ಬೆಳ್ತಂಗಡಿ: 8 ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ, ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಶಾಂತಿವನ ಟ್ರಸ್ಟ್ ಸಹಕಾರದೊಂದಿಗೆ ಇಲ್ಲಿನ ಸಾಂತೋಮ್ ಟವರ್ಸ್ನ ಸಭಾಂಗಣದಲ್ಲಿ ಏಳು ದಿನಗಳ ಯೋಗ ತರಬೇತಿ ಕಾರ್ಯಕ್ರಮ ಸೋಮವಾರ ಸಂಜೆ ಪ್ರಾರಂಭವಾಯಿತು.
ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಶಾಂತಿವನ ಟ್ರಸ್ಟ್ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಯೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾl ಹರ್ಷಿಣಿ ಅವರು ಸ್ವಾಸ್ಥ್ಯ ರಕ್ಷಣೆ, ಆರೋಗ್ಯವರ್ಧನೆ, ರೋಗ ನಿವಾರಣೆ, ಚಿಕಿತ್ಸೆ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಅತ್ಯಮೂಲ್ಯ ಸಾಧನ ಯೋಗಾಸನ. ಯೋಗಾಭ್ಯಾಸವು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಬೇಕು.
ನಮ್ಮ ಶರೀರದಲ್ಲಿರುವ ಸೂಕ್ಷ್ಮರೋಗಾಣುಗಳ ನಿವಾರಣೆಗೆ ಯೋಗಾಸನಗಳ ಅಭ್ಯಾಸ ತುಂಬಾ ಪ್ರಯೋಜನಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗಣೇಶ್ ಶಿರ್ಲಾಲು ವಹಿಸಿದ್ದರು. ವೇದಿಕೆಯಲ್ಲಿ ತರಬೇತುದಾರರಾದ ಡಾl ಪ್ರವೀಣ್, ಡಾl ನಂಜೇಶ್,ಉಲ್ಲಾಸ್,ಪ್ರಶಾಂತ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಚೈತ್ರೇಶ್ ಇಳಂತಿಲ ಸ್ವಾಗತಿಸಿ ವಂದಿಸಿದರು.
ಜೂ.21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ತಾಲೂಕಿನ 60 ಕಡೆಗಳಲ್ಲಿ ಸಾರ್ವಜನಿಕರಿಗಾಗಿ ಯೋಗ ತರಬೇತಿಯನ್ನು ಹಮ್ಮಿಕೊಂಡಿದೆ. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೂ ಇದರ ಪ್ರಯೋಜನ ಸಿಗಲಿ ಎಂಬ ಸದುದ್ದೇಶದಿಂದ ಸಂಸ್ಥೆಯವರು ತರಬೇತಿಯನ್ನು ಪ್ರತಿದಿನ ಸಂಜೆ ಏಳು ದಿನಗಳ ಕಾಲ ನೀಡಲಿದ್ದಾರೆ.