ಬೆಳ್ತಂಗಡಿ: ತಾಳ್ಮೆಯ ಜತೆ ಪ್ರೀತಿ ಹಾಗೂ ಅಭಿಮಾನದಿಂದ ವಿಶೇಷಚೇತನರ ಶಕ್ತಿ , ಸಾಮರ್ಥ್ಯವನ್ನು ಪ್ರವರ್ಧಮಾನಕ್ಕೆ ತಂದು ಅವರ ಬಾಳಿಗೆ ಬೆಳಕು ತೋರುವ ಸಾನಿಧ್ಯ ಕೇಂದ್ರದ ಸೇವೆ ಅಭಿನಂದನೀಯ ಎಂದು ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಹೇಳಿದರು.
ಅವರು ಬುಧವಾರ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಶಾಲಾ ವಾಹನದ ಸೌಲಭ್ಯ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ದೈಹಿಕ ಸಾಮರ್ಥ್ಯದಲ್ಲಿ ಕೊರತೆಯಿದ್ದರೂ, ಅದನ್ನು ಮೀರಿ ನಿಂತು ಬದುಕು ಕಟ್ಟಿಕೊಳ್ಳಲು, ವಿಶೇಷಚೇತನರ ಮನಸ್ಸಿನ ತೊಳಲಾಟವನ್ನು ದೂರಮಾಡಿ ಸ್ಪೂರ್ತಿ ನೀಡಿದರೆ ಅವರ ಆತ್ಮಸ್ಥೈರ್ಯ ಹೆಚ್ಚಿ ಸಾಧನೆಗಳು ಬೆಳಕಿಗೆ ಬರುತ್ತವೆ ಎಂದು ಹೇಳಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ ಸಾನಿಧ್ಯ ಸಂಸ್ಥೆಯು ತೆರೆಮರೆಯಲ್ಲಿ ಸಲ್ಲಿಸುತ್ತಿರುವ ವಿಶೇಷ ಸೇವೆಯನ್ನು ಪರಿಗಣಿಸಿ,ರೋಟರಿ ಕ್ಲಬ್ ವತಿಯಿಂದ ಅಗತ್ಯ ವ್ಯವಸ್ಥೆಗಳನ್ನು ಮುಂದಿನ ದಿನಗಳಲ್ಲಿ ಮಾಡಿಕೊಡುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಉಪಾಧ್ಯಕ್ಷ ರವಿ ಬರಮೇಲು,ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ನೆರಿಯದ ಸಿಯೋನ್ ಆಶ್ರಮದ ಟ್ರಸ್ಟಿ ಯು.ಸಿ. ಪೌಲೋಸ್, ಸೇವಾ ಕೇಂದ್ರದ ನಿರ್ದೇಶಕರಾದ ಪ್ರಮೋದ್ ನಾಯಕ್, ಜಗದೀಶ ಶೆಟ್ಟಿ, ಮಹಮ್ಮದ್ ಬಶೀರ್ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮೇಲ್ವಿಚಾರಕಿ ಜೋಸ್ಪಿನಾ ಪಿ.ಟಿ. ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ರಾಧಾಕೃಷ್ಣ ಕೆ ವಂದಿಸಿದರು. ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.