ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ನಾಯಿಲ ಕೋಮೆ ಹಾಗೂ ನರಿಕೊಂಬು ಗ್ರಾಮದ ಏಲಬೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಸ್ಪೋಟಕ ಬಳಸಿಕೊಂಡು ಅನಧಿಕೃತವಾಗಿ ಕಪ್ಪುಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಎರಡು ಗ್ರಾಮದ ನೊಂದ ನೂರಾರು ಮಂದಿ ನಾಗರಿಕರು ಬುಧವಾರ ಬಂಟ್ವಾಳ ತಹಶೀಲ್ದಾರ್ ಹಾಗೂ ನಗರ ಪೊಲೀಸ್ ಠಾಣೆಗೆ ದೂರು ನೀಡಿ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದಕ್ಕು ಮುನ್ನ ಗ್ರಾಮಸ್ಥರು ನರಿಕೊಂಬು ಗ್ರಾ.ಪಂ.ಗೆ ಭೇಟಿ ನೀಡಿ ಸಲ್ಲಿಸಿದ ದೂರಿಗೆ ಸ್ಪಂದಿಸಿದ ಗ್ರಾ.ಪಂ.ಪಿಡಿಒ, ಗ್ರಾಮಕರಣಿಕ ಹಾಗೂ ಗ್ರಾಪಂ ಅಧ್ಯಕ್ಷರ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ನೊಂದ ಗ್ರಾಮಸ್ಥರು ತಿಳಿಸಿದ್ದಾರೆ. ಸ್ಪೋಟಕ ಬಳಸಿ ಅನಧಿಕೃತವಾಗಿ ನಡೆಸಲಾಗುತ್ತಿರುವ ಗಣಿಗಾರಿಕೆಯಿಂದ ಅಸಪಾಸಿನ ಅನೇಕರ ಮನೆಗಳು ಬಿರುಕು ಬಿಟ್ಟಿದ್ದಲ್ಲದೆ ಹಂಚು,ಮನೆಯ ಸಿಮೆಂಟ್ ಶೀಟ್ ಗಳು ಪುಡಿಯಾಗಿದೆ. ಬುಧವಾರವು ಸ್ಪೋಟಕ ಬಳಸಿ ಗಣಿಗಾರಿಕೆ ನಡೆಸಿದ ಪರಿಣಾಮ ಇಲ್ಲಿನ ಗೀತಾ ಅವರ ಮನೆಯ ಶೀಟಿಗೆ ಕಲ್ಲು ಬಿದ್ದಿರುತ್ತದೆ. ಕಲ್ಲಿನ ಚೂರು,ದೂಳು ಕೃಷಿ ಗದ್ದೆಯನ್ನು ಅವರಿಸಿದರಿಂದ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಗೆಯೇ ಗಣಿಗಾರಿಕೆಯ ವೇಳೆ ಹರಡುವ ಕಲ್ಲಿನ ದೂಳಿನಿಂದ ಮಕ್ಕಳು,ವೃದ್ಧರ ಆರೋಗ್ಯದ ಮೇಲು ದುಪ್ಪರಿಣಾಮ ಬೀರಿದೆ.ಕೃಷಿ ಗದ್ದೆಯ ಹುಲ್ಲನ್ನು ತಿನ್ನುವ ದನಗಳು ಕೂಡ ಜೀರ್ಣವಾಗದೆ ಒದ್ದಾಡುತ್ತಿದೆ.ಬೆಳೆದ ಭತ್ತದ ಪೈರುಗಳು ನಾಶವಾಗುತ್ತಿದ್ದು,ಈ ಬಗ್ಗೆ ತಕ್ಷಣ ತನಿಖೆ ನಡೆಸಿ,ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ರಶ್ಮೀ ಅವರು ಗಣಿಗಾರಿಕಾ ಇಲಾಖಾಧಿಕಾರಿಯವರಿಗೆ ಸ್ಥಳ ಪರಿಶೀಲನೆಗೆ ಸೂಚಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗಣಿ ಅಧಿಕಾರಿ ಭೇಟಿ: ತಹಶೀಲ್ದಾರ್ ರಶ್ಮೀ ಅವರ ಸೂಚನೆಯಂತೆ ಸಂಜೆಯ ವೇಳೆ ಗಣಿ ಇಲಾಖೆಯ ಅಧಿಕಾರಿ ಮಾದೇಶ ಎಂಬವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭ ಗ್ರಾಮಸ್ಥರು ಸ್ಥಳದ ಸರ್ವೇ ನಡೆಸದೆ ಅನುಮತಿ ನೀಡಿರುವ ಬಗ್ಗೆ ಅಧಿಕಾರಿಯನ್ನು ತರಾಟೆಗೂ ತೆಗೆದುಕೊಂಡರು.