ಹನೂರು: ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಸಿಲುಕಿ ಗಂಡಾನೆಯೊಂದು ಮೃತಪಟ್ಟಿರುವ ಘಟನೆ ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಉದ್ಧಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಉದ್ದಟಿ ಗ್ರಾಮದ ಹೊವಲಯದಲ್ಲಿನ ಶಿವಕುಮಾರ್ ಎಂಬವರು ತಾವು ಬೆಳೆದ ಫಸಲನ್ನು ವನ್ಯ ಪ್ರಾಣಿಗಳನ್ನು ರಕ್ಷಿಸುವ ಸಲುವಾಗಿ ಜಮೀನಿನ ಸುತ್ತಲೂ ಅಕ್ರಮವಾಗಿ ವಿದ್ಯುತ್ ಬೇಲಿಯನ್ನು ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದ್ದರು.
ಈ ನಡುವೆ ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಸುಮಾರು 32 ವರ್ಷದ ಗಂಡಾನೆಯೊಂದು ಆಹಾರ ಅರಸಿ ಜಮೀನಿಗೆ ನುಗ್ಗಿದ್ದು ವಾಪಾಸ್ಸಾಗುವ ವೇಳೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದೆ. ಈ ಬಗ್ಗೆ ವಿಷಯ ತಿಳಿದ ಸಾರ್ವಜನಿಕರು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಘಟನಾ ಸ್ಥಳಕ್ಕೆ ಎಸಿಎಫ್ ರಮೇಶ್ಕುಮಾರ್, ಆರ್ಎಫ್ಒ ಶಿವರಾಮು, ಡಿಆರ್ಎಫ್ ರವಿಕುಮಾರ್, ವಿನಾಯಕ, ಮಹೇಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ತಂಡ ಹಾಗೂ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗ ವಿನೋದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪಶು ವೈದ್ಯರಿಂದ ಮೃತ ಆನೆಯನ್ನು ಮರಣೊತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲಿಯೇ ಶವ ಸಂಸ್ಕಾರವನ್ನು ನೆರವೇರಿಸಲಾಯಿತು.
ಘಟನೆ ಬಳಿಕ ಜಮೀನಿನ ಮಾಲೀಕ ಶಿವಕುಮಾರ್ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆಗೆ ಬಲೆ ಬೀಸಿದ್ದಾರೆ.