ಮೈಸೂರು: ಗೂಡ್ಸ್ ಕ್ಯಾರಿಯರ್ ನಲ್ಲಿ ಭಾರೀ ಮೌಲ್ಯದ ಶ್ರೀಗಂಧ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮಾಲನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿರುವ ಘಟನೆ ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೃಹತ್ ಶ್ರೀಗಂಧದ ಕಳ್ಳ ಸಾಗಾಣಿಕೆಯ ಜಾಲವನ್ನು ಪತ್ತೆಹಚ್ಚಿರುವ ಸಿಸಿಬಿ. ಪೊಲೀಸರು 1 ಕೋಟಿ ಮೌಲ್ಯದ 700 ಕೆ.ಜಿ. ಶ್ರೀಗಂಧ, 15 ಸಾವಿರ ನಗದು, 1 ಗೂಡ್ಸ್ ಕ್ಯಾರಿಯರ್ ವಾಹನ, 2 ಮೊಬೈಲ್ ಫೋನ್ ಗಳ ನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಆರೋಪಿಗಳ ವಿವರವನ್ನು ಗೌಪ್ಯವಾಗಿಟ್ಟು ಈ ಜಾಲದ ಹಿಂದಿನ ಕಿಂಗ್ ಪಿನ್ ಗಳಿಗಾಗಿ ಹುಡುಕಾಟ ನಡೆಸಿದ್ದಾರೆ
ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದು ಮಂಡಿ ಮೊಹಲ್ಲಾದ ಪುಲಕೇಶಿ ರಸ್ತೆ ಮತ್ತು ಎಂ.ಕೆ.ಡಿ.ಕೆ. ರಸ್ತೆಯ 2ನೇ ಕ್ರಾಸ್ ಕೂಡುವ ಸ್ಥಳದಲ್ಲಿ ಟಾಟಾ ಗೂಡ್ಸ್ ಕ್ಯಾರಿಯರ್ ವಾಹನ ನೋಂದಣಿ ಸಂಖ್ಯೆ: ಎಂಎಚ್-11ಎಂಎಲ್-3850 ರಲ್ಲಿ ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಿದ ಶ್ರೀಗಂಧದ ಮರದ ತುಂಡುಗಳನ್ನು ಮೈಸೂರಿನ ಕಳ್ಳರೊಬ್ಬರಿಂದ ಖರೀದಿಸಿಕೊಂಡು ಬೆಂಗಳೂರಿನ ಕಡೆಗೆ ಸಾಗಾಣಿಕೆ ಮಾಡಲು ತಯಾರಿ ಮಾಡಿಕೊಳ್ಳುತ್ತಿರುವ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿದ ಸಿ.ಸಿ.ಬಿ. ಪೊಲೀಸರು, ವಾಹನದ ಮೇಲೆ ರಾತ್ರಿ 11 ಗಂಟೆ ಸಮಯದಲ್ಲಿ ದಾಳಿ ಮಾಡಿ, ಈ ಕಳ್ಳತನದ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇವರ ವಶದಲ್ಲಿದ್ದ ಟಾಟಾ ಗೂಡ್ಸ್ ಕ್ಯಾರಿಯರ್ ವಾಹನದ ಚಾಲಕರ ಸೀಟಿನ ಹಿಂಭಾಗ ಗೌಪ್ಯವಾಗಿ ನಿರ್ಮಿಸಿದ್ದ ಕ್ಯಾಬಿನ್ ಒಂದರಲ್ಲಿ ಅಡಗಿಸಿಟ್ಟಿದ್ದ ಒಂದು ಕೋಟಿ ಮೌಲ್ಯದ ಒಟ್ಟು 700 ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳು, 2 ಮೊಬೈಲ್ ಫೋನ್ , 15 ಸಾವಿರ ರೂ ನಗದು ಹಾಗೂ ಟಾಟಾ ಕಂಪೆನಿಯ ಗೂಡ್ಸ್ ಕ್ಯಾರಿಯರ್ ವಾಹನವನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿ.ಸಿ.ಬಿ.ಯಲ್ಲಿ ತನಿಖೆ ಮುಂದುವರೆದಿದೆ, ಈ ದಂಧೆಯಲ್ಲಿ ಭಾಗಿಯಾಗಿ ಇಷ್ಟು ಬೃಹತ್ ತೂಕದ ಶ್ರೀಗಂಧವನ್ನು ಅಕ್ರಮವಾಗಿ ಸಂಗ್ರಹಿಸಿಕೊಟ್ಟಂತಹ ಮತ್ತು ಇದನ್ನು ಖರೀದಿ ಮಾಡಿಕೊಳ್ಳುತ್ತಿದ್ದ ಇತರೇ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ಮೈಸೂರು ನಗರದ ಡಿ.ಸಿ.ಪಿ ಗೀತಪ್ರಸನ್ನರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಸಿ.ಕೆ.ಅಶ್ವಥನಾರಾಯಣರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್ ಪೆಕ್ಟರ್ ಎ.ಮಲ್ಲೇಶ್ ಎ.ಎಸ್.ಐ. ಆರ್.ರಾಜು, ಸಿಬ್ಬಂದಿ ಜೋಸೆಫ್ ನೊರೋನ್ಹ, ರಾಧೇಶ್, ಉಮಾಮಹೇಶ್, ಪುರುಷೋತ್ತಮ, ಅನಿಲ, ರಘು, ಸುನಿಲ, ಅರುಣ್ ಕುಮಾರ್, ಶ್ರೀನಿವಾಸ, ಮಮತ ಭಾಗವಹಿಸಿದ್ದರು.