ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಂಗಳಜ್ಯೋತಿ ಸಮೀಪದಲ್ಲಿ 1930ರ ಕಾಲಘಟ್ಟದಲ್ಲಿ ಕುದ್ಮುಲ್ ರಂಗರಾಯರ ಶಿಷ್ಯ ವೆಂಕಟರಾವ್ರವರಿಂದ ಕೊರಗ ಸಮುದಾಯದ ಕುಟುಂಬಗಳ ಉಪಯೋಗಕ್ಕಾಗಿ ದಾನ ರೂಪದಲ್ಲಿ ಕೊಟ್ಟಿರುವ ಜಮೀನಿನಲ್ಲಿ ಸುಮಾರು ಒಂದು ಎಕರೆ ಭೂಮಿಯಲ್ಲಿ ನಿವೇಶನರಹಿತರ ಕೊರಗ ಕುಟುಂಬಗಳನ್ನು 2018ರಲ್ಲಿ ಮಹಾನಗರ ಪಾಲಿಕೆಯು ಗುರುತಿಸಿದೆ.
ಆದರೆ ನಿವೇಶನ ಮಂಜೂರಾತಿ ಪತ್ರ ಮತ್ತು ಗಡಿಗುರುತುಗಳನ್ನು ನಿಗದಿ ಮಾಡಿ ದಾಖಲೆ ಪತ್ರಗಳನ್ನು ಈ ತನಕವೂ ನೀಡದಿರುವುದು ಕರಾವಳಿ ಕರ್ನಾಟಕದ ಮೂಲ ನಿವಾಸಿಗಳಾಗಿರುವ ಕೊರಗ ಸಮುದಾಯದ ಬಗ್ಗೆ ಮಹಾನಗರ ಪಾಲಿಕೆಯ ಧೋರಣೆಯ ಪ್ರತಿಬಿಂಬವಾಗಿದೆ.
ಈ ಹಿನ್ನೆಲೆಯಲ್ಲಿ ಸ್ವಂತ ಮನೆ ಇಲ್ಲದೆ ಅತ್ಯಂತ ಕಷ್ಟದಲ್ಲಿರುವ ಹಾಲಿ ಮಹಾನಗರ ಪಾಲಿಕೆ ಗುರುತಿಸಿರುವ 33 ಕುಟುಂಬಗಳಿಗಾಗಿ ನಿವೇಶನದ ದಾಖಲೆಪತ್ರ ಮತ್ತು ಗಡಿಗುರುತುಗಳನ್ನು ನಿಗದಿಪಡಿಸಿ ಹಸ್ತಾಂತರಿಸಲು ಆಗ್ರಹಿಸಿ ದಿನಾಂಕ 21-07- 2022ರಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿಯವರಿಗೆ ಹಾಗೂ ಕಮೀಷನರ್ರವರಿಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಇದರ ಸ್ಥಳೀಯ ಮಂಗಳಜ್ಯೋತಿ ಘಟಕವು ಮನವಿ ಸಲ್ಲಿಸಿದೆ.
ಘಟಕದ ಸಂಚಾಲಕರಾದ ಮನೋಜ್ ವಾಮಂಜೂರು, ರಾಜ್ಯ ಸಮಿತಿ ಸಹಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿ, ವಕೀಲರಾದ ಸುನಂದ ಕೆ, ಮಾರ್ಗದರ್ಶಕರಾದ ಯೋಗೀಶ್ ಜಪ್ಪಿನಮೊಗರು, ಶೇಖರ್, ಗಂಗಯ್ಯ, ರವೀಂದ್ರ, ಕಿಶನ್, ವಿಕಾಸ್, ದಿನೇಶ್ ಮೊದಲಾದವರು ಇದ್ದರು. ನಿವೇಶನ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸದಿದ್ದಲ್ಲಿ ಹಂತ ಹಂತದ ಹೋರಾಟವನ್ನು
ರೂಪಿಸಲಾಗುವುದೆಂದು ಸಂಚಾಲಕರಾದ ಕರಿಯರವರು ಆಗ್ರಹಿಸಿರುತ್ತಾರೆ.