ಬೆಳ್ತಂಗಡಿ: ಇನ್ನೇನು ಹಾರ ಹಾಕಿ ,ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ವರನನ್ನು ನಿರಾಕರಿಸಿದ ವಿಚಿತ್ರ ವಿದ್ಯಮಾನ ಬುಧವಾರ ನಾರಾವಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ನಡೆದಿದೆ.
ನಾರಾವಿ ದೇವಸ್ಥಾನದ ಸನಿಹವಿರುವ ಸಭಾಭವನದಲ್ಲಿ ನಾರಾವಿಯ ಯುವಕನಿಗೂ ಶಿರ್ತಾಡಿ ಸನಿಹದ ಮೂಡುಕೊಣಾಜೆಯ ಯುವತಿಗೂ ಮದುವೆ ನಡೆಯುವುದರಲ್ಲಿತ್ತು. ಸುಮಾರು 500 ಕ್ಕೂ ಹೆಚ್ಚುಮಂದಿ ಸೇರಿದ್ದು ಸಮಾರಂಭವನ್ನು ಅದ್ದೂರಿಯಾಗಿಯೇ ಆಗುವುದರಲ್ಲಿತ್ತು.
ಆದರೆ ಹಾರ ವಿನಿಮಯ ಸಂದರ್ಭ ವಧು ಯಾವುದೋ ತಗಾದೆ ತೆಗಿದಿದ್ದಾಳೆ. ಬಳಿಕ ತಾಳಿ ಕಟ್ಟುವ ವೇಳೆ ಈ ವರ ಬೇಡಾ ಎಂದು ಹಾರವನ್ನು ತೆಗೆದು ಬಿಸಾಡಿದ್ದಾಳೆಂದೂ ಹೇಳಲಾಗುತ್ತಿದೆ. ಇನ್ನೊಂದೆಡೆ ವಧುವಿನ ಆರೋಗ್ಯ ಏರುಪೇರಾಗಿದ್ದರಿಂದ ಆಕೆ ವಿಚಿತ್ರವಾಗಿ ವರ್ತಿಸ ತೊಡಗಿದ್ದಾಳೆಂದೂ ಜನರು ಹೇಳತೊಡಗಿದ್ದಾರೆ.
ಈ ವಿದ್ಯಮಾನದಿಂದ ಗಂಡಿನ ಹಾಗೂ ಹೆಣ್ಣಿನ ಕಡೆಯವರ ಮಧ್ಯೆ ಕೆಲ ಕಾಲ ವಾಗ್ಯುದ್ಧ ನಡೆದಿದೆ. ವೇಣೂರು ಪೋಲಿಸರ ಆಗಮನವಾಗಿದೆ. ತನ್ನನ್ನು ನೋಡಲು ಬಂದವನೊಬ್ಬ, ನಿಶ್ಚಯ ಆದದ್ದು ಇನ್ನೊಬ್ಬನೊಂದಿಗೆ, ಇವತ್ತು ಬಂದ ವರ ಬೇರೊಬ್ಬ ಎಂಬ ವಿಚಿತ್ರ ಹೇಳಿಕೆಯನ್ನು ಪೋಲಿಸರ ಮುಂದೆ ವಧು ಹೇಳಿದ್ದಾಳಂತೆ. ಘಟನೆ ವೈರಲ್ ಆಗಿದೆ.