ಬಂಟ್ವಾಳ: ಸರಕಾರಿ ಪ್ರೌಡಶಾಲೆಯ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಪ್ರಸ್ತುತ ಪುತ್ತೂರು ತಾಲೂಕಿನ ಅರಿಯಡ್ಕ ಸಮೀಪದ ಪಾಪೆಜಾಲು ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿಟ್ಲ ನಿವಾಸಿ ಪ್ರಿಯಾ ಕುಮಾರಿ (48) ಮೃತಪಟ್ಟವರು .
ಇವರು ಡಿ.13 ರಂದು ಬೆಳಿಗ್ಗೆ ವಿಟ್ಲ ಸಿಪಿಸಿಅರ್ʼಐ ಬಳಿ ಇರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.
ಸೋಮವಾರ ಬೆಳಿಗ್ಗೆ ಬೇಗನೇ ಎದ್ದಿದ್ದ ಅವರು ಪತಿ ಸ್ನಾನದ ಕೋಣೆಯಲ್ಲಿದ್ದಾಗ ಹೊರಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಫತ್ರೆಗೆ ತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಡಿ.13 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಮೃತಪಟ್ಟಿದ್ದಾರೆ.
ಕಳೆದ ಗುರುವಾರದವರೆಗೆ ಅವರು ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಪ್ರಭಾರ ಎಚ್ ಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅವರು ಪಾಪೆಜಾಲು ಹೈಸ್ಕೂಲಿಗೆ ವರ್ಗಾವಣೆಗೊಂಡಿದ್ದು. ವರ್ಗಾವಣೆ ನಿಮಿತ್ತ ಶನಿವಾರವಷ್ಟೇ ಪಾಪೆಮಜಲು ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಭಾನುವಾರ ರಜಾದಿನವಾಗಿದ್ದು, ಮನೆಯಲ್ಲೇ ಇದ್ದರು.
ಇವರು ಅತ್ಯಂತ ಸೂಕ್ಷ್ಮ ಮನಸ್ಸಿನವರಾಗಿದ್ದು ಸಣ್ಣ ವಿಚಾರವನ್ನು ತುಂಬಾ ಗಂಭೀರವಾಗಿ ಸ್ವೀಕರಿಸುವ ಮನಸ್ಥಿತಿಯವರು ಆಗಿದ್ದರು ಎನ್ನಲಾಗಿದೆ. ಇನ್ನು ಮುಂದೆ ಎಸ್ ಎಸ್ ಎಲ್ ಸಿ ತರಗತಿಗಳಿಗೆ ಪಾಠ ಮಾಡುವ ಅನಿವಾರ್ಯತೆ ಅವರನ್ನು ಒತ್ತಡಕ್ಕೆ ಸಿಲುಕಿಸಿರಬಹುದು ಇದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ
ಇವರ ಪತಿ ನಿವೃತ್ತ ಯೋಧರಾಗಿದ್ದು, ಪ್ರಸ್ತುತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹನ್ನೊಂದು ವರ್ಷಗಳಿಂದ ಕಾಲ ಹಾರಾಡಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು.