ಬಂಟ್ವಾಳ: ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು ಮುಂದಿನ ಸಾಲಿಗೆ ಸಂಘದ ವ್ಯಾಪ್ತಿಯಲ್ಲಿ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತ ಬೇಸಾಯ ಮಾಡುವ ರೈತರಿಗೆ ಗರಿಷ್ಠಪ್ರಮಾಣದಲ್ಲಿ ಬಡ್ಡಿ ರಹಿತ ಸಾಲ ನೀಡಲು ಚಿಂತಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಸಿದ್ದಕಟ್ಟೆ ಸೈಂಟ್ ಪೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಈ ವರ್ಷದಲ್ಲಿ ಸಂಘದ ವ್ಯಾಪ್ತಿಯಲ್ಲಿ ಹಲವು ರೈತರು ಸಂಘದ ಉತ್ತೇಜನ ಪಡೆದು ಹಡೀಲು ಬಿದ್ದ ಗದ್ದೆಗಳಲ್ಲಿ ಭತ್ತ ಬೇಸಾಯ ಮಾಡಿದ್ದು,ಈ ಪೈಕಿ ಕೆಲ ರೈತರಿಗೆ ಸಂಘದ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಆಧಾರ ರಹಿತವಾಗಿ ಸಾಲ ನೀಡಲಾಗಿದೆ ಎಂದ ಸಂಘದ ಸದಸ್ಯರ ಆರೋಗ್ಯ ದೃಷ್ಟಿಯಿಂದ ನೂತನವಾಗಿ “ರೈತ ರಕ್ಷಾ”ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲಾಗಿದೆ. ಗರಿಷ್ಠ ಪ್ರಮಾಣದ ರೈತರಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಬೆಳೆ ವಿಮಾ ಯೋಜನೆಗೆ ನೋಂದಣಿ ಮಾಡಿಸಿ ವಿಮಾ ಪ್ರೀಮಿಯಂ ಪಾವತಿಸಿ ಯೋಜನೆಯ ಪ್ರಯೋಜನ ಕಲ್ಪಿಸಲಾಗಿದೆ.ಗದ್ದೆ ಉಳುಮೆ ಮಾಡಲು ಕೃಷಿ ಇಲಾಖೆಯಿಂದ 2 ಟ್ರಾಕ್ಟರ್ ಖರೀದಿಸಿ ರೈತರಿಗೆ ಬಾಡಿಗೆಗೆ ನೀಡಲಾಗುತ್ತಿದೆ ಎಂದ ಕೋವಿಡ್ ಸಂಕಷ್ಟ ಕಾಲದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ದೊಂದಿಗೆ ಗೌರವಿಸಲಾಗಿದೆ.ಸಂಘದ ವ್ಯಾಪ್ತಿಯ ಶಾಲಾ-ಕಾಲೇಜ್ ಗಳಲ್ಲಿ ಎಸ್. ಎಸ್ ಎಲ್. ಸಿ ಮತ್ತು ಪಿ. ಯು. ಸಿ. ಯಲ್ಲಿ ಪ್ರಥಮ -ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಒಟ್ಟಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಕೇವಲ ಸಾಲ ನೀಡಿಕೆ ಅಲ್ಲದೇ ಎಲ್ಲಾ ಕ್ಷೇತ್ರದ ಸಾಧನೆಗೂ ಸಹಕಾರ ನೀಡಲಾಗಿದೆ ಎಂದರು.
ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಸದಸ್ಯರು ಸಂಘದೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿರುವುದರಿಂದ ಸಂಘವು ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯವಾಯಿತು ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಬಿಪಿನ್ ರಾವತ್ ಗೆ ಶೃದ್ದಾಂಜಲಿ:
ಇತ್ತೀಚೆಗೆ ಹ್ಯಾಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 14 ಮಂದಿ ವೀರ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶೃದ್ದಾಂಜಲಿ ಅರ್ಪಿಸಲಾಯಿತು.
ಸಾಧಕರಿಗೆ ಗೌರವರ್ಪಣೆ
ಇದೇ ವೇಳೆ ಸಂಘದ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳ್ಳಲ್ಲಿ ಗಣನೀಯ ಸಾಧನೆ ಮಾಡಿದ ಕಂಬಳ ಕ್ಷೇತ್ರಕ್ಕಾಗಿ ದುಡಿದ ಸಂಘದ ನಿರ್ದೇಶಕರಾದ ಸಂದೇಶ ಶೆಟ್ಟಿ ಪೊಡುಂಬ ಹೊಸಮನೆ,ಪದ್ಮನಾಭ ಶೆಟ್ಟಿಗಾರ್ ಸಂಗಬೆಟ್ಟು (ಯಕ್ಷಗಾನ ), ನಾಗೇಶ್ ಸೇರಿಗಾರ್ ಅರಳ (ನಾಗಸ್ವರ ವಾದಕ ), ನಾರಾಯಣ ನಾಯ್ಕ್ ಸಿದ್ದಕಟ್ಟೆ ನಿವೃತ ಕೃಷಿ ಅಧಿಕಾರಿ (ಸರಕಾರಿ ಸೇವೆ ), ಹರಿಪ್ರಸಾದ್ ಪ್ರಭು (ತರಕಾರಿ ಬೆಳೆ ಯುವ ಕೃಷಿಕ ),ತೇಜಸ್ವಿ. ಪಿ. ರಾಯಿ( ವಿದ್ಯಾಕ್ಷೇತ್ರ),ಯೋಗೀಶ್ ಕುಲಾಲ್ ಅರಳ (ಕೋವಿಡ್ ವಾರಿಯಾರ್ಸ್ ) ಅವರನ್ನು ಗೌರವಿಸಲಾಯಿತು.ಸಂಘದ ಸದಸ್ಯರ ಮಕ್ಕಳಿಗೆ ಶೇ 90% ಅಂಕ ಪಡೆದ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ವಾರ್ಷಿಕ ವರದಿ ಹಾಗೂ 2021-2022 ನೇ ಸಾಲಿನ ಅಂದಾಜು ಬಜೆಟ್ ಮಂಡಿಸಿದರು.
ನಿರ್ದೇಶಕರಾದ ದಿನೇಶ್ ಪೂಜಾರಿ, ಹರೀಶ್ ಆಚಾರ್ಯ ರಾಯಿ, ಉಮೇಶ್ ಗೌಡ ಮಂಚಕಲ್ಲು, ದೇವರಾಜ್ ಸಾಲಿಯಾನ್, ಜಾರಪ್ಪ ನಾಯ್ಕ, ವೀರಪ್ಪ ಪರವ, ಮಂದಾರತಿ.ಎಸ್. ಶೆಟ್ಟಿ, ಅರುಣ. ಎಸ್. ಶೆಟ್ಟಿ. ಮಾದವ ಶೆಟ್ಟಿಗಾರ್, ಉಪಸ್ಥಿತರಿದ್ದರು. ಉಪಾಧ್ಯಕ್ಷ ಸತೀಶ್ ಪುಜಾರಿ ಸ್ವಾಗತಿಸಿದರು. ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು ವಂದಿಸಿದರು. ಮುಖ್ಯ ಲೆಕ್ಕಿಗರಾದ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.