ಬೆಳ್ತಂಗಡಿ: ಯುದ್ದದ ನಡುವೆ ಸಿಲುಕಿ ಕೊಂಡಿ “ದಿಕ್ಕುತೋಚದಂತಹ ಸನ್ನಿವೇಶ, ನಿರ್ಮಾಣವಾಗಿತ್ತು. ಏನಾದರೂ ಮಾಡಿ ಅಲ್ಲಿಂದ ಹೊರಬರಬೇಕು ಎಂಬ ನಿರ್ಧಾರ ಮಾಡಿದೆವು ನಮ್ಮಲ್ಲಿದ್ದ ಪೆನ್ಸಿಲ್, ಕಲರ್ ನಿಂದ ಭಾರತದ ತ್ರಿವರ್ಣ ಧ್ವಜ ತಯಾರಿಸಿದೆವು ಅದನ್ನು ಕೈಯಲ್ಲಿ ಹಿಡಿದು ಹೊರಟೆವು ದೇವರ ಅನುಗ್ರಹದಿಂದ ಎಲ್ಲರ ಸಹಕಾರದಿಂದ ಇದೀಗ ಮನೆ ಬಂದು ಸೇರಿದ್ದೇವೆ.
ಯುದ್ಧಪೀಡಿತ ಉಕ್ರೇನ್ ನಿಂದ ಉಜಿರೆಗೆ ತಲುಪಿದ ವೈದ್ಯಕೀಯ ವಿದ್ಯಾರ್ಥಿ ಹೀನಾ ಫಾತಿಮಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡದ್ದು ಹೀಗೆ.
ಯುದ್ಧಗ್ರಸ್ತ ಉಕ್ರೇನ್ ನಿಂದ ಬೆಳ್ತಂಗಡಿ ತಾಲೂಕಿನ ಟಿ.ಬಿ.ಕ್ರಾಸ್ ನಿವಾಸಿ ದಿ.ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಅವರು ಮಾ.6 ರಂದು ಮಧ್ಯಾಹ್ನ 11 ಗಂಟೆಗೆ ಉಜಿರೆ ತಮ್ಮ ನಿವಾಸಕ್ಕೆ ತಲುಪಿದ ಬಳಿಕ ಉಕ್ರೇನ್ ನ ಯುದ್ದದ ದಿನಗಳನ್ನು ನೆನೆಸಿಕೊಂಡರು.
ಖಾರ್ಕೀವ್ ನ್ಯಾಷನಲ್ ಮೆಡಿಕಲ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹೀನಾ ಅವರು ಉಕ್ರೇನ್ ನಗಡಿ ದಾಟಿ ಪೋಲೆಂಡ್ ಮೂಲಕ ನಿನ್ನೆ ದೆಹಲಿಗೆ ತಲುಪಿದ್ದು. ಅಲ್ಲಿಂದ ಬೆಂಗಳೂರು ಮುಲಕ ಉಜಿರೆಯ ತಮ್ಮ ನಿವಾಸಕ್ಕೆ ಬಂದು ಕುಟುಂಬದವರನ್ನು ಸೇರಿಕೊಂಡಿದ್ದು ಇಡೀ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
2020 ಡಿಸೆಂಬರ್ ನಲ್ಲಿ ಖಾರ್ಕೀವ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಗೊಂಡಿದ್ದ ಹೀನಾ ಕೋವಿಡ್ ಸಮಯದಲ್ಲಿ ಊರಿಗೆ ಮರಳಿದ್ದರು ಆರು ತಿಂಗಳ ಹಿಂದೆಯಷ್ಟೆ ಉಕ್ರೇನ್ ಗೆ ಹಿಂತಿರುಗಿದ್ದರು. ಸರ್ಫ್ನೀಯಾ ಸಮೀಪ ಕಾಲೇಜಿದ್ದು ಅಲ್ಲಿ ಸಮೀಪ ನೌಕೋವಾದಲ್ಲಿ ಉಳಿದುಕೊಂಡಿದ್ದೆವು. ಯುದ್ಧ ಆರಂಭವಾಗಿದ್ದ ದಿನ ನಾನು 5ನೇ ಮಹಡಿಯಲ್ಲಿ ಊಟ ಮಾಡುತ್ತಿರುವ ಸಮಯ ಪಕ್ಕದ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆದಿತ್ತು. ಅಂದು ಬಂಕರ್ ನಲ್ಲಿ ವಿದ್ಯುತ್, ನೆಟ್ ವರ್ಕ್ ಇಲ್ಲದೆ ನಮ್ಮ ಕರ್ನಾಟಕದ ನಾನು ಸೇರಿದಂತೆ 8 ಮಂದಿ 7 ದಿನ ಕಳೆದಿದ್ದೆವು. ಅದೇ ಸಮಯದಲ್ಲಿ ತರಕಾರಿ ತರಲು ಹೋಗಿದ್ದ ನನ್ನ ಸೀನಿಯರ್ ರಾಣೆಬೆನ್ನೂರು ನಿವಾಸಿ ನವೀನ್ ಸಾವನ್ನಪ್ಪಿರುವ ಮಾಹಿತಿ ತಿಳಿಯಿತು. ಅಲ್ಲಿಂದ ಬಳಿಕ ಯುದ್ದದ ಬಗೆಗಿನ ಭಯ ಕಾಡಲಾರಂಭಿಸಿತ್ತು ಬದುಕಿ ಉಳಿಯುತ್ತೇನೆಯೇ ಎಂಬ ಧೈರ್ಯ ಇರಲಿಲ್ಲ ಕೊನೆಗೂ ರಾಷ್ಟ್ರ ಧ್ಬಜ ಕೈಯಲ್ಲಿ ಹಿಡಿದು ರೈಲದವೆ ಸ್ಟೇಶನ್ ಗೆ ನಡೆದೆವು ಧ್ವಜ ನೋಡಿ ದಾರಿಯಲ್ಲಿ ಟಾಕ್ಸಿ ಚಾಲಕನೋರ್ವ ವಾಹನ ನಿಲ್ಲಿಸಿ ರೈಲ್ವೆ ಸ್ಟೇಷನ್ ಗೆ ವರೆರಗೆ ಕರೆತಂದರು.
ಮಾ.1 ರಂದು 1000 ಕಿ.ಮೀ. ದೂರದ ಲಿವಿವ್ ಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದೆವು. ಈ ವೇಳೆ ಮಾರ್ಗ ಮಧ್ಯ ಕ್ಷಿಪಣಿ ದಾಳಿಯಾದ ಸಂದರ್ಭ ರೈಲಿನಲ್ಲಿ ಭೂಕಂಪನದ ಅನುಭವವಾಗಿತ್ತು. ನಾವು ಹಿಂದಿರುಗಿ ಬರುವ ಆಸೆಯನ್ನೇ ಬಿಟ್ಟಿದ್ದೆವು ಎಂದರು.
ನಾವು ಪೋಲೆಂಡ್ ತಲುಪಲು ಲಿವಿವ್ ನಿಂದ ವಾಹನದ ಆಶ್ರಯ ಪಡೆಯಬೇಕಿತ್ತು. ಅಲ್ಲಿ ಉಕ್ರೇನ್ ಸೈನಿಕರು ನೆರವಾಗಿದ್ದರು, ಅಲ್ಲಿಯೂ ತ್ರಿವರ್ಣ ಧ್ವಜ ನೆರವಿಗೆ ಬಂತು. ಅಲ್ಲಿಂದ ಮುಂದೆ ಪೋಲೆಂಡ್ ಗಡಿ ತಲುಪಿ ಭಾರತೀಯ ರಾಯಭಾರ ಕಚೇರಿಯ ಸಹಾಯ ಪಡೆಯುವವರೆಗೂ ಇದು ನೆರವಿಗೆ ಬಂತು ಎಂದು ತ್ರಿವರ್ಣ ಧ್ವಜ ನೆರವಿಗೆ ಬಂತು ಎನ್ನುತ್ತಾರೆ ಅವರು.
“ಭಾರತೀಯ ಎಂಬಸಿ ಅಲ್ಲಿಂದ ಮನೆವರೆಗೆ ತಲುಪವವರೆಗೆ ನಮ್ಮನ್ನು ಮನೆ ಮಕ್ಕಳಂತೆ ಆರೈಕೆ ಮಾಡಿದೆ. ಊಟ, ಉಪಚಾರ ವಸತಿ ಪ್ರತಿಯೊಂದು ವ್ಯವಸ್ಥೆ ಕಲ್ಪಿಸಿದೆ. ನಮ್ಮನ್ನು ತಾಯ್ನಾಡಿಗೆ ಕರೆತರುವಲ್ಲಿ ನೆರವಾದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎನ್ನುತ್ತಾಳೆ ಹೀನಾ.
ನಮ್ಮ ಶಿಕ್ಷಣಕ್ಕೆ ಸರಕಾರ ನೆರವಿಗೆ ಬರಲಿ :
ಸರಕಾರ ಮುಂದಿನ ದಿನಗಳಲ್ಲಿ ನಮ್ಮ ಶಿಕ್ಷಣಕ್ಕೆ ಪೂರಕ ನೆರವಾಗಲಿ ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣ ಮುಂದು ವರಿಸಲು ಅವಕಾಶ ಒದಗಿಸಬೇಕು. ಯಾವರೀತಿ ಶಿಕ್ಷಣವನ್ನು ಮುಂದುವರಿಸಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ ಎಲ್ಲವನ್ನೂ ಮುಂದಿನ ದಿನಗಳಲ್ಲಿ ನಿರ್ಧರಿಸಬೇಕಾಗಿದೆ ಎನ್ನುತ್ತಾರೆ ಅವರು.
ಹೀನಾ ಫಾತಿಮಾ ಮನೆಗೆ ಮರಳಿದ ಸಂತಸವನ್ನು ಹಂಚಿಕೊಂಡ ತಾಯಿ ಶಹನಾ, ಅಜ್ಜ ಉಸ್ಮಾನ್, ಅಜ್ಜಿ ನಫಿಸಾ, ಮಾವ ಅಬಿದ್ ಅಲಿ, ಮಗಳನ್ನು ಮತ್ತೆ ಮರಳಿಸಿಕೊಟ್ಟ ಭಾರತೀಯ ಸರಕಾರಕ್ಕೆ, ಜಿಲ್ಲಾಧಿಕಾರಿ, ಸ್ಥಳೀಯಾಡಳಿತ ಸೇರಿದಂತೆ ತಮಗೆ ಧೈರ್ಯ ತುಂಬಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾಜಿ ಶಾಸಕ ವಸಂತ ಬಂಗೇರ ಅವರು ಹೀನಾ ಫಾತಿಮಾ ಅವರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು.