ಬಂಟ್ವಾಳ: ಸಮಾಜದಲ್ಲಿ ಶಾಂತಿಯಿದ್ದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ, ಸಮಾಜದ ಶಾಂತಿಗೆ ಪೊಲೀಸರ ಶ್ರಮ ವಿಶೇಷವಾಗಿದ್ದು, ಯುವಜನಾಂಗ ಹೆಚ್ಚು,ಹೆಚ್ಚು ಪೊಲೀಸ್ ಇಲಾಖೆಗೆ ಸೇರ್ಪಡೆಯಾದಾಗ ಶಿಸ್ತಿನ ಜೀವನವೂ ನಿಮ್ಮದಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಶುಕ್ರವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ.ಜಿಲ್ಲೆಯ ಯುವಜನತೆಗೆ ಉದ್ಯೋಗಾವಕಾಶಗಳ ಕಾರ್ಯಾಗಾರ ಅತಿ ಅಗತ್ಯವಾಗಿದ್ದು, ರಾಜ್ಯದಲ್ಲಿ ಸಾವಿರಾರು ಮಂದಿ ಪೊಲೀಸ್ ಇಲಾಖೆಗೆ ಸೇರಿದರೆ ನಮ್ಮ ಜಿಲ್ಲೆಯಿಂದ ಬೆರಳೆಣಿಕೆಯ ಮಂದಿ ಸೇರುತ್ತಿದ್ದಾರೆ ಎನ್ನುವುದು ಬಹಳ ಬೇಸರದ ಸಂಗತಿಯಾಗಿದೆ. ನಮ್ಮಲ್ಲಿನ ಯುವಜನತೆಗೆ ತಿಳುವಳಿಕೆ ಕೊಟ್ಟಾಗ ಅವರು ಕೂಡ ಪೊಲೀಸ್ ಇಲಾಖೆಗೆ ಸೇರುವುದಕ್ಕೆ ಅನುಕೂಲವಾಗಲಿದೆ ಎಂದರು.
ಪ್ರತಿ ಕಾಲೇಜ್ ಮಟ್ಟದಲ್ಲಿ ಇಂತಹ ಕಾರ್ಯಾಗಾರಗಳನ್ನು ನಡೆಸುವಂತಾಗಬೇಕು ಜೊತೆ ಮಾದಕ ವಸ್ತು ಸೇವನೆ,ಸಾಮಾಜಿಕ ಜಾಲತಾಣದಿಂದ ಯುವಜನತೆಯ ಮೇಲಾಗುವ ದುಷ್ಪರಿಣಾಮದ ಬಗ್ಗೆಯು ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋಣಾವಣೆ ಮಾತನಾಡಿ, ನಿಮ್ಮೊಳಗೆ ನೀವು ಸ್ಪರ್ಧೆ ಮಾಡಿ ತಿಳಿದುಕೊಳ್ಳುವ ಅಭಿರುಚಿ ಬೆಳೆಸಿಕೊಂಡಾಗ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಅತೀ ಅಗತ್ಯವಾಗಿದೆ. ಸೈಬರ್ ಕ್ರೈಮ್, ಮಾದಕ ವಸ್ತುಗಳ ಕುರಿತು ಯುವಜನತೆ ಎಚ್ಚರಿಕೆಯಿಂದಿರಬೇಕು ಎಂದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ
ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಮಾತನಾಡಿ, ಪೊಲೀಸ್ ಇಲಾಖೆ ಹಾಗೂ ಪತ್ರಕರ್ತರು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದು, ಇಂತಹ ಕಾರ್ಯಾಗಾರಗಳಿಗೆ ಪತ್ರಕರ್ತರ ಸಂಘ ನಿರಂತರ ಸಹಕಾರ ನೀಡಲಿದೆ ಎಂದರು.
ಕಾರ್ಯಾಗಾರದಲ್ಲಿ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಬಂಟ್ವಾಳ ನಗರ ಠಾಣಾ ಇನ್ಸ್ಪೆಕ್ಟರ್ ವಿವೇಕಾನಂದ ಉಪಸ್ಥಿತರಿದ್ದರು.
ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಅವರು ಪೊಲೀಸ್ ಹುತಾತ್ಮ ದಿನಾಚರಣೆ ಕುರಿತು ಮಾತನಾಡಿದರು. ಬಂಟ್ವಾಳ ಸಂಚಾರ ಠಾಣಾ ಪಿಎಸ್ಐ ರಾಜೇಶ್ ಕೆ.ವಿ. ಅವರು ರಸ್ತೆ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು. ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಎಂ.ಎಸ್.ಅವರು ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.
ಪ್ರೊಬೆಷನರಿ ಪಿಎಸ್ಐ ರಾಮಕೃಷ್ಣ ಸ್ವಾಗತಿಸಿದರು. ಪೊಲೀಸ್ ಕಾನ್ಸ್ಟೇಬಲ್ ವಿವೇಕ್ ಕಾರ್ಯಕ್ರಮ ನಿರ್ವಹಿಸಿದರು.