ಉಳ್ಳಾಲ: ರಾಜ್ಯದಾದ್ಯಂತ ಬಿಜೆಪಿ ಕೈಗೊಂಡಿರುವ ವಿಜಯ ಸಂಕಲ್ಪ ಯಾತ್ರೆ ಮಾ.13 ರಂದು ಮಂಗಳೂರು ಕ್ಷೇತ್ರವನ್ನು ತಲುಪಲಿದ್ದು, ಈ ನಿಟ್ಟಿನಲ್ಲಿ ಅಂದು ಬೆಳಿಗ್ಗೆ 10ಕ್ಕೆ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಿಂದ ಆರಂಭಗೊಳ್ಳಲಿರುವ ಯಾತ್ರೆ ತೊಕ್ಕೊಟ್ಟು ಬಸ್ ನಿಲ್ದಾಣದ ಮೈದಾನದಲ್ಲಿ ಸಮಾರ್ಪನೆಗೊಳ್ಳಲಿದೆ. ಯಾತ್ರೆಯಲ್ಲಿ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಶರ್ಮಾ ಸಹಿತ ರಾಜ್ಯದ ಮಾಜಿ ಸಚಿವ ಕೆ.ಹೆಚ್.ಈಶ್ವರಪ್ಪ, ಕಂದಾಯ ಸಚಿವ ಆರ್. ಅಶೋಕ್ ಸಹಿತ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.
ಅವರು ತೊಕ್ಕೊಟ್ಟುವಿನಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಅವರು ವಿಜಯಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದು, ಈಗಾಗಲೇ ಹಲವು ಜಿಲ್ಲೆಗಳನ್ನು ತಲುಪಿ ಇಂದು ಸಂಪಾಜೆಯಲ್ಲಿ ಜಿಲ್ಲೆಯ ಜನ ಅದ್ಧೂರಿಯಿಂದ ಸ್ವಾಗತಿಸಿದ್ದಾರೆ. ಮಾ.13 ರಂದು ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ತಲುಪಲಿರುವ ಯಾತ್ರೆಯನ್ನು 10,000ದಷ್ಟು ಕಾರ್ಯಕರ್ತರು ಸ್ವಾಗತಿಸಲಿದ್ದಾರೆ. ವೇದ ಘೋಷ, ಚೆಂಡೆ ವಾದ್ಯಗಳ ಜೊತೆಗೆ ಆಕರ್ಷಕ ಮೆರವಣಿಗೆ ತೊಕ್ಕೊಟ್ಟುವಿನವರೆಗೆ ನಡೆಯಲಿದೆ.
ರಥಯಾತ್ರೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಶರ್ಮಾ ಸೇರಿದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಸಚಿವರುಗಳಾದ ಕೆ.ಹೆಚ್ಈಶ್ವರಪ್ಪ, ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸುನಿಲ್ ಕುಮಾರ್, ವಿಧಾನಪರಿಷತ್ ಸದ್ಯ ಕೋಟ ಶ್ರೀನಿವಾಸ ಪೂಜಾರಿ ಮುಂತಾದವರು ಭಾಗವಹಿಸಲಿದ್ದಾರೆ. ಚುನಾವಣಾ ಪೂರ್ವತಯಾರಿಯ ದೃಷ್ಟಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಇದಾಗಿರುವುದರಿಂದ ದೇವದುರ್ಲಭ ಕಾರ್ಯಕರ್ತರುಗಳ ಭಾಗವಹಿಸುವಿಕೆ ಅಗತ್ಯವಾಗಿರುತ್ತದೆ. ಈಗಾಗಲೇ ಕ್ಷೇತ್ರದುದ್ದಕ್ಕೂ ಅಲಂಕಾರ ನಡೆಸುವ ಮೂಲಕ ಅಭೂತಪೂರ್ವ ಬೆಂಬಲವನ್ನು ಸೂಚಿಸಿದ್ದಾರೆ.
ಜಿಲ್ಲೆಯ 8 ಕ್ಷೇತ್ರದಲ್ಲಿಯೂ ಬಿಜೆಪಿ ಜಯಭೇರಿ ಬಾರಿಸುವ ಉದ್ದೇಶವಿದ್ದು, ಈ ನಿಟ್ಟಿನಲ್ಲಿ ಕಳೆದ ಬಾರಿ ಕಳೆದುಕೊಂಡ ಮಂಗಳೂರು ಕ್ಷೇತ್ರದ ಸ್ಥಾನವನ್ನು ಪಡೆದುಕೊಳ್ಳುವ ಸಲುವಾಗಿ ಯಾತ್ರೆ ಅದ್ಧೂರಿಯಾಗಿ ಜರಗಲಿದೆ .ಮಂಗಳೂರು ಕ್ಷೇತ್ರದಿಂದ ಎಸ್ ಡಿಪಿಐ ಅಭ್ಯರ್ಥಿಗೆ ಬಿಜೆಪಿ ಯಾವುದೇ ಬೆಂಬಲವನ್ನು ನೀಡಿಲ್ಲ. ಕಡುವಿರೋಧಿ ಎಸ್ ಡಿಪಿಐ ಗೆ ಬೆಂಬಲಿಸುವ ಅವಶ್ಯಕತೆಯಿಲ್ಲ.ಫಂಡಿಂಗ್ ಪಾರ್ಟಿ ಬಿಜೆಪಿಯಲ್ಲ, ಕಾರ್ಯಕರ್ತರ ಶಕ್ತಿಯೇ ಪಕ್ಷವಾಗಿದೆ. ಕೋಮುವಾದಿ ಪಕ್ಷ ಎಸ್ ಡಿಪಿಐಗೆ ಬಿಜೆಪಿ ಜತೆಗೆ ಸಂಬಂಧವೇ ಇಲ್ಲ. ಕಾಂಗ್ರೆಸ್ -ಎಸ್ ಡಿಪಿಐ ಎರಡೂ ವಿರೋಧಿಗಳೇ, ರಾಜಕೀಯವಾಗಿ ಬಿಜೆಪಿ ಗೆಲ್ಲಲು ಯಾರ ಭಿಕ್ಷೆಯೂ ಅಗತ್ಯವಿಲ್ಲ. ಉಳ್ಳಾಲ ನಗರಸಭೆಯಲ್ಲಿ ಎಸ್ ಡಿಪಿಐ-ಕಾಂಗ್ರೆಸ್ ಮೈತ್ರಿಯಾಗಿ ಸ್ಥಾಯಿಸಮಿತಿಯನ್ನು ನೇಮಿಸಿದೆ. ಇಲ್ಲಿಯೇ ಸ್ಥಳೀಯ ಶಾಸಕರ ಮುಖವಾಡ ಕಳಚಿಬೀಳುತ್ತದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂಪಲ ಮಾತನಾಡಿ, ನಾಲ್ಕು ತಂಡಗಳಾಗಿ ವಿಜಯ ಸಂಕಲ್ಪ ಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದೆ. ಕರ್ನಾಟಕದ ಮತದಾರರ ಅಭುತಪೂರ್ವ ಬೆಂಬಲ ದೊರೆತಿದೆ. ಇಡೀ ರಾಜ್ಯದಲ್ಲಿ ಬಿಜೆಪಿಯ ವಾತಾವರಣ ನಿರ್ಮಾಣವಾಗಿದೆ. ರಾಜ್ಯ ನಾಯಕರ ತಂಡದ ಪರಿಶ್ರಮದ ರಥಯಾತ್ರೆಯಾಗಿದೆ. 200-300 ಜನರನ್ನು ಸೇರಿಸಿಕೊಂಡು ಕಾಂಗ್ರೆಸ್ ಜನಧ್ವನಿ ಯಾತ್ರೆಯನ್ನು ನಡೆಸುವ ಮೂಲಕ ಅವರ ಭವಿಷ್ಯ ಈಗಲೇ ನಿರ್ಧಾರವಾಗಿದೆ. ಮಂಡಲದ ಅಧ್ಯಕ್ಷರ ಜತೆಗೂಡಿ ಶಕ್ತಿಮೀರಿ ದುಡಿಯುತ್ತಿದ್ದೇವೆ.
ಕಾಂಗ್ರೆಸ್ -ಎಸ್ ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು. ಎಸ್ ಡಿಪಿಐ ಮುಂದಿಟ್ಟುಕೊಂಡು ಬಿಜೆಪಿ ಎಂದಿಗೂ ಮುಂದೆ ಹೋಗುವುದಿಲ್ಲ. ಕಾಂಗ್ರೆಸ್ ಜತೆಗಿನ ಒಳಒಪ್ಪಂದ ಮತದಾರರಿಗೆ ಸ್ಪಷ್ಟವಾಗಿ ಗೊತ್ತಿದೆ. ಸ್ಥಳೀಯ ಶಾಸಕರು ಚುನಾವಣೆ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ತೆಂಗಿನ ಕಾಯಿ ಒಡೆಯುತ್ತಿದ್ದಾರೆ. ಐದು ವರ್ಷಗಳಲ್ಲಿ ಒಡೆಯಬೇಕಾದ ತೆಂಗಿನಕಾಯಿಗಳು ಈಗ ಒಡೆಯುತ್ತಿದೆ. ಐದು ವರ್ಷದ ಹಿಂದೆ 176 ಕೋಟಿ ರೂ. ವೆಚ್ಚದ ಸೇತುವೆ ಹಾಗೂ ಅಣೆಕಟ್ಟುವಿನ ನೀರು ಈವರೆಗೂ ಗ್ರಾಮಗಳಿಗೆ ಸಿಗದೆ, ಜನ ನೀರಿಲ್ಲದೆ ತತ್ತರಿಸುವಂತಾಗಿದೆ ಎಂದರು.
ಈ ಸಂದರ್ಭ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಮಂಗಳೂರು ಕ್ಷೇತ್ರದ ವಿಜಯಸಂಕಲ್ಪ ಯಾತ್ರೆಯ ಸಂಚಾಲಕ ಜಿತೇಂದ್ರ ಶೆಟ್ಟಿ ತಲಪಾಡಿ, ಸಹಸಂಚಾಲಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.