News Karnataka Kannada
Friday, May 03 2024
ಮಂಗಳೂರು

ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ ಲಲಿತೋದ್ಯಾನ ಉತ್ಸವ

Lakshadeepothsava
Photo Credit :

ಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಅಂಗವಾಗಿ ಶ್ರೀಮಂಜುನಾಥಸ್ವಾಮಿಗೆ ಮೂರನೇ ದಿನವಾದ ಬುಧವಾರದಂದು ರಾತ್ರಿ ಲಲಿತೋದ್ಯಾನ ಉತ್ಸವ ಹಾಗೂ ನಾಲ್ಕನೇ ದಿನವಾದ ಗುರುವಾರದಂದು ರಾತ್ರಿ ಕಂಚಿಮಾರುಕಟ್ಟೆ ಉತ್ಸವ ನಡೆಯಿತು. ಐದನೇ ದಿನ ಶುಕ್ರವಾರದಂದು ರಾತ್ರಿ ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ.

ಲಕ್ಷ ದೀಪೋತ್ಸವದ ಮೂರನೇ ದಿನ ಬುಧವಾರ ರಾತ್ರಿ ಶ್ರೀಮಂಜುನಾಥಸ್ವಾಮಿಯ ಲಲಿತೋದ್ಯಾನ ಉತ್ಸವ ನೆರವೇರಿತು. ದೇವರ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮೂಲಕ ದೇವಳದ ಮುಂಭಾಗದ ಲಲಿತೋದ್ಯಾನಕ್ಕೆ ಕೊಂಡೊಯ್ಯಲಾಯಿತು. ಕೆರೆಕಟ್ಟೆ ಉತ್ಸವಕ್ಕೆ ಮೊದಲು ದೇಗುಲದ ಅಂಗಣದಲ್ಲಿ ಪಲ್ಲಕ್ಕಿ ಸುತ್ತು, ಚೆಂಡೆ, ನಾದಸ್ವರ, ಸಂಗೀತ, ಕೊಳಲು, ಶಂಖ ಸರ್ವವಾದ್ಯ ಮೊದಲಾದ ಸುತ್ತುಗಳಲ್ಲಿ ಶ್ರೀಸ್ವಾಮಿಯ ಉತ್ಸವಮೂರ್ತಿಯನ್ನು ಕೆರೆಕಟ್ಟೆ ಉತ್ಸವಕ್ಕೆ ಕೊಂಡೊಯ್ದು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು. ನಾಲ್ಕನೇ ದಿನ ಗುರುವಾರದಂದು ರಾತ್ರಿ ವೈಶಾಲಿ ಅತಿಥಿ ಗೃಹದ ಮುಂಭಾಗದಲ್ಲಿರುವ ಕಂಚಿಮಾರುಕಟ್ಟೆಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ನೆರವೇರಿತು. ಬಳಿಕ ದೇವಾಲಯಕ್ಕೆ ಮರಳಿದ ನಂತರ ಸ್ವಾಮಿಯ ಮೂರ್ತಿಯನ್ನು ಬೆಳ್ಳಿರಥದಲ್ಲಿ ಇರಿಸಿ ದೇವಾಲಯದ ಹೊರಗಿನ ಸುತ್ತಿನಲ್ಲಿ ರಥವನ್ನು ಒಂದು ತರಲಾಯಿತು.

ಲಲಿತಾಕಲಾ ಗೋಷ್ಠಿಯಲ್ಲಿ ವಿವಿಧ ಲಲಿತಕಲೆಗಳ ಅನಾವರಣ

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಸಂದರ್ಭ ಮೂರನೇ ದಿನ ಲಲಿತಕಲಾ ಗೋಷ್ಠಿಯನ್ನು ಪ್ರತಿವರುಷವೂ ಆಯೋಜಿಸಲಾಗುತ್ತಿದೆ. ದೀಪೋತ್ಸವ ಸಂದರ್ಭ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನಗಳೊಂದಿಗೆ ವಿವಿಧ ಲಲಿತಕಲೆಗಳ ಬೆಳವಣಿಗೆಗೆ ಕೊಡುಗೆ ಅಪಾರ. ೧೯೭೫ರಿಂದ ಆರಂಭವಾದ ಈ ಗೋಷ್ಠಿ ವೇದಿಕೆಯಲ್ಲಿ ನೃತ್ಯ, ನಾಟಕ, ಯಕ್ಷಗಾನ, ನಾನಾ ವಾದ್ಯ, ಸಂಗೀತಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ವಿವಿಧ ಜನಪದ ವಾದ್ಯಗಳು, ನೃತ್ಯಗಳು, ಹಾಡುಗಳು, ಶಂಖ, ಜಾಗಟೆ, ತಮಟೆ ಈ ಮೊದಲಾದ ಕಲೆ ಪ್ರಕಾರಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಸಾಹಿತ್ಯ, ಗೀತ, ನೃತ್ಯ, ಕುಂಚಗಳ ಸಹಯೋಗದಲ್ಲಿ ಹೊಸತೊಂದು ಸಾಹಿತ್ಯದ ಪರಿಪಾಕವೂ ಸರಳವಾಗಿ ಹೃದಯವನ್ನು ತಟ್ಟುತ್ತದೆ. ಇಂತಹ ಅನನ್ಯ, ಅಸಾಧಾರಣ ಸಮ್ಮೇಳನಗಳ ಪರಿಕಲ್ಪನೆಯು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸೃಜನಾತ್ಮಕ ಮನಸ್ಸಿನ ಪರಿಪಕ್ವ ಫಲವೇ ಆಗಿದೆ.

ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಬುಧವಾರ ಲಲಿತಾಗೋಷ್ಠಿಯಲ್ಲಿ ವಾದ್ಯಗೋಷ್ಠಿ, ತತ್ವಸಿಂಚನ ಗಾಯನ ಹಾಗೂ ನೃತ್ಯ ರೂಪಕ ಪ್ರದರ್ಶನಗೊಂಡಿತು. ಸಂಜೆ ೫-೩೦ ರಿಂದ ವಿವಿಧ ಪ್ರಾಕಾರಗಳ ವಾದ್ಯಗೋಷ್ಠಿ ಮೆರಗು ನೀಡಿತು. ಆ ಬಳಿಕ ಬೆಂಗಳೂರಿನ ಖ್ಯಾತ ಗಾಯಕಿ ಡಾ. ಪದ್ಮನಿ ಓಕ್ ಮತ್ತು ತಂಡದವರಿಂದ ತತ್ವಸಿಂಚನ ಗಾಯನ ಪ್ರೇಕ್ಷಕರನ್ನು ರಂಜಿಸಿತು. ಆ ಬಳಿಕ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ನೀಡಿದ್ದ ಬೆಂಗಳೂರಿನ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ, ನಿರ್ದೇಶಕಿ ಬೆಳಗೆರೆ ಗೌರಿ ನಾಗರಾಜ್ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ವಿದುಷಿ ಭಾರತಿ ಸಮೀರ ಇವರ ನಿರ್ದೇಶನದಲ್ಲಿ ನೃತ್ಯರೂಪಕ ಪ್ರದರ್ಶನಗೊಂಡಿತು.

ನೃತ್ಯರೂಪಕದಲ್ಲಿ ವಿದುಷಿ ಭಾರತಿ ಸಮೀರ ಪ್ರಸ್ತುತ ಪಡಿಸಿದ ಶಂಕರಾಭರಣದಿಂದ ಆರಂಭಗೊಂಡ ನೃತ್ಯ ಬಳಿಕ ಮಹಾಗಣಪತಿಂ, ಮಧುರ ಮಧುರ ಮೀನಾಕ್ಷಿ, ಡಿವಿಜಿ ರಚನೆಯ ಏನೀ ಮಹಾನಂದವೇ ಓ ಭಾಮಿನಿ, ಆದಿ ಶಂಕರಾಚಾರ್ಯರ ಐಗಿರಿ ನಂದಿನಿ, ಸ್ವಾಮಿ ದಯಾನಂದ ಸರಸ್ವತಿಯವರ ಭೋ ಶಂಭೋ ಶೃತಿ ಮೊದಲಾದ ಹಾಡುಗಳ ಜತೆಗಿನ ನೃತ್ಯವನ್ಬು ಕಲಾವಿದೆಯರಾದ ಅನುಷ, ಅಭಿಘ್ನ, ನಿಖಿತ, ಲಕ್ಷ್ಮೀ, ಐಶ್ವರ್ಯ, ಪ್ರಿಯಾಂಕ ಇವರು ಅತ್ಯುತ್ತಮವಾಗಿ ಪ್ರಸ್ತುತಪಡಿಸಿದರು.

ಇಂದಿನ ಕಾರ್ಯಕ್ರಮ
89 ನೇ ಸಾಹಿತ್ಯ ಸಮ್ಮೇಳನವನ್ನು ಇಂದು ರಾಜ್ಯದ ಆರೋಗ್ಯ ಸಚಿವ ಡಾ. ಕೆ.ಸುಧಾಕರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕೃತ ವಿ.ವಿ.ಯ ವಿಶ್ರಾಂತ ಉಪ ಕುಲಪತಿ ಡಾ. ಮಲ್ಲೇಪುರಂ ಜಿ.ವೆಂಕಟೇಶ ವಹಿಸಲಿದ್ದಾರೆ. ಸಾಹಿತಿ ಸಾಗರದ ಡಾ.ಗಜಾನನ ಶರ್ಮ, ಕಿರುಚಿತ್ರ ನಿರ್ದೇಶಕ ಡಾ.ಪಿ. ಚಂದ್ರಿಕಾ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ. ಕೆ.ಪಿ.ಪುತ್ತೂರಾಯ ಉಪನ್ಯಾಸ ನೀಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ಗಂಟೆಯಿಂದ ಮಂಜುಳಾ ಪರಮೇಶ್ ನಿರ್ದೇಶನದಲ್ಲಿ ಬೆಂಗಳೂರಿನ ಸಪ್ತಸ್ವರ ಆರ್ಟ್ಸ್ ಮತ್ತು ಕ್ರಿಯೇಷನ್ಸ್ ಕಲಾವಿದರಿಂದ ನೃತ್ಯ ಸಂಭ್ರಮ, ಬಳಿಕ 10 ಗಂಟೆಗೆ ಶ್ವೇತಾ ದೇವನಹಳ್ಳಿ ಮತ್ತು ತಂಡದವರಿಂದ ಗಾನಲಹರಿ ಪ್ರಸ್ತುತಗೊಳ್ಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು