ಪಾಂಡವಪುರ : ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಲಿಮ್ಕಾ ದಾಖಲೆಯ ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕ ಮನೆಗೆ ಹಿರಿಯ ಸಾಹಿತಿ ದೇವನೂರು ಮಹದೇವ ಹಾಗೂ ಪತ್ನಿ, ಮೈಸೂರು ಯುವರಾಜ ಕಾಲೇಜು ನಿವೃತ್ತ ಪ್ರಾಂಶುಪಾಲೆ ಸುಮಿತ್ರಾಬಾಯಿ ಭೇಟಿ ನೀಡಿ ಪುಸ್ತಕದ ಸಂಗ್ರಹವನ್ನು ವೀಕ್ಷಣೆ ಮಾಡಿದರು. ಪುಸ್ತಕ ಮನೆಯಲ್ಲಿನ 12ಲಕ್ಷಕ್ಕೂ ಹೆಚ್ಚಿರುವ ಸಂಗ್ರಹದಲ್ಲಿರುವ ಪುಸ್ತಕಗಳನ್ನು ವೀಕ್ಷಣೆ ಮಾಡಿ ಸಾಹಿತ್ಯ ದಂಪತಿಗಳಿಬ್ಬರು ಮೂಕ ವಿಸ್ಮಿತರಾದರು.
ಈ ವೇಳೆ ಸಾಹಿತಿ ದೇವನೂರು ಮಹಾದೇವ ಮಾತನಾಡಿ, ಅಂಕೇಗೌಡರ ಪುಸ್ತಕ ಮನೆಗೆ ಭೇಟಿ ನೀಡಿರುವುದು ನಮಗೆ ಪುಸ್ತಕದ ಕಾಡಿಗೆ ಬಂದಂತೆಯೇ ಭಾಸವಾಗುತ್ತಿದೆ. ಇಲ್ಲಿನ ರಾಶಿ ರಾಶಿ ಪುಸ್ತಕಗಳನ್ನು ಕೆಡದಂತೆ ಬಹಳ ಜೋಪಾನವಾಗಿ ಸಂರಕ್ಷಣೆ ಮಾಡುವ ಅಗತ್ಯತೆ ಇದೆ. ಪ್ರತಿಯೊಬ್ಬರೂ ಈ ಪುಸ್ತಕ ಮನೆ ಸಂರಕ್ಷಣೆಗೆ ಏನಾದರು ಮಾಡಬೇಕು ಎಂದರು.
ಪುಸ್ತಕಗಳ ವೀಕ್ಷಣೆ ಮುಗಿಸಿ ದೇವನೂರು ಮಹಾದೇವ ಅವರು ಮೈಸೂರಿಗೆ ತೆರಳಲು ಕಾರು ಹತ್ತುವ ವೇಳೆ, ಪುಸ್ತಕ ಪ್ರೇಮಿ ಅಂಕೇಗೌಡರು ಈ ಪುಸ್ತಕ ಮನೆಯ ಹಿಂದಿನ ಕಟ್ಟಡವನ್ನು ದೆವ್ವ ಇದೆ ಅಂತಾ ಯಾರೂ ಕೂಡ ಖರೀದಿ ಮಾಡಿರಲಿಲ್ಲ ಎಂದರು. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ದೇವನೂರು ಮಹಾದೇವ ಅವರು, ಈ ಪುಸ್ತಕಗಳೇ ದೆವ್ವಗಳಿದ್ದಂತೆ, ಅವುಗಳನ್ನು ಹಿಡಿದುಕೊಂಡರೆ ಬಿಡೋದಿಲ್ಲ ಎಂದು ಹಾಸ್ಯಭರಿತವಾಗಿ ಹೇಳಿದರು.
ಇದೇ ವೇಳೆ ತಮ್ಮ ಕೃತಿ ಕುಸುಮಬಾಲೆಯ ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯ ಎರಡು ಪುಸ್ತಕಗಳನ್ನು ಅಂಕೇಗೌಡರ ಪುಸ್ತಕಮನೆಗೆ ದೇವನೂರು ಮಹದೇವ ನೀಡಿದರು.
ಮೈಸೂರು ಯುವರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ, ದೇವನೂರು ಮಹಾದೇವರ ಪತ್ನಿ ಪ್ರೊ.ಸುಮಿತ್ರಾಬಾಯಿ ಮಾತನಾಡಿ, ಇದೊಂದು ಚಿಕ್ಕ ವಿಶ್ವವಿದ್ಯಾಲಯದ ಗ್ರಂಥಾಲಯದ ರೀತಿ ಇದೆ. ಆದರೆ ಈ ಗ್ರಂಥಾಲಯವನ್ನು ಮುಂದಿನ ಪೀಳಿಗೆಯ ಅನುಕೂಲಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಪುಸ್ತಕ ಸಂರಕ್ಷಣೆ ಮಾಡಬೇಕಿದೆ. ಅಂಕೇಗೌಡರು ಏಕ ವ್ಯಕ್ತಿ ಇಷ್ಟೊಂದು ಪುಸ್ತಕಗಳ ಸಂಗ್ರಹಣೆ ಮಾಡಿರೋದು ದೊಡ್ಡ ಸಾಧನೆಯೇ ಸರಿ. ಜತೆಗೆ ಗಂಡ-ಹೆಂಡತಿಯರ ಸಹಯೋಗದ ಬೆಳವಣಿಗೆ ಇದಾಗಿದೆ. ಇಲ್ಲಿ ಅ, ಆ , ಇ ಈ ಕಲಿಯುವ 4 ವರ್ಷದ ಮಕ್ಕಳಿಂದ ಹಿಡಿದು 75ರಿಂದ 90ವರ್ಷದವರೆಗಿನವರು ಓದುವಂತಹ ಎಲ್ಲ ಅಪರೂಪದ ಪುಸ್ತಕಗಳು ಸಿಗುತ್ತವೆ. ನಮ್ಮ ಮನಸ್ಸಿನ ಭಾವನೆಗೆ ತಕ್ಕಂತಹ ಪುಸ್ತಕಗಳಿವೆ. ಓದು ಬರಹ ಬಾರದವರಿಗೂ ಚಿತ್ರಪುಟಗಳಿರುವ ಅನೇಕ ಪುಸ್ತಕಗಳು ಸಿಗಲಿವೆ. ಕಥೆ ಪುಸ್ತಕ ಹಾಗೂ ಹಳೆ ಕಾಲದ ಚಂದಮಾಮಾ, ಬಾಲಮಿತ್ರ ಪುಸ್ತಕಗಳು ಕೂಡ ಇಲ್ಲಿ ಲಭ್ಯತೆತೆ ಇದೆ. ನಿಜಕ್ಕೂ ಈ ಗ್ರಂಥಾಲಯ ನೋಡಿದ ನನಗೆ ಅಧ್ಬುತ ದರ್ಶವಾಗಿದೆ. ಇಲ್ಲಿಗೆ ಭೇಟಿ ನೀಡಿ ಪುಸ್ತಕ ವೀಕ್ಷಣೆ ಮಾಡಿದ್ದು ನನಗೆ ಸಾರ್ಥಕವಾಯಿತು ಎಂದರು.
ಈ ವೇಳೆ ಜಾನಪದ ವಿದ್ಚಾಂಸ ಕ್ಯಾತನಹಳ್ಳಿ ರಾಮಣ್ಣ, ರುಕ್ಮಿಣಿ ರಾಮಣ್ಣ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ಡಾಮಡಹಳ್ಳಿ ಸ್ವಾಮಿಗೌಡ, ವಿಜಯಲಕ್ಷ್ಮೀ ಅಂಕೇಗೌಡ ಇತರರಿದ್ದರು.