ಬೆಳ್ತಂಗಡಿ : ಹುದ್ದೆಯಿಂದ ಗೌರವ ಸಿಗುವುದಿಲ್ಲ. ಇರುವ ಹುದ್ದೆಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ ಮಾತ್ರ ಗೌರವ ಸಿಗಲು ಸಾಧ್ಯ. ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸ್ವಚ್ಚ ಸಮಾಜವನ್ನು ನಿರ್ಮಿಸುವ ಶ್ರೇಷ್ಠ ಹುದ್ದೆಯುಳ್ಳವರು. ಇವರಿಗೆ ಗೌರವ ನಿಡುವ ಮೂಲಕ ಉತ್ತಮ ನಾಗರಿಕರಾಗೋಣ ಎಂದು ನ್ಯಾಯವಾದಿ ಮನೋರಮಾ ಹೇಳಿದರು.
ಅವರು ಗುರುವಾರ ಪ.ಪಂ ಬೆಳ್ತಂಗಡಿ ಇದರ ವತಿಯಿಂದ ಪ.ಪಂ ಸಭಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪೌರ ಕಾರ್ಮಿಕರು ತಮ್ಮ ಆರೋಗ್ಯ ರಕ್ಷಣೆಗೆ ಮೊದಲು ಆದ್ಯತೆ ನೀಡಬೇಕು. ಇದಕ್ಕೆ ಬೇಕಾದಂತಹ ಮುಂಜಾಗ್ರತೆ ವಹಿಸಬೇಕು. ಸ್ವಚ್ಚತೆ ಎಂಬುದು ಕೀಳು ಎಂಬುದನ್ನು ಕಾಣದೆ ವೃತ್ತಿ ಗೌರವ ಕಾಪಾಡಬೇಕು. ಈ ಮೂಲಕ ದುಶ್ಚಟಗಳಿಗೆ ಬಲಿಯಾಗಬಾರದು. ದುಡಿಮೆಯ ಸ್ವಲ್ಪ ಅಂಶವನ್ನು ಭವಿಷ್ಯದ ದೃಷ್ಠಿಯಿಂದ ಉಳಿತಾಯಕ್ಕೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಮೇರಿಕಾದಂತಹ ದೇಶಗಳಲ್ಲೂ ಪೌರ ಕಾರ್ಮಿಕ ದಿನಾಚರಣೆ ಇದ್ದು ನಮ್ಮ ದೇಶದಲ್ಲಿ ಕೂಡ ಪೌರಕಾರ್ಮಿಕರಿಗೆ ಗೌರವ ನೀಡುವ ಪದ್ಧತಿ ಇದ್ದು ಅದಕ್ಕಾಗಿ ಪೌರಕಾರ್ಮಿಕ ದಿನಾರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ನ.ಪಂ ಉಪಾಧ್ಯಕ್ಷ ಜಯಾನಂದ ಮಾತನಾಡಿ ಪೌರ ಕಾರ್ಮಿಕರಿಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದ್ದು ಇದಕ್ಕಾಗಿ ಪ್ರಯತ್ನಿಸಲಾಗುವುದು ಎಂದರು.
ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ ಸ್ವಚ್ಛತೆ ಎಂಬುದು ನಗರ ಪಂಚಾಯತ್ನ ಪ್ರಮುಖ ವಿಷಯವಾಗಿದ್ದು ಇದನ್ನು ಗೌರವದಿಂದ ಕಾಣುವವರು ಪೌರ ಕಾರ್ಮಿಕರು. ಇಲ್ಲಿನ ಕಾರ್ಮಿಕರ ಶ್ರಮವನ್ನು ಹೊರಭಾಗದಿಂದ ಬಂದ ಜನರು ಗುರುತಿಸುವುದನ್ನು ಕೇಳಿದಾಗ ಹೆಮ್ಮೆ ಎಣಿಸುತ್ತದೆ. ಸರಕಾರ ಕೂಡ ಇವರ ಸೇವೆಯನ್ನು ಗೌರವಿಸುತ್ತಿರುವುದು ಇವರ ಕುಟುಂಬದ ಜೀವನಕ್ಕೆ ಭದ್ರತೆಯನ್ನು ಕೊಡುತ್ತಿದೆ ಎಂದರು.
ಪ.ಪ. ಅಧ್ಯಕ್ಷೆ ರಜನಿ ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಪೌರ ಕಾರ್ಮಿಕ ರವಿ ಅವರನ್ನು ಗೌರವಿಸಲಾಯಿತು. ರೋಟರಿ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಪೌರ ಕಾರ್ಮಿಕರಿಗೆ ಕೊಡುಗೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಜಗದೀಶ್, ಶರತ್, ಇಂಜಿನಿಯರ್ ಮಹಾವೀರ ಅರಿಗ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.