ಮೈಸೂರು: ಮೈಸೂರಿನ ನಿರಂತರ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಲಾಗಿರುವ ಐದು ದಿನಗಳ ನಿರಂತರ ರಂಗ ಉತ್ಸವಕ್ಕೆ ಬುಧವಾರ ವಿದ್ಯುಕ್ತ ಚಾಲನೆ ದೊರೆಯಿತು.
ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಏರ್ಪಡಿಸಲಾಗಿರುವ ರಂಗೋತ್ಸವ ಪೂಜಾ ಕುಣಿತದೊಂದಿಗೆ ಆರಂಭವಾಯಿತು. ರಂಗೋತ್ಸವಕ್ಕೆ ಚಾಲನೆ ನೀಡಿದ ಹಿರಿಯ ರಂಗಕರ್ಮಿ ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಗಂಡುಮೆಟ್ಟಿನ ಪರಿಕಲ್ಪನೆ ಮತ್ತು ಚಿಂತನೆ ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿಗೆ ಅತ್ಯವಶ್ಯಕವಾಗಿದೆ ಎಂದು ಹಿರಿಯ ರಂಗಕರ್ಮಿ ಎಚ್.ಎಸ್. ಶಿವಪ್ರಕಾಶ್ ಆಶಿಸಿದರು.
70ರ ದಶಕದ ರಂಗಭೂಮಿ ವಾತಾವರಣ ಈಗಿಲ್ಲ. ಆ ರೀತಿಯ ರಂಗಭೂಮಿ ಬರಬೇಕು. ಫೈನಾನ್ಸಿಯಲ್ ಇನ್ವೆಸ್ಟ್ ಮೆಂಟ್ ಗಿಂತ ಹ್ಯೂಮನ್ ಇನ್ವೆಸ್ಟ್ ಮೆಂಟ್ ರಂಗಭೂಮಿಯಲ್ಲಿ ಇರಬೇಕು ಎಂದು ಬಯಸಿದರು. ಇಂದು ಅನುದಾನಿತ ರಂಗಭೂಮಿ ನಡೆಯುವುದು ಮುಖ್ಯವಲ್ಲ. ಎಲ್ಲರೂ ಇಂದು ರಂಗಭೂಮಿ ನಡೆಸುತ್ತಾರೆ. ರಂಗಭೂಮಿ ನಡೆಸಲು ಉತ್ಸಾಹ ಇದ್ದರೆ ಸಾಲದು ಉತ್ಸರ್ಗ ಬೇಕು ಎಂದು ಹೇಳಿದರು.
ಆಧುನಿಕ ರಂಗಭೂಮಿ ಇಂದು ದೊಡ್ಡ ಪ್ರಮಾಣದಲ್ಲಿ ಬೃಹತ್ ಉದ್ಯಮವಾಗಬೇಕಿತ್ತು. ಆದರೆ, ಅದು ಈವರೆಗೆ ಸಾಧ್ಯವಾಗಲಿಲ್ಲ. ಅಂದರೆ, ರಂಗಭೂಮಿ ಎತ್ತ ಸಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದ ಅವರು ರಂಗಭೂಮಿ ಎಲ್ಲಿಯವರೆಗೆ ಆತಂಕದಲ್ಲಿರುತ್ತದೆಯೋ ಅಲ್ಲಿಯವರೆಗೆ ಈ ರೀತಿಯ ಏರಿಳಿತಗಳು ಇದ್ದೇ ಇರುತ್ತದೆ. ರಂಗಭೂಮಿ ಎಂಬುದು ಇತಿಹಾಸದ ಅನುಕರಣೆಯೂ ಅಲ್ಲ, ದಿಕ್ಸೂಚಿಯೂ ಅಲ್ಲ. ಅದು ಇತಿಹಾಸ ಸೃಷ್ಟಿಸುವ ದೊಡ್ಡ ಮಾಧ್ಯಮ ಎಂದು ಹೇಳಿದರು.
ನಿರಂತರ ಪ್ರಸಾದ್ ಮಾತನಾಡಿ, ರಂಗಭೂಮಿ ಭಾಷೆಯಲ್ಲ, ಮನಸ್ಥಿತಿಯನ್ನು ಕಲಿಸುತ್ತದೆ. ಆದರೆ, ಇತ್ತೀಚೆಗೆ ರಂಗಭೂಮಿಯಲ್ಲಿರುವವರೇ ಅದರ ಕತ್ತುಹಿಸುಕುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವುಗಳ ನಡುವೆ ರಂಗಭೂಮಿಯ ಔನ್ನತ್ಯ ವನ್ನು ನಾವು ಉಳಿಸಬೇಕಿದೆ ಎಂದು ಸೂಚ್ಯವಾಗಿ ನುಡಿದರು.
ನಾಟಕ ರಚನೆಕಾರ ಜಯರಾಂ ರಾಯಪುರ ಮಾತನಾಡಿ, ಬದುಕಿನೊಳಗಿನ ಘಟನೆಗಳು ಇತಿಹಾಸದಲ್ಲಿ ದಾಖಲಾಗಿದೆ. ನಮ್ಮೆಲ್ಲರ ತುಮುಲ, ಹಾದಿ, ಜಾಡಿನ ಬಗ್ಗೆ ನಮಗೆ ಗೊತ್ತಿದೆ. ರಾಜ ತನ್ನ ಉದಾತ್ತ ಭಾವನೆಗಳನ್ನು ಸಾಕ್ಷಾತ್ಕಾರ ಗೊಳಿಸಬೇಕಾದರೆ ಕುಶಾಗ್ರಮತಿಯಾಗಿ ಕೆಲಸ ಮಾಡಬೇಕು. ಇತಿಹಾಸಕ್ಕೆ ಅಪಚಾರ ಆಗಬಾರದು ಎಂದು ಮಾರ್ಮಿಕವಾಗಿ ನುಡಿದರು.