ಬಂಟ್ಚಾಳ: ಸಂಸ್ಕಾರ ಭಾರತಿ ಬಂಟ್ವಾಳ ಘಟಕದ ವತಿಯಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮ ಭಾನುವಾರ ನಡೆಯಿತು.
ಕರ್ನಾಟಕ ಧಾರ್ಮಿಕ ಪರಿಷತ್ತು ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ದಿಕ್ಸೂಚಿ ಭಾಷಣಗೈದು, ಗುರುವಿನ ಕಲ್ಪನೆಯನ್ನು ನೀಡಿದ್ದು ಶಂಕರಾಚಾರ್ಯರು. ದೇಶವನ್ನು ಪ್ರೀತಿಸಿದರೆ ರಾಮನನ್ನು ಪೂಜಿಸಿದಂತೆ. ತಂದೆ, ತಾಯಿಯನ್ನು ಬದುಕಿರುವಾಗಲೇ ಗೌರವಿಸಬೇಕು. ವೇದವ್ಯಾಸರು ಹೇಳಿದ್ದನ್ನು ಅನುಸರಿಸಿದರೆ ಅದುವೇ ಗುರುವಂದನೆ. ಒಗ್ಗೂಡಿ ಬದುಕಲು ನೀಡುವ ಸಂದೇಶವನ್ನು ಗುರುತಿಸಬೇಕು ಎಂದರು.
ಈಗಿನ ಶಿಕ್ಷಣ ಪಡೆದ ವಿದ್ಯಾವಂತರ ನಡವಳಿಕೆಗಳು ಹೃದಯವಂತಿಕೆಯನ್ನು ಹೊಂದಿದಂತಿರುವುದಿಲ್ಲ. ಸಂಸ್ಕಾರ ಭಾರತಿ ನಿಜವಾದ ಹೃದಯವಂತರನ್ನು ರೂಪಿಸುತ್ತಿದೆ. ವೇದವೇ ಹಿಂದುಧರ್ಮದ ಮೂಲಗ್ರಂಥ ಎಂದು ಭಟ್ ಹೇಳಿದರು.
ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಷ್ಠೆಯಿಂದ ಮಾಡುವ ಯಾವುದೇ ಕೇಲಸಕ್ಕೆ ಶ್ರೇಯಸ್ಸು ಪ್ರಾಪ್ತವಾಗುವುದು ನಿಶ್ಚಿತ ಎಂದರು.
ಸಂಸ್ಕಾರ ಭಾರತಿಯ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಕೆ. ಶೆಟ್ಟಿ ಶುಭ ಹಾರೈಸಿದರು. ಸಂಸ್ಕಾರ ಭಾರತಿ ಬಂಟ್ವಾಳ ತಾಲೂಕು ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಶೀನಶೆಟ್ಟಿ ಬಾರಿಂಜೆ,ನಾಟಿ ವೈದ್ಯರಾದ ಶೀನ ಪೂಜಾರಿ ಬಡಗಬೆಳ್ಳೂರು,ರಂಗಭೂಮಿಯ ಹಿರಿಯ ಕಲಾವಿದ ಪ್ರೇಮಾನಂದ ಭಟ್ ವಿಟ್ಲ, ಗ್ರಾಮೀಣಪ್ರಸೂತಿ ತಜ್ಞೆ ಗೌರಿ ಸಾಲೆತ್ತೂರು ಅವರನ್ನು ಅಭಿನಂದಿಸಲಾಯಿತು. ಡಾ.ವಾರಿಜ ನಿರ್ಬೈಲ್ ಮತ್ತು ಜಯಾನಂದ ಪೆರಾಜೆ ಗಮಕವಾಚನ ಹಾಗೂ ಚಿನ್ಮಯಿ ಶೆಟ್ಟಿ,ಸಂಜನ ಮೊಡಂಕಾಪು ತಂಡದಿಂದ ನೃತ್ಯ ಕಾರ್ಯಕ್ರಮ ಜರಗಿತು. ಸಹಸಂಚಾಲಕ ಜನಾರ್ದನ ಅಮ್ಮುಂಜೆ ಮತ್ತು ವಿಜಯ ಶೆಟ್ಟಿ ಸಾಲೆತ್ತೂರು, ಸಂಕಪ್ಪ ಶೆಟ್ಟಿ, ವಿಜಯಕೃಷ್ಣ ಐತಾಳ್ ಸನ್ಮಾನಪತ್ರ ವಾಚಿಸಿದರು.ಕಲಾವಿದ ಮಂಜುವಿಟ್ಲ ವಂದಿಸಿದರು.ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.