರ ಹಸು ಸಾವನ್ನಪ್ಪಿದೆ. ಸ್ಥಳೀಯ ನಿವಾಸಿ ಖಾದರ್ ಎಂಬಾತ ಕೃತ್ಯ ನಡೆಸಿದ್ದಾನೆಂದು ಅಮಿತ ಆರೋಪಿಸಿದ್ದಾರೆ. ಖಾದರ್ ಮೇಕೆಗಳನ್ನ ಸಾಕುತ್ತಿದ್ದು ಇತ್ತೀಚಿಗೆ ಆತನ ಮೇಕೆ ಮೇಲೆ ನಾಯಿಗಳು ದಾಳಿ ನಡೆಸಿ ಕೊಂದಿದ್ದವು. ಇದರಿಂದ ರೊಚ್ಚಿಗೆದ್ದ ಖಾದರ್ ಸುತ್ತಮುತ್ತಲ ಬೀದಿ ಮತ್ತು ಸಾಕು ನಾಯಿಗಳಿಗೆ ವಿಷಾಹಾರ ಉನಿಸಿ ಸುಮಾರು 25 ರಷ್ಟು ನಾಯಿಗಳ ಕೊಂದಿದ್ದಾನೆ.
ಅಲ್ಲದೇ, ನಾಯಿಗಳಿಗೆ ವಿಷಪ್ರಾಷಣ ಮಾಡಿದ ಬಗ್ಗೆ ಖಾದರ್ ಬಹಿರಂಗವಾಗಿ ಜನರಲ್ಲಿ ಹೇಳಿದ್ದಾಗಿ ಅಮಿತ್ ಆರೋಪಿಸಿದ್ದಾರೆ. ಇಂದು ಕೂಡ ನಾಯಿಗಳು ವಿಷಾಹಾರ ಸೇವಿಸಿ ವಿಲ ವಿಲ ಒದ್ದಾಡುತ್ತಿರುವ ದೃಶ್ಯ ಮಾಧ್ಯಮದ ಕ್ಯಾಮೆರಾಕ್ಕೆ ಸಿಕ್ಕಿವೆ. ಅಮಿತ್ ಅವರ ಹಸು ಹುಲ್ಲು ಮೇಯಲು ಹೋಗಿ ಮನೆ ಪಕ್ಕದ ದೇವಸ್ಥಾನದ ಬಳಿ ಅಕಾಲಿಕವಾಗಿ ಸಾವನ್ನಪ್ಪಿದೆ. ಪರಿಶೀಲನೆ ನಡೆಸಿದ ಪಶು ವೈದ್ಯರು ಹಸು ವಿಷಾಹಾರ ಸೇವಿಸಿ ಸತ್ತಿರುವುದಾಗಿ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಭೇಟಿ ನೀಡಿದ್ದು, ಮೃತಪಟ್ಟ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿ ಕೃತ್ಯ ಎಸಗಿದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ತಲಪಾಡಿ ಗ್ರಾ.ಪಂ ಪಿಡಿಒ ಮತ್ತು ಉಳ್ಳಾಲ ಪೊಲೀಸ್ ಠಾಣೆಯ ಠಾಣಾಧಿಕಾರಿಯಲ್ಲಿ ಆಗ್ರಹಿಸಿದ್ದಾರೆ.