ಬೆಳ್ತಂಗಡಿ: ಕನ್ಯಾಡಿ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ಹಾಗೂ ಚಾತುರ್ಮಾಸ್ಯ ಸಮಿತಿ ವತಿಯಿಂದ ಸಂಸ್ಥಾನಮ್ ನ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತದ ಸಮಾಪ್ತಿ ಬಳಿಕ ನಡೆದ 13 ನೇ ವರ್ಷದ ಪೀಠಾಭಿಷೇಕ ವರ್ಧಂತ್ಯುತ್ಸವ ಸಮಾರಂಭ ಕಲ್ಮಂಜದ ದೇವರಗುಡ್ಡೆ ಶ್ರೀ ಗುರುದೇವ ಮಠದಲ್ಲಿ ಶುಕ್ರವಾರ ನಡೆಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಧರ್ಮವು ನಮ್ಮ ಉಸಿರಾಗಿದೆ ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಧರ್ಮದ ವಿಚಾರದಲ್ಲಿ ರಾಜಕೀಯ ಬರಬಾರದು, ಧರ್ಮಕ್ಕೆ ರಾಜಕೀಯ ಬಣ್ಣ ಹಚ್ಚುವವರರಿಗೆ ಜ್ಞಾನ ನೀಡುವ ಕೆಲಸ ನಡೆಯಬೇಕು. ಧರ್ಮವೆಂಬುದು ಋಷಿಮುನಿಗಳ ಕಾಲದ ಪರಂಪರೆಯಾಗಿದ್ದು, ತಿಳವಳಿಕೆ ಜ್ಞಾನದ ಕೊರತೆ ಇರುವ ಮಂದಿ ಮಾತ್ರ ಇದನ್ನು ವಿರೋಧಿಸುತ್ತಾರೆ. ಗುರುಕುಲ ಕಾಲದ ಶಿಕ್ಷಣ ಪದ್ಧತಿ ಮತ್ತೆ ಬಂದರೆ ಸಂಸ್ಕೃತಿಯ ಜತೆ ಧರ್ಮವು ಪುನರುತ್ಥಾನ ಉಂಟಾಗುತ್ತದೆ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೌರಾಡಳಿತ ಸಚಿವ ಎಂ ಟಿ ಬಿ ನಾಗರಾಜ್ ಮಾತನಾಡಿ ಮನುಷ್ಯ ಸರಳವಾಗಿ ಬದುಕಲು ಕಲಿತರೆ ಜೀವನದಲ್ಲಿ ಎತ್ತರಕ್ಕೇರಲು ಸಾಧ್ಯ ಯಾವುದೇ ಆಸೆ ಆಕಾಂಕ್ಷೆ ಲಾಭಗಳ ಬಗ್ಗೆ ಯೋಚಿಸದೆ ನಿಷ್ಠೆಯಿಂದ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಬೇಕು. ಪ್ರಾಮಾಣಿಕ ಪಾರದರ್ಶಕ ಸೇವಾ ಮನೋಭಾವನೆಯಿಂದ ಕೆಲಸ ನಡೆಸಲು ಶ್ರಮಪಡಬೇಕು. ಇದಕ್ಕೆ ದೇವರ ಗುರುಗಳ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಜೆ ಬಂದ ಸಂದರ್ಭ ಶಾಸಕ ಪೂಂಜ ನಮ್ಮನ್ನು ಬಹಳ ಪ್ರೀತಿಯಿಂದ ಆತ್ಮೀಯವಾಗಿ ಅಭಿಮಾನಪೂರ್ವಕವಾಗಿ ಸ್ವಾಗತಿಸಿದ್ದಾರೆ. ಮಂಜುನಾಥ ಸ್ವಾಮಿ ದರ್ಶನ ಪಡೆದು, ಕನ್ಯಾಡಿ ರಾಮ ಕ್ಷೇತ್ರದ ಜಗದ್ಗುರುಗಳ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಜೀಯವರ ಆಶೀರ್ವಾದ ಪಡೆದುಕೊಳ್ಳುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.ಇದು ನನ್ನ ಸೌಭಾಗ್ಯ ಮುಂದಿನ ದಿನಗಳಲ್ಲಿ ಶಾಸಕರ ಮೂಲಕ ಎಲ್ಲ ರೀತಿಯ ಸಹಕಾರವನ್ನು ಈ ಮಠಕ್ಕೆ ಸ್ವಾಮೀಜಿಯವರ ಆಶೀರ್ವಾದದಿಂದ ನೀಡುತ್ತೇನೆ ಎಂದರು.
ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ ಭಕ್ತಿ ಧರ್ಮದ ಉಳಿವಿಗೆ ಮಠಾಧೀಶರುಗಳು ಕಾರಣರಾಗಿದ್ದಾರೆ. ಧರ್ಮವನ್ನು ಉಳಿಸುವ ಕೆಲಸ ಮಾಡುವ ಕ್ಷೇತ್ರಗಳಿಗೆ ಭಕ್ತರು ತನು-ಮನ-ಧನ ಸೇವೆ ಆಧಾರವಾಗಿದೆ ಎಂದರು.
ಶ್ರೀರಾಮ ಕ್ಷೇತ್ರದ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಅವರು ಪ್ರಸ್ತಾವಿಸಿ, ಶ್ರೀರಾಮ ಕ್ಷೇತ್ರದಲ್ಲಿ ಶ್ರೀಗಳ ಚಾತುರ್ಮಾಸ್ಯ ಹಾಗೂ ಪಟ್ಟಾಭಿಷೇಕ ವರ್ಧಂತಿ ಕಾರ್ಯಕ್ರಮ ಸಾಂಗ್ಯವಾಗಿ ನೆರವೇರಲು ಎಲ್ಲರ ಪರಿಶ್ರಮವಿದೆ. ಸಚಿವರಾದಿಯಾಗಿ ಶಾಸಕರುಗಳು, ಉದ್ಯಮಿಗಳು, ಸಂಘಸಂಸ್ಥೆಗಳು, 81 ಗ್ರಾಮಗಳ ಭಜನಾಂಮಡಳಿಗಳು, ಮಠದ ಭಕ್ತರು, ಸ್ವಯಂ ಸೇವಕರು ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರಿಗೂ ಚಾತುರ್ಮಾಸ್ಯ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದ್ರೆ, ಕರ್ನಾಟಕ ಶ್ರೀನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಭಟ್ಕಳ ಮಾಜಿ ಶಾಸಕ ಜೆ.ಡಿ.ನಾಯ್ಕ್, ಉದ್ಯಮಿ ಗೋವಿಂದ ಬಾಬು ಪೂಜಾರಿ, ಉತ್ತರ ಕನ್ನಡ ಜಿಲ್ಲೆಯ ಶ್ರೀರಾಮ ಕ್ಷೇತ್ರ ಸೇವಾಸಮಿತಿಯ ಸಂಚಾಲಕರಾದ ಕೃಷ್ಣ ನಾಯ್ಕ್, ವಾಮನ ನಾಯ್ಕ್, ಎಂ.ಜಿ. ನಾಯ್ಕ್, ಶ್ರೀಧರ ನಾಯ್ಕ್, ಉತ್ತರ ಕನ್ನಡ ಬಿಜೆಪಿ ಪ್ರ.ಕಾರ್ಯದರ್ಶಿ ಗೋವಿಂದ ನಾಯ್ಕ್, ಗುರುನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷ ವಸಂತ ಸಾಲಿಯಾನ್ ಮೊದಲಾದವರು ಇದ್ದರು.
ವೇ.ಮೂ. ಲಕ್ಷ್ಮೀಪತಿ ಗೋಪಾಲಾಚಾರ್ಯ ಮತ್ತು ತಂಡದವರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ನಾಡಿನ ನಾನಾ ಕಡೆಗಳಿಂದ ಆಗಮಿಸಿದ ಭಕ್ತರು ಶ್ರೀಗಳಿಂದ ಆಶೀರ್ವಾದ ಪಡೆದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಪದಾಧಿಕಾರಿಗಳಾದ ಪ್ರಶಾಂತ್ ಎಂ. ಪಾರೆಂಕಿ, ಸೀತಾರಾಮ ಬೆಳಾಲು, ರತ್ನಾಕರ್ ಬುಣ್ಣನ್, ಶಶಿಧರ್ ಕಲ್ಮಂಜ, ಸದಾನಂದ ಪೂಜಾರಿ ಉಂಗಿಲಬೈಲು, ವೀರಕೇಸರಿ ಕಲ್ಮಂಜ ಘಟಕದ ಸ್ವಯಂ ಸೇವಕರನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು.
ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರನ್ನು, ಗಣ್ಯರನ್ನು ಶ್ರೀಗಳು ಗೌರವಿಸಿದರು. ಗುರುದೇವ ಮಠದ ಟ್ರಸ್ಟಿ ತುಕರಾಮ ಸಾಲಿಯಾನ್ ಸನ್ಮಾನ ಪತ್ರ ವಾಚಿಸಿದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿಭಾಗ ಪ್ರಮುಖ್ ಕೇಶವ ಬಂಗೇರ ಹಾಗೂ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀರಾಮ ಕ್ಷೇತ್ರ ಜಿಲ್ಲಾ ಸಮಿತಿ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ವಂದಿಸಿದರು.