News Karnataka Kannada
Sunday, April 28 2024
ಮಂಗಳೂರು

ಗುರುವಾಯನಕೆರೆ- ನಾರಾವಿ ರಸ್ತೆ ಇನ್ನು ಮುಂದೆ ದ್ವಿಪಥ: ಸರಕಾರದಿಂದ 25 ಕೋ.ರೂ. ಅನುದಾನ

Guruvayanakere
Photo Credit :

ಬೆಳ್ತಂಗಡಿ: ಗುರುವಾಯನಕೆರೆ- ನಾರಾವಿ ರಸ್ತೆ ಇನ್ನು ಮುಂದೆ ದ್ವಿಪಥವಾಗಲಿದೆ. ಇದಕ್ಕಾಗಿ ರಾಜ್ಯ ಸರಕಾರ 25 ಕೋಟಿ.ರೂ. ಅನುದಾನ ಒದಗಿಸಿದೆ.

ಪ್ರವಾಸಿಗರಿಗೆ ಧರ್ಮಸ್ಥಳ-ಕಾರ್ಕಳ ಮಾರ್ಗವಾಗಿ ಹೊರನಾಡು, ಶೃಂಗೇರಿ ಸಂಪರ್ಕಿಸಲು ಬಹುಮುಖ್ಯ ರಸ್ತೆಯಾಗಿರುವ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ- ನಾರಾವಿ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದಡಿ ೨೫ ಕೋ.ರೂ. ಅನುದಾನ ಒದಗಿಸುವ ಮೂಲಕ ದ್ವಿಮುಖ ರಸ್ತೆಗೆ ಮುನ್ನುಡಿ ಬರೆದಿದ್ದಾರೆ.

ಪ್ರಥಮ ಹಂತದಲ್ಲಿ ರಸ್ತೆ ಸುರಕ್ಷತೆಯಡಿ ಗುರುವಾಯನಕೆರೆ ಕೆರೆ ಏರಿಯಾಗಿ ಪೊಟ್ಟುಕೆರೆ ವರೆಗೆ ೧.೨ ಕಿ.ಮೀ. ರಸ್ತೆಯನ್ನು ೪.೯೫ ಕೋ.ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ಹಾಗೂ ಪೊಟ್ಟುಕೆರೆಯಿಂದ ಸುಲ್ಕೇರಿವರೆಗೆ ೧೨ ಕಿ.ಮೀ.ನ್ನು ೨೦ ಕೋ.ರೂ. ವೆಚ್ಚದಲ್ಲಿ ದ್ವಿಮುಖ ರಸ್ತೆ ನಿರ್ಮಿಸುವ ಯೋಜನೆಯನ್ನು ನಡೆಸಲು ಲೋಕೋಪಯೋಗಿ ಇಲಾಖೆಯಡಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಗುತ್ತಿಗೆ ಪಡೆದಿದ್ದಾರೆ.

ಈಗಾಗಲೆ ಗುರುವಾಯನಕೆರೆ ಕೆರೆ ಏರಿಯಾಗಿ ಪೊಟ್ಟುಕೆರೆವರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ೧.೨ ಕಿ.ಮೀ. ರಸ್ತೆಯ ಎರಡು ಬದಿ ೨೧ ಅಡಿ ಅಗಲೀಕರಣಗೊಳ್ಳಲಿದೆ. ಮಧ್ಯೆ ೧ ಮೀಟರ್ ಮೀಡಿಯನ್ ಇರಲಿದ್ದು ನಡುವೆ ಹೈಮಾಸ್ಟ್ ದೀಪ ಅಳವಡಿಕೆಯಾಗಲಿದೆ. ಈಗಾಗಲೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ.

ಎರಡನೇ ಹಂತದಲ್ಲಿ ಪೊಟ್ಟುಕೆರೆ( ಶಕ್ತಿ ನಗರ)ಯಿಂದ ಪ್ರಸಕ್ತ ಇರುವ ಐದುವರೆ ಮೀಟರ್ ರಸ್ತೆಯನ್ನು ಸುಲ್ಕೇರಿವರೆಗೆ ಒಟ್ಟು ೧೨ ಕಿ.ಮೀ. ರಸ್ತೆಯು ೧೦ ಮೀಟರ್ (೩೩ ಅಡಿ) ಅಗಲದಲ್ಲಿ ದ್ವಿಮುಖ ರಸ್ತೆಯಾಗಲಿದೆ. ನೂತನ ರಸ್ತೆಯು ಈಗಿರುವ ಪೂಂಜಾಲಕಟ್ಟೆಯಿಂದ ಬಿಸಿರೋಡ್ ರಸ್ತೆ ಮಾದರಿಯಲ್ಲಿ ಅಭಿವೃದ್ಧಿಗೊಳ್ಳಲಿದೆ. ಒಟ್ಟು ೨೦ ಕ್ಕೂ ಅಧಿಕ ನೂತನ ಮೋರಿಗಳ ಅಳವಡಿಕೆ ಕಾರ್ಯವೂ ಶೀಘ್ರದಲ್ಲೇ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.

ಮೂರು ಕಡೆಗಳಲ್ಲಿ ಡಿವೈಡರ್
ಒಂದೆಡೆ ಗುರುವಾಯನಕೆರೆಯಿಂದ- ಪೊಟ್ಟುಕೆರೆ ವರೆಗೆ ೧.೨ ಕಿ.ಮೀ. ಚತುಷ್ಪಥ ರಸ್ತೆ ಹಾಗೂ ಡಿವೈಡರ್ ಕಾರ್ಯ ಕೈಗೆತ್ತಿಕೊಂಡಿದ್ದು ಮುಂದಿನ ಹಂತದಲ್ಲಿ ಅಳದಂಗಡಿ ಪೇಟೆಯಲ್ಲಿ ಹಾಗೂ ಸುಲ್ಕೇರಿ ಪಂಚಾಯತ್ ವಠಾರದಲ್ಲಿ ಎರಡು ಕಡೆಗಳಲ್ಲಿ ವಿಭಾಜಕದೊಂದಿಗೆ ಸರ್ಕಲ್ ರಚನೆಯಾಗಲಿದೆ.

 ಪ್ರವಾಸೋದ್ಯಮ ಕಲ್ಪನೆಯಡಿ ಮೇಲ್ದರ್ಜಗೆ
ರಾಜ್ಯಾದ್ಯಂತ ಧರ್ಮಸ್ಥಳ, ಕಾರ್ಕಳ, ಹೊರನಾಡು, ಶೃಂಗೇರಿ, ಉಡುಪಿ, ಕೊಲ್ಲೂರು ಸಂಚರಿಸುವ ಯಾತ್ರಾರ್ಥಿಗಳು, ಪ್ರವಾಸಿಗರಿಗೆ, ಎರಡೂ ಜಿಲ್ಲೆಯ ಜನಾಮಾನ್ಯರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಹಾಗೂ ಆರ್ಥಿಕ ವ್ಯವಹಾರ ಕೇಂದ್ರವಾಗಿ ರಾಜ್ಯ ಹೆದ್ದಾರಿಯಡಿ ರಸ್ತೆ ಮೇಲ್ದರ್ಜೆಗೇರಿಸಲಾಗಿದೆ. ಕಾರ್ಕಳ ಸಂಪರ್ಕ ರಸ್ತೆಗಳು ಈಗಾಗಲೆ ಮೇಲ್ದರ್ಜೆಗೇರಿದ್ದು, ಉಡುಪಿ ಜಿಲ್ಲೆ ಮಾದರಿಯಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿಯಾಗಬೇಕೆಂಬ ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಸರಕಾರಕ್ಕೆ ಮನವಿ ಮಾಡಿ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೂಂಜಾಲಕಟ್ಟೆಯಿಂದ ಚಾರ್ಮಾಡಿ ರಸ್ತೆ ಅಗಲೀಕರಣಕ್ಕೆ ಕ್ಷಣಗಣನೆ
ಈಗಾಗಲೆ ಜಿಲ್ಲೆಯ ಅನೇಕ ರಸ್ತೆಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಕಳೆದ ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ಏಕಕಾಲದಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ. ಅದರಲ್ಲಿ ಪೂಂಜಾಲಕಟ್ಟೆ- ಬಿ.ಸಿ.ರೋಡ್ ರಸ್ತೆಯೂ ಒಂದು. ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ ಪೂಂಜಾಲಕಟ್ಟೆ- ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ ಕಾಯುತ್ತಿದೆ. ಈಗಾಗಲೆ ವಾಹನದಟ್ಟಣೆ ಮಿತಿ ಮೀರಿದ್ದರಿಂದ ಗುರುವಾಯನಕೆರೆ ಪೇಟೆ ಅಭಿವೃದ್ಧಿ ಅವಶ್ಯವಾಗಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ, ರಸ್ತೆ ಸುರಕ್ಷತೆಯಡಿ ೨೫ ಕೋ.ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಡಿ ಗುರುವಾಯನಕೆರೆ-ನಾರಾವಿ ರಸ್ತೆಯ ಸುಲ್ಕೇರಿವರೆಗೆ ಪ್ರಥಮ ಹಂತದಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ.
-ಶಿವಪ್ರಸಾದ್ ಅಜಿಲ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ

ಪ್ರವಾಸೋದ್ಯಮ ತಾಲೂಕಿನ ಕೇಂದ್ರವಾಗಿದೆ. ಈ ನೆಲೆಯಲ್ಲಿ ಉಭಯ ಜಿಲ್ಲೆಯನ್ನು ಸಂಪರ್ಕಿಸಲು ಈ ರಸ್ತೆ ಅನುಕೂಲವಾಗಲಿದೆ. ರಸ್ತೆಯೊಂದಿಗೆ ಬಸ್ ಬೇ ನಿರ್ಮಿಸಲಿದ್ದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಚಿಂತನೆಯಿದೆ.
– ಹರೀಶ್ ಪೂಂಜ, ಶಾಸಕರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು