ಬೆಳ್ತಂಗಡಿ: 2018ರಲ್ಲಿ ಪ್ರಾರಂಭವಾದ ವಕೀಲರ ಭವನದ ಕಾಮಗಾರಿ ಮುಗಿದ್ದಿದ್ದು ಡಿ. 28 ರಂದು ಉದ್ಘಾಟನೆಗೆ ಸಜ್ಜಾಗಿದೆ. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ಉದ್ಘಾಟಿಸಲಿದ್ದಾರೆ ಎಂದು ಬೆಳ್ತಂಗಡಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಪ್ರಸಾದ್ ಕೆ. ಎಸ್. ಹೇಳಿದರು.
ಅವರು ಮಂಗಳವಾರ ಇಲ್ಲಿನ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಸರಕಾರದಿಂದ ಮಂಜೂರಾದ ಸುಮಾರು ೨ ಕೋಟಿ ೧೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಭಾಭವನದ ನೆಲಮಹಡಿಯಲ್ಲಿ ಟೈಪಿಂಗ್ ಸೆಕ್ಷನ್ ಮತ್ತು ಕ್ಯಾಂಟೀನ್ ಇರಲಿದೆ. ಮೊದಲನೆಯ ಮಹಡಿಯಲ್ಲಿ ಪುರುಷ ವಕೀಲರ ಕೊಠಡಿ, ಗ್ರಂಥಾಲಯ, ಅಧ್ಯಕ್ಷರ ಕೊಠಡಿ, ಎರಡನೇ ಮಹಡಿಯಲ್ಲಿ ಸಭಾಂಗಣ, ಮಹಿಳಾ ವಕೀಲರ ಕೊಠಡಿ, ವಕೀಲರ ಸಂಘದ ಪದಾಧಿಕಾರಿಗಳ ಕೊಠಡಿಗಳು ಇರಲಿವೆ. ಸದ್ಯದಲ್ಲೇ ಕಟ್ಟಡದ ಲಿಫ್ಟ್ನ ವ್ಯವಸ್ಥೆಗಾಗಿ ಸುಮಾರು ರೂ. ೨೦ ಲಕ್ಷ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅದು ಮಂಜೂರಾತಿಯ ಹಂತದಲ್ಲಿದೆ ಎಂದರು.
ಡಿ. 28 ರಂದು ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮತ್ತು ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ. ಸೋಮಶೇಖರ ವಹಿಸಲಿದ್ದಾರೆ. ಸಮಾರಂಭದಲ್ಲಿ ಕಾನೂನು ಸಚಿವ ಜೆ.ಸಿ. ಮಾಧು ಸ್ವಾಮಿ, ಮೀನುಗಾರಿಕೆ ಸಚಿವ ಎಸ್. ಅಂಗಾರ, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್, ವಿಶ್ವಜಿತ್ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಉಪಸ್ಥಿತರಿರಲಿದ್ದಾರೆ.
ವಿಶೇಷ ಅತಿಥಿಗಳಾಗಿ ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ಹರೀಶ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಹರೀಶ್ ಕುಮಾರ್, ಭೋಜೇ ಗೌಡ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು, ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಪಿ.ಪಿ.ಹೆಗ್ಡೆ ಉಪಸ್ಥಿತರಿರಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಶೈಲೇಶ್ ಠೋಸರ್, ಪ್ರಚಾರ ಸಮಿತಿಯ ಶಶಿಕಿರಣ್ ಜೈನ್, ಎನ್. ಅಜಿತ್, ಮನೋಹರ ಕುಮಾರ್ ಎ., ಹಿರಿಯ ವಕೀಲರಾದ ಶಿವಯ್ಯ, ಪ್ರಮೋದ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.