ಬೆಳ್ತಂಗಡಿ: ಮುಂಡಾಜೆಯಲ್ಲಿ ಆನೆಗಳ ದಾಳಿ ಮುಂದುವರಿದಂತೆ ಚಿರತೆಗಳ ಕಾಟವೂ ಆರಂಭವಾಗಿದೆ ಮುಂಡಾಜೆಯ ಧುಂಬೆಟ್ಟು, ಹಾಲ್ತೋಟ,ಕಜೆ, ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಪಿನಬಾಗಿಲು ಮೊದಲಾದ ಪರಿಸರಗಳಲ್ಲಿ ಬುಧವಾರ ರಾತ್ರಿ ಕಾಡಾನೆಗಳ ಕಾಟ ಮುಂದುವರಿದಿದೆ. ಕಳೆದ ಶನಿವಾರ ಮುಂಜಾನೆಯಿಂದ ಈ ಭಾಗದಲ್ಲಿ ಕಾಡಾನೆಗಳು ನಿರಂತರ ಕೃಷಿ ತೋಟಗಳಿಗೆ ದಾಳಿ ಇಡುತ್ತಿವೆ.
ಬುಧವಾರ ರಾತ್ರಿ 9:30ರ ಸಮಯ ಹಾಲ್ತೋಟದ ರವೀಂದ್ರ ಮರಾಠೆಯವರ ಮನೆ ಸಮೀಪದ ಕೃಷಿತೋಟದಲ್ಲಿ 50ಕ್ಕಿಂತ ಅಧಿಕ ಬಾಳೆಗಿಡಗಳು ಆನೆಗಳ ದಾಳಿಗೆ ತುತ್ತಾಗಿವೆ. ಮನೆಯವರಿಗೆ ಆನೆಗಳು ಬಂದಿರುವ ವಿಚಾರ ತಿಳಿದ ತಕ್ಷಣ ಪರಿಸರದವರಿಗೆ ಮಾಹಿತಿ ನೀಡಿ ಆನೆಗಳ ಗುಂಪನ್ನು ಓಡಿಸಲು ಪ್ರಯತ್ನಿಸಲಾಯಿತು. ಇಲ್ಲಿಂದ ಮುಂದುವರಿದ ಆನೆಗಳ ಗುಂಪು, ಮೃತ್ಯುಂಜಯ ನದಿಯನ್ನು ದಾಟಿ ಧುಂಬೆಟ್ಟು ಪ್ರದೇಶದ ತೋಟಗಳಿಗೆ ದಾಳಿಯಿ ಯಿಟ್ಟವು.ಆನೆಗಳ ಸಂಚಾರದ ವೇಳೆ ಸಚಿನ್ ಭಿಡೆ,ಉಲ್ಲಾಸ್ ಭಿಡೆ ಮತ್ತಿತರ ಕೃಷಿಕರ ಅಡಕೆ,ಬಾಳೆಗಿಡಗಳಿಗೆ ಹಾನಿಯಾಗಿದೆ. ಸ್ಥಳೀಯರು ಸೇರಿ ದೊಂದಿ ಬೆಳಗಿ, ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಓಡಿಸಲು ಪ್ರಯತ್ನಿಸಿದರು. ಕೊನೆಗೂ 3 ಆನೆಗಳಿದ್ದ ಗುಂಪು ಗುರುವಾರ ಮುಂಜಾನೆ 3ರ ಸಮಯಕ್ಕೆ ಮೇಲ್ಭಾಗದ ಕಾಡಿನತ್ತ ತೆರಳಿದೆ ಎಂದು ತಿಳಿದುಬಂದಿದೆ.
ಧುಂಬೆಟ್ಟು ಪ್ರದೇಶದಲ್ಲಿ ನಿರಂತರ ಕಾಡಾನೆಗಳ ಹಾವಳಿ ಜತೆ ಚಿರತೆಯು ಕಂಡು ಬಂದಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿನ ಶಶಿಧರ ಖಾಡಿಲ್ಕರ್ ಎಂಬವರ ಮನೆಯಂಗಳದಲ್ಲಿ ಬುಧವಾರ ಬೆಳಗಿನ ಜಾವ ಚಿರತೆಯು ಸಾಕುನಾಯಿಯ ಗೂಡಿನಬಳಿ ಕಂಡುಬಂದಿತ್ತು. ನಾಯಿ ಬೊಗಳುವ ಸದ್ದಿಗೆ ಮನೆಯವರು ಎಚ್ಚರಗೊಂಡು ನೋಡಿದಾಗ ಚಿರತೆಯು ಅಂಗಳವನ್ನು ದಾಟಿ ತೋಟದತ್ತ ಹೋಗಿರುವುದು ಕಂಡುಬಂದಿದೆ. ನಾಯಿಯು ಗೂಡಿನ ಒಳಗಿದ್ದ ಕಾರಣ ಚಿರತೆಗೆ ಆಹಾರವಾಗುವುದು ತಪ್ಪಿದೆ. ಕಳೆದ ಕೆಲವು ಸಮಯದಿಂದ ಈ ಪ್ರದೇಶದ ಅಲ್ಲಲ್ಲಿ ಸಾಕು ನಾಯಿಗಳು ಕಣ್ಮರೆಯಾಗುತ್ತಿವೆ.
2019ರ ಮೃತ್ಯುಂಜಯ ನದಿಯ ಭೀಕರ ನೆರೆಯ ಸಮಯ ಚಿಬಿದ್ರೆ ಗ್ರಾಮ ವ್ಯಾಪ್ತಿಯ ನಳೀಲು ಪ್ರದೇಶಕ್ಕೆ ಸಂಪರ್ಕ ಕಡಿತಗೊಂಡ ಕಾರಣ ಧುಂಬೆಟ್ಟು-ನಳೀಲು ಮಧ್ಯೆ ಇರುವ ಆನೆ ಕಂದಕವನ್ನು ಮುಚ್ಚಿ ತಾತ್ಕಾಲಿಕ ಸಂಪರ್ಕ ಕಲ್ಪಿಸಲಾಗಿತ್ತು.ಬಳಿಕ ನಳೀಲು ಕಡೆ ಹಿಂದಿನ ಶಾಶ್ವತ ಸಂಪರ್ಕದ ವ್ಯವಸ್ಥೆ ಮಾಡಿ ಕೊಡಲಾಗಿತ್ತು.ಆದರೆ ಇಲ್ಲಿ ಮುಚ್ಚಿರುವ ಆನೆ ಕಂದಕವನ್ನು ಇನ್ನೂ ಕೂಡ ತೆರವುಗೊಳಿಸ ಲಾಗಿಲ್ಲ.ಇದರಿಂದ ಈ ಭಾಗದಿಂದ ಕಾಡಾನೆ ಗಳಿಗೆ ಮುಂಡಾಜೆ ಕಡೆ ಬರಲು ಹಾಗೂ ಅನಧಿಕೃತವಾಗಿ ವಾಹನಗಳ ಮೂಲಕ ವಸ್ತುಗಳ ಸಾಗಾಟಕ್ಕೆ ಅನುಕೂಲವಾಗಿದೆ ಎಂದು ಧುಂಬೆಟ್ಟು ಪರಿಸರದ ಕೃಷಿಕರು ತಿಳಿಸಿದ್ದಾರೆ.