ಬೆಳ್ತಂಗಡಿ : ಸಮಸ್ತವಾಗಿರುವ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಕನ್ನಡಿಗರ ಭಾವನೆಗೆ ಪೂರಕವಾಗಿ ಕರ್ನಾಟಕ ಎಂಬ ನಾಮಕರಣ ಮಾಡುವ ಮೂಲಕ ನಾವಿಂದು ಏಕೀಕೃತ ಕರ್ನಾಟಕ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಸಾಧ್ಯವಾಗಿದೆ. ಶಿವರಾಮ ಕಾರಂತರು, ಮಾಸ್ತಿ ವೆಂಕಟೇಶ ಅಯ್ಯಂಗರ್, ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳು ಕನ್ನಡಕ್ಕೆ ಮಾನ್ಯತೆ ತಂದುಕೊಟ್ಟಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಮಿನಿ ವಿಧಾನಸೌಧದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವರಾಜ ಅರಸರ ಕಾಲದಲ್ಲಿ ಪೂರ್ಣಗೊಳಿಸುವ ಮೂಲಕ ಏಕೀಕರಣ ಕರ್ನಾಟಕದ ಉದಯವಾಯಿತು. ಪ್ರಸಕ್ತ ನಮ್ಮ ಕರ್ನಾಟಕದ ಗಡಿಭಾಗದ ಕಾಸರಗೋಡು ಕರ್ನಾಟಕದ ಭಾಗವಾಗಬೇಕು ಎಂಬುದು ಒಕ್ಕೊರಲಿನ ಬೇಡಿಕೆಯಾಗಿದೆ ಎಂದರು.
ತಹಸೀಲ್ದಾರ್ ಮಹೇಶ್ ಜೆ. ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಾಡಿನ ಪ್ರಜೆಗಳಾಗಿ ಕನ್ನಡ ಭಾಷೆಯ ಸಂಸ್ಕೃತಿ ಸಂಸ್ಕಾರ ಉಳಿಸಿ ಬೆಳೆಸುವ ಜತೆಗೆ ಕನ್ನಡದ ನೆಲ, ಕರ್ನಾಟಕದ ಜಲದ ಮೇಲಿನ ಗೌರವ ಉಳಿಸೋಣ ಎಂದರು.
ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ನಾಡು ಶ್ರೀಮಂತವಾಗಿದ್ದು ಪುರಾತನ ಕನ್ನಡ ಭಾಷೆಯ ವಾರಿಸುದಾರರು ನಾವಾಗಿದ್ದೇವೆ. ಕನ್ನಡ ಭಾಷೆಯು ಜಗತ್ತಿಗೆ ಕೊಟ್ಟ ಕಾಣಿಕೆ ಅಪೂರ್ವ. ಆಂಗ್ಲಭಾಷೆ ವ್ಯಾಮೋಹದಲ್ಲಿ ಕನ್ನಡ ಭಾಷೆಗೆ ಸಿಗಬೇಕಿದ್ದ ಪ್ರಾತಿನಿಧ್ಯ ಎಲ್ಲೋ ಕೊರತೆಯಾಗುತ್ತಿದೆ. ಇದಕ್ಕೆ ಬಾಲ್ಯದಿಂದಲೇ ಮಾತೃಭಾಷೆ ಪ್ರಾಮುಖ್ಯತೆ ನೀಡುವ ಮೂಲಕ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.
ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ, ವೃತ್ತ ನಿರೀಕ್ಷಕ ಶಿವಕುಮಾರ್, ನಿವೃತ್ತ ಸೇನಾಧಿಕಾರಿ ಎಂ.ಆರ್,ಜೈನ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ವಿರೂಪಾಕ್ಷಪ್ಪ, ಪ.ಪಂ. ಮುಖ್ಯಾಽಕಾರಿ ಸುಧಾಕರ್, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಟಿ.ಎನ್. ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.