ಬೆಳ್ತಂಗಡಿ : ಶಂಕರ ಭಗವತ್ಪಾದರು 1300 ವರ್ಷಗಳ ಹಿಂದೆಯೇ ತಮ್ಮ ಜೀವಿತದ 32 ವರ್ಷ ಅವಧಿಯಲ್ಲಿ ಅದ್ವೈತ ತತ್ವ ಪ್ರತಿಪಾದನೆ ಮಾಡಿ ಶಿವಾಪರಾಧ ಕ್ಷಮಾಪಣಾ ಸ್ತೋತ್ರಮ್,ಸ್ತೋತ್ರ ಸಮೂಹ ಹಾಗು ವಿವಿಧ ದೇವತಾ ಸ್ತೋತ್ರಗಳಲ್ಲಿ ಈಶ್ವರನ ಕುರಿತಾಗಿ ಮಾನವ ಜೀವನದ ನಿಜಾರ್ಥ ಮುಕ್ತಿಯ ಮಾರ್ಗವೆಂಬುದನ್ನು ತೋರಿಸಿಕೊಟ್ಟಿದ್ದಾರೆ . ನಾವು ಮಾಡಿರುವ ತಪ್ಪುಗಳಿಗೆ ಭಗವಂತನಲ್ಲಿ ಕ್ಷಮಾಪಣೆ ಕೇಳುವ 15 ಶ್ಲೋಕಗಳನ್ನು ರಚಿಸಿದ್ದು ಅವುಗಳಲ್ಲಿ ಆಯ್ದ ಶ್ಲೋಕಗಳನ್ನು ಈಶ್ವರನ ಆರಾಧನೆಗೆ ಸೂಕ್ತವಾದ ಶ್ರಾವಣ ಮಾಸದ ಪ್ರತಿ ಸೋಮವಾರ 3 ಭಾಗಗಳಲ್ಲಿ ನೇರ ಪ್ರಸಾರದ ಮೂಲಕ ವಾಚನ -ವ್ಯಾಖ್ಯಾನ ವನ್ನು ಹಮ್ಮಿಕೊಳ್ಳಲಾಗಿದೆಯೆಂದು ಉಜಿರೆ ಶ್ರೀ ಧ…ಮಂ ,ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ! ಶ್ರೀಧರ ಭಟ್ ನುಡಿದರು.
ಅವರು ಉಜಿರೆ ಶ್ರೀ ಧ .ಮಂ .ಕಾಲೇಜಿನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಂಡ “ಶಿವಾಪರಾಧ ಕ್ಷಮಾಪಣಾ ಸ್ತೋತ್ರಮ್ ” 1 ನೇ ಭಾಗದ ವಾಚನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತ ನಾವು ಮಾಡಿದ ತಪ್ಪು,ದೋಷ,ಕಲ್ಮಶಗಳನ್ನು ಹೊರಹಾಕುವವರೆಗೆ ಸ್ವಾಭಿಮಾನಿಗಳಾಗಿ ಸ್ವತಂತ್ರರಾಗಿ ಬದುಕಲು ಅಸಾಧ್ಯ . ಮನಃ ಶುದ್ಧಿಯಿಂದಲೇ ಮೋಕ್ಷಪ್ರಾಪ್ತಿಯಾಗುವುದು .ನಾವು ಮಾ ಡಿದ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಟ್ಟು ಭಗವಂತನ ಪಾದಾರವಿಂದಕ್ಕೆ ಅರ್ಪಣೆ ಮಾಡಿ ತಪ್ಪು ನಿವೇದನೆ ಮಾಡಿಕೊಳ್ಳುವುದರಲ್ಲಿ ಕ್ಷಮಾಗುಣವಿದೆ. ನಮ್ಮ ಮನಸ್ಸು ಶುದ್ಧವಾದರೆ ಮಾತ್ರ ಒಳ್ಳೆಯ ಅಂಶಗಳು ಮನಸ್ಸಿಗೆ ಬರುತ್ತವೆ. ಪುನರಪಿ ಜನನಂ ಪುನರಪಿ ಮರಣಂ ಎಂಬಂತೆ ನಾವು ಮಾ ಡಿದ ಕರ್ಮಗಳಿಂದಾಗಿ ನಮಗೆ ಜನ್ಮ ಬರುತ್ತದೆ. ನಿತ್ಯಕರ್ಮ,ನೈಮಿತ್ತಿಕ ಕರ್ಮ,ಹಾಗು ಕಾಮ್ಯ ಕರ್ಮಗಳೆಂಬ ತ್ರಿವಿಧ ಕರ್ಮಗಳಿದ್ದು ಪೂರ್ವ ಜನ್ಮಗಳಲ್ಲಿ ಮಾಡಿದ ಪಾಪಕರ್ಮದಿಂದ ನಾವು ಹುಟ್ಟಿನಿಂದ ಸಾವಿನವರೆಗೂ ಕರ್ಮಗಳನ್ನು ಮಾಡಲೇ ಬೇಕು. ಅದು ನಿಷ್ಕಾಮ ಕರ್ಮವಾಗಬೇಕು. ಮಾಡಿದ ಪಾಪಕ್ಕೆ ಪೂರ್ಣ ಕ್ಷಮಾಪಣೆ ಕೇಳಿದರೆ ಭಗವಂತ ಕ್ಷಮಿಸುತ್ತಾನೆ. ಎಂದು ಅವರು ವ್ಯಾಖ್ಯಾನಿಸಿದರು. ಜನ್ಮಾಂತರದ ಕರ್ಮಗಳಿಂದ ಸುಖ ದುಃಖಗಳನ್ನು ಜೀವನದಲ್ಲಿ ಅನುಭವಿಸುತ್ತೇವೆ. ಏಕಾತ್ಮತಾವಾದವನ್ನು ಪ್ರತಿಪಾದಿಸಿದವರು ಶಂಕರ ಭಗವತ್ಪಾದರು .ಎಲ್ಲ ಪ್ರಾಣಿ ,ಪಶು,ಪಕ್ಷಿ,ಮನುಷ್ಯರಿಗೂ ಭಗವಂತನೊಬ್ಬನೇ ಎಂದು ಅವರು ತಮ್ಮ ಶ್ಲೋಕಗಳಲ್ಲಿ ಸಾದರಪಡಿಸಿದ್ದಾರೆ ಎಂದರು.
ಶಿವಾಪರಾಧ ಕ್ಷಮಾಪಣಾಸ್ತೋತ್ರಮ್ ನ ಆಯ್ದ ಸ್ತೋತ್ರಗಳನ್ನು ಬೆಳ್ತಂಗಡಿ ಯ ಬಾಲಪ್ರತಿಭೆ ಚಿನ್ಮಯ ಜಿ.ಕೆ. ಸುಶ್ರಾವ್ಯವಾಗಿ ವಾಚಿಸಿ,ಡಾ! ಶ್ರೀಧರ ಭಟ್ ವ್ಯಾಖಾನ ಕಾರ್ಯಕ್ರಮ ನಡೆಸಿಕೊಟ್ಟರು. ಡಾ! ಶ್ರೀಧರ ಭಟ್ ಸ್ವಾಗತಿಸಿ,ಕೊನೆಯಲ್ಲಿ ವಂದಿಸಿದರು.