ಉಜಿರೆ : ಗ್ರಾಮೀಣ ಬದುಕಿನ ಆಳಕ್ಕೆ ಇಳಿದಾಗ ಮಾತ್ರ ಗ್ರಾಮೀಣ ವರದಿಗಾರಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು.
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಾಮೀಣ ವರದಿಗಾರಿಕೆಯ ಕುರಿತು ಉಪನ್ಯಾಸ ನೀಡಿದರು. ಗ್ರಾಮೀಣ ಜಗತ್ತು ತನ್ನೊಳಗೆ ಹಲವಾರು ವಿಷಯಗಳನ್ನು ಹಿಡಿದಿಟ್ಟುಕೊಂಡಿದೆ. ಕೃಷಿ, ಸಂಬಂಧ , ಸವಾಲು ಮತ್ತು ಸೊಬಗನ್ನು ಅನಾವರಣಗೊಳಿಸುವ ವರದಿಗಳು ಮೂಡಿಬಂದಾಗ ಮಾಧ್ಯಮ ಸಮಾಧಾನ ಸಾಧ್ಯವಾಗುತ್ತದೆ.
ಹಳ್ಳಿ ಮತ್ತು ಕೃಷಿ ಕ್ಷೇತ್ರದೊಳಗೆ ಪ್ರವೇಶಿಸುವುದು ಸುಲಭವಾದ ಕಾರ್ಯವಲ್ಲ. ಆದರೆ ಗ್ರಾಮೀಣ ಸಾಹಿತ್ಯದ ಅರಿವು ನಮಗಾದರೆ ವರದಿಗಾರಿಕೆಗೆ ಬೇಕಾದ ನೂರಾರು ವಿಷಯಗಳು ನಮಗೆ ದೊರಕುತ್ತದೆ. ವರದಿಗಾರನ ದಾರಿ ನಿಜವಾದ ಸಮಸ್ಯೆಗಳತ್ತ ಇರಬೇಕು. ಸಮಸ್ಯೆಗಳಿಗೆ ಪರಿಹಾರದ ಹಾದಿ ತೋರಿಸುವುದು ವರದಿಗಾರನ ಕರ್ತವ್ಯ. ಎಲ್ಲವೂ ಇರುವ ಏನು ಕಾಣಿಸದ ಜಾಗವೇ ಹಳ್ಳಿ. ಹಳ್ಳಿಯ ಆತ್ಮ ಕೃಷಿ. ಕೃಷಿ ಸಂಸ್ಕೃತಿಯು ನಮ್ಮ ಬದುಕಿನ ಉಸಿರಾಗಬೇಕು. ಆದರೆ ಇಂದು ಅನ್ನದ ಸಮಯ ಹಣದ ಸಮಯವಾಗಿ ಬದಲಾಗುತ್ತಿರುವುದರಿಂದ ಸಮಸ್ಯೆಗಳು ಉದ್ಭವಿಸುತ್ತಿದ್ದಾವೆ. ನಾವೆಲ್ಲರೂ ಮತ್ತೊಮ್ಮೆ ಪೂರ್ವ ಸಂಸ್ಕೃತಿಯತ್ತ ಮರಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎಂದು ಹೇಳಿದರು.
ವಿಭಾಗದ ವಿದ್ಯಾರ್ಥಿಗಳ ಪ್ರಕಟಿತ ಬರಹಗಳ ಸಂಗ್ರಹ ಹೊಂಗಿರಣ ಪುಸ್ತಕ ಮತ್ತು ವಿದ್ಯಾರ್ಥಿಗಳು ತಯಾರಿಸಿದ ಎಸ್.ಡಿ.ಎಂ ಗೆಜೆಟ್ ಪ್ರಾಯೋಗಿಕ ಪತ್ರಿಕೆಯನ್ನು ಡಾ.ನರೇಂದ್ರ ರೈ ದೇರ್ಲ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಹಂಪೇಶ್ ಕೆ.ಎಸ್, ಡಾ.ಏನ್.ಕೆ ಪದ್ಮನಾಭ, ಗೀತಾ ಏ.ಜೆ ,ಸುನಿಲ್ ಹೆಗ್ಡೆ ಹಾಗೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ನಾತಕೋತ್ತರ ವಿದ್ಯಾರ್ಥಿ ಜಗದೀಶ್ ಬಳಂಜ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಹರ್ಷಿತಾ ಹೆಬ್ಬಾರ್ ಸ್ವಾಗತ ಭಾಷಣ, ಶ್ರೀರಕ್ಷಾಶಂಕರ್ ಅತಿಥಿ ಪರಿಚಯ ಮತ್ತು ಮಧುರ ಭಟ್ ವಂದನಾರ್ಪಣೆ ನೆರವೇರಿಸಿದರು.