ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುದ್ದುಪದವು ಎಂಬಲ್ಲಿ ವ್ಯಕ್ತಿಯೋರ್ವನ ಹಣದಾಸೆಗೆ ಹಲವು ಬಾವಿಗಳು ಕಲುಷಿತಗೊಂಡಿವೆ.
ಕುದ್ದುಪದವು ನಿವಾಸಿ ಗೋಪಾಲ ಪಾಟಾಳಿ ಎಂಬ ವ್ಯಕ್ತಿಯು ಹಣದಾಸೆಗೆ ಕೇರಳದ ಆಸ್ಪತ್ರೆಗಳ ಶೌಚಾಲಯಗಳ ದ್ರವತ್ಯಾಜ್ಯ ಗಳನ್ನು ವಿಲೇವಾರಿ ಮಾಡಿ ಕೃಷಿಕರ ನೀರಿನ ಮೂಲವನ್ನು ಮಲಿನ ಮಾಡುತ್ತಿದ್ದ.
ಬಂಟ್ವಾಳ ತಾಲೂಕಿನ ಕುದ್ದುಪದವು ಎಂಬಲ್ಲಿ ಈ ತ್ಯಾಜ್ಯ ದಂಧೆ ಬೆಳಕಿಗೆ ಬಂದಿದೆ. ದ್ರವ ತ್ಯಾಜ್ಯವನ್ನು ತಂದು ರಸ್ತೆ ಬದಿ ಹಾಗೂ ನಿರ್ಜನ ಪ್ರದೇಶದಲ್ಲಿ ದಂಧೆಕೋರರು ಸುರಿಯುತ್ತಿದ್ದರು. ಇದರಿಂದ ಊರು ತುಂಬಾ ದುರ್ನಾತ ಹೊಡೆಯುತ್ತಿತ್ತು. ಆರಂಭದಲ್ಲಿ ದುರ್ನಾತಕ್ಕೆ ಕಾರಣವೇನು ಎಂದು ತಿಳಿಯದೆ ಜನ ಕಂಗಾಲಾಗಿದ್ದರು.
ಕೊನೆಗೂ ಕೃಷಿಕರ ಬಾವಿಗಳಿಗೆ, ಹಳ್ಳಗಳಿಗೆ ಗೋಪಾಲ ಪಾಟಾಳಿ ಎಂಬಾತ ದ್ರವ ತ್ಯಾಜ್ಯವನ್ನು ಬಿಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ಈ ಹಿಂದೆ ಹಲವು ಬಾರಿ ತ್ಯಾಜ್ಯ ಸುರಿಯುವ ಟ್ಯಾಂಕರ್ ಅನ್ನು ತಡೆದು ಪ್ರತಿಭಟಿಸಿ, ಚಾಲಕನನ್ನು ಪೊಲೀಸರಿಗೆ ಗ್ರಾಮಸ್ಥರು ಒಪ್ಪಿದ್ದರು. ಆದರೂ ಈ ದಂಧೆಮುಂದುವರಿಯುತ್ತಾಳೆ ಬಂದಿದೆ.
ಹೀಗಾಗಿ ಸ್ಥಳೀಯ ಪಂಚಾಯತ್ ಮತ್ತು ಪೊಲೀಸರಲ್ಲಿ ಗ್ರಾಮಸ್ಥರು ದೂರು ದಾಖಲಿಸಿದ್ದರು. ಗ್ರಾಮಸ್ಥರ ದೂರಿನ ಹಿನ್ನಲೆಯಲ್ಲಿ ತ್ಯಾಜ್ಯ ಸುರಿದ ಸ್ಥಳವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ಪರಿಶೀಲನೆ ವೇಳೆ ಕೆಲವು ಬಾವಿಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದೆ. ಗೋಪಾಲ್ ಪಾಟಾಳಿ ತ್ಯಾಜ್ಯ ಸುರಿಯಲು ಟ್ಯಾಂಕರ್ ಒಂದಕ್ಕೆ 10 ಸಾವಿರ ಪಡೆದುಕೊಳ್ಳುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿ ಪೊಲೀಸ್ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.