ಮೈಸೂರು: ಕರುನಾಡು ಬೆಚ್ಚಿಬೀಳುವಂತೆ ಮಾಡಿದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ರೇಪ್ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ನಡೆಸಿದ ಕಾರ್ಯಾಚರಣೆ ಕುತೂಹಲ ಮತ್ತು ರೋಚಕವಾಗಿದೆ.
ಆರೋಪಿಗಳ ಮಾಹಿತಿ ದೊರೆತರೂ ಸ್ಥಳಕ್ಕೆ ಹೋಗುವುದು ದೊಡ್ಡ ಸವಾಲಾಗಿದ್ದರಿಂದ ತಂತ್ರಗಾರಿಕೆ ಬಳಸಿದ ಪೊಲೀಸರು ರಾತ್ರಿಯಾಗುವ ತನಕ ಕಾದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಕರ್ನಾಟಕ ಪೊಲೀಸರು ತಿರುಪುರ್ಗೆ ಬಂದಿರುವ ಸುಳಿವು ಆರೋಪಿಗಳಿಗೆ ಸಿಕ್ಕಿದ್ದರೆ ಪರಾರಿಯಾಗುವ ಸಂಭವವಿತ್ತು.
ಪ್ರಕರಣದ ವಿಚಾರ ಗೊತ್ತಾಗುತ್ತಿದ್ದಂತೆ ಮೈಸೂರಿಗೆ ಧಾವಿಸಿದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿ ಅವರು ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಪರಿಣಿತ ಅಧಿಕಾರಿಗಳು, ಸಿಬ್ಬಂದಿಗಳನ್ನು ಸೇರಿಸಿ 7 ತಂಡ ರಚನೆ ಮಾಡಿದ್ದರು. ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಅವರು ತನಿಖೆಯ ವ್ಯೆಹ ರಚಿಸಿದ್ದರು. ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಾಧಾರ ಹಾಗೂ ಸಂತ್ರಸ್ತೆಯ ಸ್ನೇಹಿತ ನೀಡಿದ್ದ ಕೆಲವು ಮಾಹಿತಿ ತಾಳೆಯಾಗುತ್ತಿತ್ತು. ಆರೋಪಿಗಳು ತಮಿಳು ಭಾಷೆ ಮಾತನಾಡುತ್ತಿದ್ದರು. ಘಟನಾ ಸ್ಥಳದಲ್ಲಿ ತಾಳವಾಡಿ ಬಸ್ ಟಿಕೆಟ್ ಸಿಕ್ಕಿತ್ತು. ಮೊಬೈಲ್ ಟವರ್ನಲ್ಲಿ ಟ್ರೇಸ್ ಆಗಿದ್ದ ಮೊಬೈಲ್ ನಂಬರ್ನ ಸಿಮ್ ತಮಿಳುನಾಡಿನಲ್ಲಿ ಬಳಸಿದ್ದ ಸಿಮ್ ಒಂದೇ ಆಗಿತ್ತು. ಇದು ಆರೋಪಿಗಳು ತಮಿಳುನಾಡಿನವರು ಎಂಬುದನ್ನು ಬಲವಾಗಿ ದೃಢಪಡಿಸಿತ್ತು.
ಎರಡು ದಿನದಲ್ಲೇ ಜಾಡು ಪತ್ತೆ ಹಚ್ಚಿದ ಪೊಲೀಸರು: ಘಟನಾ ಸ್ಥಳದಲ್ಲಿ ಟ್ರೇಸ್ ಆಗಿದ್ದ ನಂಬರ್ಗಳ ಕಾಲ್ ಡಿಟೇಲ್ ರೆಕಾರ್ಡ್ ಪಡೆದುಕೊಂಡಿದ್ದ ಪೊಲೀಸರು ಈ ಮಾಹಿತಿ ಆಧರಿಸಿ ಆರೋಪಿಗಳ ಬೆನ್ನತ್ತಿ ತಾಳವಾಡಿಗೆ ತೆರಳಿದ್ದರು.
ಇತ್ತ ಆರೋಪಿ ಮೊಬೈಲ್ ಆನ್ ಮಾಡುವುದನ್ನೇ ಕಾಯುತ್ತಿದ್ದ ಸಿಡಿಆರ್ ವಿಭಾಗದ ಸಿಬ್ಬಂದಿ ಆರೋಪಿಯ ಮೊಬೈಲ್ ಆನ್ ಆಗುತ್ತಿದ್ದಂತೆ ಆರೋಪಿಗಳಲ್ಲಿ ಒಬ್ಬನಾದ ಭೂಪತಿ ಎಂಬಾತ ತಾಳವಾಡಿ ಫಿರ್ಕಾದ ಸುಸೈಪುರಂ ಗ್ರಾಮದಲ್ಲಿ ಇದ್ದಾನೆ ಎನ್ನುವುದು ಖಚಿತವಾಗಿತ್ತು. ತಕ್ಷಣ ಅವರು ತಾಳವಾಡಿಯಲ್ಲಿ ಬೀಡು ಬಿಟ್ಟಿದ್ದ ಪೊಲೀಸರಿಗೆ ಮಾಹಿತಿ ನೀಡದರು. ಈತನ ಬಗ್ಗೆ ಸಂಜೆ ವೇಳೆಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ಪೊಲೀಸರು ತಮಿಳುನಾಡಿನ ಪೊಲೀಸರನ್ನು ತಮ್ಮ ಜತೆಯಲ್ಲೇ ಕರೆದುಕೊಂಡು ಊರ ಹೊರಗೆ ಆರೋಪಿಗೆ ಕಾದಿದ್ದರು.
ಆದರೆ ದಿಢೀರ್ ಆಗಿ ಆರೋಪಿ ಬಂಧನಕ್ಕೆ ಮುಂದಾದರೆ ಪ್ರಕರಣದ ಬಗ್ಗೆ ಅರಿಯದ ಸ್ಥಳೀಯರು ತಿರುಗಿ ಬೀಳಬಹುದು. ಈ ಸಂದರ್ಭವನ್ನೇ ಬಳಸಿಕೊಂಡು ಆರೋಪಿ ಪರಾರಿಯಾಗಬಹುದು ಎಂದರಿತು ರಾತ್ರಿ 11 ಗಂಟೆಯ ತನಕವೂ ಕಾದು ಕುಳಿತಿದ್ದ ಪೊಲೀಸರು ಜನರೆಲ್ಲ ಮಲಗುತ್ತಿದ್ದಂತೆ ಆರೋಪಿಯ ಮನೆಯನ್ನು ಸುತ್ತುವರಿದಿದ್ದಾರೆ. ನಂತರ ಮಲಗಿದ್ದವನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಸೈಪುರಂನಲ್ಲಿ ಭೂಪತಿ ಸಿಕ್ಕಿಬೀಳುತ್ತಿದ್ದಂತೆ ಉಳಿದ ಆರೋಪಿಗಳು ತಿರುಪುರ್ ಪಕ್ಕದ ವೆಡಿಯಲೂರು ಎಂಬಲ್ಲಿ ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪೊಲೀಸರು ಈ ಮಾಹಿತನ್ನು ತಿರುಪೂರ್ನಲ್ಲಿದ್ದ ಮತ್ತೊಂದು ತಂಡಕ್ಕೆ ರವಾನಿಸಿದ್ದರು. ಅದರಂತೆ ವೆಡಿಯಲೂರು ಗ್ರಾಮದ ಶೆಡ್ನಲ್ಲಿ ಮಲಗಿದ್ದ ಮುರುಗೇಶ್, ಅರವಿಂದ್, ಜೋಸೆಫ್, ಅಪ್ರಾಪ್ತ ಬಾಲಕನನ್ನು ಬಂಧಿಸುವಲ್ಲಿ ಆ ತಂಡ ಯಶಸ್ವಿಯಾಗಿದೆ. ಒಂದು ವೇಳೆ ಭೂಪತಿ ಸಿಗದೆ ಇದ್ದರೆ ಈ ನಾಲ್ವರ ಬಂಧನ ಮತ್ತಷ್ಟು ವಿಳಂಬವಾಗುತ್ತಿತ್ತು. ಪ್ರಕರಣದಲ್ಲಿ ಇನ್ನು ಇಬ್ಬರು ಭಾಗಿಯಾಗಿದ್ದು, ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಆರೋಪಿಗಳ ಪ್ರಕಾರ, ಮೈಸೂರು ಅವರ ಕುಕೃತ್ಯಗಳಿಗೆ ಹೇಳಿಮಾಡಿಸಿದಂತಿತ್ತು. ಹೊರವಲಯದ ನಿರ್ಜನ ಪ್ರದೇಶಗಳಲ್ಲಿ ಕುಳಿತುಕೊಳ್ಳುವ ಜೋಡಿಗಳೇ ಇವರ ಟಾರ್ಗೆಟ್ ಆಗಿತ್ತು. ಕೃತ್ಯಕ್ಕೆ ಮುಂದಾದಾಗೆಲ್ಲ ಮೈಸೂರಿನಲ್ಲಿ ಕೆಲಸ ಮಾಡುತ್ತೇವೆ ಎಂಬ ಕುಂಟು ನೆಪದಲ್ಲಿ ಇಲ್ಲಿಗೆ ಬಂದು ದರೋಡೆ, ಸುಲಿಗೆ ಮಾಡುತ್ತಿದ್ದರು. ಜೇಬು ಖಾಲಿಯಾದಾಗ ಮೈಸೂರಿನ ಕಡೆ ಮುಖ ಮಾಡುತ್ತಿದ್ದ ಆರೋಪಿಗಳು ಚಾಮುಂಡಿಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶಕ್ಕೆ ಬಂದು ದರೋಡೆಗೆ ಇಳಿಯುತ್ತಿದ್ದರು.ಮೈಸೂರು ಹೊರವಲಯದ ರಿಂಗ್ ರಸ್ತೆ, ಲಿಂಗಾಂಬುಧಿ ಕೆರೆಯ ಅಕ್ಕಪಕ್ಕದ ನಿರ್ಜನ ಪ್ರದೇಶ ಇಲ್ಲಿ ಏಕಾಂತ ಬಯಸಿ ಬರುತ್ತಿದ್ದ ಯುವಕ-ಯುವತಿಯರನ್ನು ಬೆದರಿಸಿ ಮೊಬೈಲ್, ಚಿನ್ನದ ಆಭರಣ, ಹಣ ದರೋಡೆ ಮಾಡುತ್ತಿದ್ದರು. ಪಾತಕಿಗಳ ವಿರುದ್ಧ ಯಾರು ದೂರು ಕೊಡದ ಕಾರಣ ಮತ್ತಷ್ಟು ಅಪರಾಧ ಎಸಗಲು ಉತ್ತೇಜನ ನೀಡಿತ್ತು. ಇದಲ್ಲದೇ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಹಲವಾರು ವಿಚಾರಗಳನ್ನು ಒಂದೊಂದಾಗಿ ಹೊರ ಹಾಕುತ್ತಿದ್ದಾರೆ.
ಗ್ಯಾಂಗ್ರೇಪ್ ಪ್ರಕರಣ: ವಿಚಾರಣೆ ವೇಳೆ ಮಹತ್ವದ ಮಾಹಿತಿ ಹೊರಹಾಕಿದ ಕಿರಾತಕರ ಗ್ಯಾಂಗ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.