ಬೆಳ್ತಂಗಡಿ: ದಿವಂಗತ ನಾರಾಯಣ ಪಂಡಿತ ಅವರು ನಾಟಿ ವೈದ್ಯರಾಗಿ ಸಮಾಜಕ್ಕೆ ಸಲ್ಲಿಸಿದ ಸೇವೆ ಗೌರವಯುತವಾದುದು. ಅವರು ಸಮಾಜದಲ್ಲಿ ಯಾವ ರೀತಿ ಜೀವನ ನಡೆಸಿದ್ದಾರೆ ಎಂಬುದನ್ನು ಇವತ್ತು ಅವರ ಮಕ್ಕಳು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವ ಮುಖೇನ ನಮಗೆ ತಿಳಿಸಿದ್ದಾರೆ. ಹಿರಿಯರ ಆದರ್ಶಗಳನ್ನು ನಾವು ಪಾಲಿಸುವ ಮುಖೇನ ಅವರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಯಕ್ಷಗಾನದ ಮುಖೇನ ಇಡೀ ಸಮಾಜದಲ್ಲಿ ಸುಭಿಕ್ಷೆ ನೆಲೆಯಾಗಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಮಾ.೨೨ ರಂದು ಮೂಡುಕೋಡಿ ನೆಲ್ಲಿಗುಡ್ಡೆ ವಠಾರದಲ್ಲಿ ನಾಟಿವೈದ್ಯ ದಿ.ನಾರಾಯಣ ಪಂಡಿತ ಅವರ ಸ್ಮರಣಾರ್ಥ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿ ಇವರಿಂದ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಪೀಳಿಗೆ ನಾಟಿ ವಿದ್ಯೆ ಕಲಿಯಬೇಕು:
ವೈದ್ಯರಿಗೆ ಗುಣಪಡಿಸಲಾಗದ ರೋಗವನ್ನು ನಾರಾಯಣ ಪಂಡಿತ್ ಅವರು ತನ್ನ ನಾಟಿ ವೈದ್ಯ ಮುಖೇನ ಗುಣ ಪಡಿಸುತ್ತಿದ್ದರು. ಅಂತಹ ಶಕ್ತಿ ನಾರಾಯಣ ಪಂಡಿತರಲ್ಲಿತ್ತು.ಹಲವಾರು ಜೀವಗಳನ್ನು ಉಳಿಸುವ ಮೂಲಕ ನಾರಾಯಣ ಪಂಡಿತ್ ರವರ ಹೆಸರು ಇಂದು ಜೀವಂತವಾಗಿದೆ. ನಾಟಿ ವೈದ್ಯಕೀಯ ಮುಂದುವರಿಯಬೇಕು. ಇಂದಿನ ಯುವ ಪೀಳಿಗೆ ನಾಟಿ ವೈದ್ಯಕೀಯ ಕಲಿಯಬೇಕು ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಹೇಳಿದರು.
ವೇದಿಕೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ನಾರಾಯಣ ಗುರು ವೈದಿಕ ಸಮಿತಿ ಜಿಲ್ಲಾ ಅಧ್ಯಕ್ಷ ಸೋಮನಾಥ ಶಾಂತಿ, ಗಣೇಶ್ ಶಾಂತಿ ಮೂಡುಕೋಡಿ ಇದ್ದರು.
ಉಪನ್ಯಾಸಕ ರಾಕೇಶ್ ಮೂಡುಕೋಡಿ ಸ್ವಾಗತಿಸಿ, ಸತೀಶ್ ಹೊಸ್ಮಾರು ನಿರೂಪಿಸಿ, ರಕ್ಷಿತ್ ಪೂಜಾರಿ ಅಂಡಿಂಜೆ ವಂದಿಸಿದರು.
ಕಾರ್ಯಕ್ರಮದಲ್ಲಿ ರಾತ್ರಿ ೮.೩೦ಕ್ಕೆ ಚೌಕಿಯಲ್ಲಿ ಮಹಾಪೂಜೆ, ಹಾಗೂ ಅನ್ನಸಂತರ್ಪಣೆ ಜರುಗಿತು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದ ಹಿರಿಯ ಸಾಧಕ ಇರುವೈಲು ಪಾಣಿಲ ಬಾಡ ಪೂಜಾರಿ, ಹಿರಿಯ ನಾಟಿವೈದ್ಯೆ ಗುಲಾಬಿ ಭಂಡಾರ್ತಿ ವಾಮದಪದವು, ಕಟೀಲು ಮೇಳದ ಯಕ್ಷಗಾನ ಕಲಾವಿದ ಅಶೋಕ್ ಆಚಾರ್ಯ ವೇಣೂರು, ಕಂಬಳರಾದ ಓಟಗಾರ ಗಂಗಯ್ಯ ಪೂಜಾರಿ ಸಾವ್ಯ, ವಿವೇಕ್ ಪೂಜಾರಿ ಬೈಂದೂರು ಇವರನ್ನು ಸನ್ಮಾನಿಸಲಾಯಿತು.