ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಕಾಡಾನೆ ಹಾವಳಿ ಪ್ರದೇಶವಾದ ದುಂಬೆಟ್ಟಿಗೆ ಆನೆಗಳನ್ನು ಕಾಡಿಗಟ್ಟುವ ಪರಿಣಿತರ ತಂಡ ಭಾನುವಾರ ಆಗಮಿಸಿದೆ. ಇವರ ಜತೆ ಸ್ಥಳೀಯರು ಹಾಗೂ ಡ್ರೋನ್ ಕ್ಯಾಮೆರಾ ತಂಡ ಸೇರಿ ಇಂದಿನಿಂದ (ಸೋಮವಾರ) ಕಾರ್ಯಾಚರಣೆ ಆರಂಭಿಸಲಿದೆ.
ದುಂಬೆಟ್ಟು ಪ್ರದೇಶದಲ್ಲಿ ಕಳೆದ ಹದಿನೈದು-ಇಪ್ಪತ್ತು ದಿನಗಳಿಂದ ನಿರಂತರ ಕಾಡಾನೆಗಳು ದಾಳಿ ಇಡುತ್ತಿದ್ದು, ಲಕ್ಷಾಂತರ ರೂ.ಮೌಲ್ಯದ ಕೃಷಿ ಹಾನಿ ಸಂಭವಿಸಿದೆ. ಕಾಡಾನೆಗಳು ಇಲ್ಲಿನ ಮನೆಗಳ ಸುತ್ತ ಸುಳಿಯುತ್ತಿದ್ದು, ಇದರಿಂದ ಪರಿಸರದ ಜನರಲ್ಲಿ ಭೀತಿ ಮೂಡಿದೆ.
ಕಾಡಾನೆಗಳ ಹಾವಳಿ ತಡೆಗೆ ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ತಕ್ಷಣ ಸ್ಪಂದನೆ ನೀಡಿದ ಅವರು ನಾಗರಹೊಳೆಯಿಂದ ಪರಿಣಿತ ಸಿಬ್ಬಂದಿಗಳನ್ನು ತರಿಸಿದ್ದು,ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಎ ಸಿ ಎಫ್ ಸುಬ್ರಹ್ಮಣ್ಯ ರಾವ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ, ಬೆಳ್ತಂಗಡಿಯ ಉಪ ವಲಯ ಅರಣ್ಯಾಧಿಕಾರಿಗಳಾದ ಯತೀಂದ್ರ,ರವೀಂದ್ರ ಅಂಕಲಗಿ,ರವೀಂದ್ರ ಕೆ,ಭವಾನಿ ಶಂಕರ್, ಅರಣ್ಯ ರಕ್ಷಕರಾದ ಶರತ್ ಶೆಟ್ಟಿ,ಪಾಂಡುರಂಗ ಕಮತಿ, ಸ್ಥಳೀಯರಾದ ಸಚಿನ್ ಬಿಡೆ, ವೆಂಕಟೇಶ್ವರ ಭಟ್, ಡಾ. ಅಮಿತ್ ಖಾಡಿಲ್ಕರ್, ಶಿವಣ್ಣ ಜಯಾನಂದ,ಗಣೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಾಚರಣೆ ಹೇಗೆ?
ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ಹಗಲಿನ ಹೊತ್ತು ಮಾತ್ರ ನಡೆಯಲಿದೆ.ಮೊದಲಿಗೆ ಕಾಡಾನೆಗಳು ಆಗಮಿಸುವ ಪರಿಸರವನ್ನು ಗುರುತು ಮಾಡಲಾಗುತ್ತದೆ. ಕಾಡಾನೆಗಳನ್ನು ಕಾಡಿಗಟ್ಟುವ ನಾಗರಹೊಳೆಯ ಪರಿಣಿತರಾದ ಹರೀಶ್, ವೆಂಕಟೇಶ ಹಾಗೂ ಮೋಟಪ್ಪ ಅವರು ಸ್ಥಳೀಯರ ಸಹಕಾರದಲ್ಲಿ ಇಲ್ಲಿನ ಹಾಗೂ ಸಮೀಪದ ಗ್ರಾಮಗಳ ಪರಿಸರ ಅರಣ್ಯದ ಕುರಿತು ಪರಿಶೀಲನೆ ನಡೆಸಲಿದ್ದಾರೆ.ಆನೆಗಳು ದಾಳಿ ಇಡುವ ಸ್ಥಳ, ಸಂಚರಿಸುವ ಜಾಗಗಳನ್ನು ಗುರುತು ಹಾಕಿ,ಇಲ್ಲಿಂದ ಅಗತ್ಯ ಸ್ವಯಂರಕ್ಷಣೆ ಪರಿಕರಗಳೊಂದಿಗೆ ಆನೆಗಳನ್ನು ಕಾಡಿನತ್ತ ಅಟ್ಟುವ ಕಾರ್ಯ ಆರಂಭವಾಗುತ್ತದೆ. ಅಗತ್ಯ ಬಿದ್ದರೆ ಗಾಳಿಯಲ್ಲಿ ಗುಂಡು ಹಾರಿಸಲಾಗುವುದು. ಡ್ರೋನ್ ಕ್ಯಾಮೆರಾ ಪರಿಸರದಲ್ಲಿ ಆನೆಗಳಿರುವ ಗುರುತು ಪತ್ತೆ ಮಾಡಲು ಸಹಕರಿಸಲಿದೆ.
ಕೆಲವೊಂದು ಅಡ್ಡಿ
ಪರಿಸರದಲ್ಲಿ ತರಗೆಲೆಗಳು ಒಣಗಿದ್ದು ಪಟಾಕಿ ಸಿಡಿಸಿದರೆ ಕಾಡ್ಗಿಚ್ಚು ಉಂಟಾಗುವ ಅಪಾಯ ಇದೆ. ಇಲ್ಲಿನ ಅರಣ್ಯ ಪ್ರದೇಶವು ನಾಗರಹೊಳೆಗಿಂತ ತೀರಾ ಭಿನ್ನವಾಗಿದ್ದು ಗುಡ್ಡ ,ಏರುಪೇರು,ಕಲ್ಲುನದಿಗಳನ್ನು ಹೊಂದಿರುವ ಕಾರಣ ನಾಗರಹೊಳೆ ತಂಡಕ್ಕೆ ಸಂಚರಿಸಲು ಸಮಸ್ಯೆ ತರುವ ಸಾಧ್ಯತೆ ಇದೆ. ಇದಕ್ಕಾಗಿ ಈ ಭಾಗದ ಪರಿಚಯವಿರುವ ಸ್ಥಳೀಯರನ್ನು ತಂಡದಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.
ಕಾರ್ಗಿಲ್ ವನಕ್ಕೆ ಭೇಟಿ
ಡಿಎಫ್ ಒ ಅವರ ತಂಡ ಕಾರ್ಗಿಲ್ ವನಕ್ಕೆ ಭೇಟಿ ನೀಡಿ ಆನೆ ಹಾವಳಿಯಿಂದ ಉಂಟಾದ ಹಾನಿಯ ವೀಕ್ಷಣೆಯನ್ನು ನಡೆಸಿತು. ಐಬೆಕ್ಸ್ ಬೇಲಿ ನಿರ್ಮಾಣಕ್ಕೆ ಬೇಕಾಗುವ ಸಹಾಯಧನವನ್ನು ಇಲಾಖೆಯಿಂದ ನೀಡುವ ಕುರಿತು ಭರವಸೆ ನೀಡಿತು.
“ಆನೆಗಳನ್ನು ಕಾಡಿಗಟ್ಟಲು ಬೇಕಾದ ಅಗತ್ಯ ಸಲಕರಣೆ, ಸಿಬ್ಬಂದಿಗಳಿಗೆ ವಾಹನ ಸೌಲಭ್ಯ ಹಾಗೂ ಇನ್ನಿತರ ಎಲ್ಲಾ ಅಗತ್ಯ ಸಹಕಾರವನ್ನು ಇಲಾಖೆ ವತಿಯಿಂದ ನೀಡಲಾಗುವುದು. ಸ್ಥಳೀಯ ಜನರಿಗೆ ಅಪಾಯ ಹಾಗೂ ಯಾವುದೇ ತೊಂದರೆ ಉಂಟಾಗದಂತೆ ಕಾರ್ಯಾಚರಣೆ ನಡೆಸಲು ತಿಳಿಸಲಾಗಿದೆ” – ಡಾ.ದಿನೇಶ್ ಕುಮಾರ್, ಡಿ. ಎಫ್. ಒ , ದ.ಕ