ಬಂಟ್ವಾಳ: ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಯನ್ನು 12.45 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಅನುದಾನ ಬಿಡುಗಡೆಗೊಳಿಸಲಾಗಿದೆ, ಟೆಂಡರ್ ಹಂತದಲ್ಲಿದೆ ಜೊತೆಗೆ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಪುಂಜಾಲಕಟ್ಟೆಯಲ್ಲಿ ನಿರ್ಮಾಣ, ಪುಂಜಾಲಕಟ್ಟೆಯಲ್ಲಿ ಕ್ರೀಡಾಂಗಣಕ್ಕೆ ಹೈ ಟೆಕ್ ಸ್ಪರ್ಶ ಹೀಗೆ ಕೋಟ್ಯಾಂತರ ರೂ ಅನುದಾನ ನೀಡುವ ಮೂಲಕ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ಮನೆಯಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಧಾನ ಸಭಾ ಚುನಾವಣೆ ಸಮೀಸುತ್ತಿದ್ದು, ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು, ಕಾರ್ಯಕರ್ತರು ಜತೆಯಾಗಿ ಕೆಲಸ ಮಾಡಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ರಾಜಕೀಯವಾಗಿ ಅಧಿಕಾರ ಅಗತ್ಯವಿದೆ, ಈ ನಿಟ್ಟಿನಲ್ಲಿ ಮತ್ತೊಮ್ಮೆ ಕಾರ್ಯಕರ್ತರಿಗೆ ಗೌರವ ಸಿಗಬೇಕು, ಕ್ಷೇತ್ರದ ಅಭಿವೃದ್ಧಿಯಾಗಬೇಕು, ಶಾಂತಿಯ ಬಂಟ್ವಾಳವಾಗಿ ಉಳಿಯಬೇಕಾದರೆ ಬಂಟ್ವಾಳ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಅವರು ತಿಳಿಸಿದರು.
ಮಾಜಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಶಾಸಕರು ಮಾಡಿದ್ದಾರೆ. ಪುಂಜಾಲಕಟ್ಟೆ ವ್ಯಾಪ್ತಿಯ ಜನರ ಬಹುತೇಕ ಎಲ್ಲಾ ಬೇಡಿಕೆಗಳನ್ನು ಪೂರೈಸಿದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕೇಳಿದ್ದನ್ನು ಕೊಡುವ ಕಾಮದೇನು ನಮ್ಮ ಶಾಸಕರು ಮತ್ತೊಮ್ಮೆ ಆಯ್ಕೆಯಾಗಬೇಕು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ, ಮಾರ್ಚ 12 ರಂದು ವಿಜಯ ಸಂಕಲ್ಪ ಯಾತ್ರೆ ಆಗಮಿಸಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜತೆಯಾಗಬೇಕು ಎಂದು ಅವರು ಮನವಿ ಮಾಡಿದರು.
ವಿಜಯ ಸಂಕಲ್ಪ ಯಾತ್ರೆ ಯನ್ನು ಪುಂಜಾಲಕಟ್ಟೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ನಿಶ್ಚಯ ಮಾಡಲಾಗಿದೆ.
ಪುಂಜಾಲಕಟ್ಟೆಯಿಂದ ಬೈಕ್ ರ್ಯಾಲಿ ಮೂಲಕ ಹೊರಟು ಬಂಟ್ವಾಳ ದಲ್ಲಿ ರೋಡ್ ಶೋ. ವಿವಿಧ ಆಕರ್ಷಕವಾದ ಯಾತ್ರೆಯ ಮೂಲಕ ಬಂಟ್ಚಾಳಕ್ಕೆ ಆಗಮನವಾಗುತ್ತದೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿಗಳಾದ ರಮನಾಥ ರಾಯಿ , ಚಿದಾನಂದ ರೈ ಕಕ್ಯ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಬಿಲ್ಲವ ಸಂಘದ ಅಧ್ಯಕ್ಷ ಗಿರೀಶ್ ಹೆಗ್ಡೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.