ತಿ.ನರಸೀಪುರ: ತಮ್ಮನಿಗೆ ಹುಟ್ಟು ಹಬ್ಬದ ಸಿಹಿ ವಿತರಿಸಿ, ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಮರ ಬಿದ್ದ ಪರಿಣಾಮ ಆತ ಮೃತ ಪಟ್ಟಿರುವ ಘಟನೆ ತಾಲೂಕಿನ ಹಳೇ ಕೆಂಪಯ್ಯನ ಹುಂಡಿ ಗ್ರಾಮದ ಬಳಿ ಸಂಭವಿಸಿದೆ.
ತಾಲೂಕಿನ ಮೂಗೂರು ಗ್ರಾಮದ ನಿವಾಸಿ ಮನು(೨೮) ಎಂಬಾತನೇ ಮರದ ಕೊಂಬೆ ಬಿದ್ದು ದುರಂತ ಸಾವಿಗೀಡಾದ ಯುವಕ. ಈತ ಸೋಮವಾರ ತನ್ನ ಹುಟ್ಟುಹಬ್ಬದ ನಿಮಿತ್ತ ಮೈಸೂರಿನಲ್ಲಿರುವ ತಮ್ಮನ ಮನೆಗೆ ಹೋಗಿ, ಸಿಹಿ ವಿತರಿಸಿ ಮೂಗೂರಿಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ನಟ ದರ್ಶನ್ ತೋಟದ ಬಳಿ ಮರವೊಂದು ಬೈಕ್ನಲ್ಲಿ ಬರುತ್ತಿದ್ದ ಮನು ತಲೆ ಮೇಲೆ ಬಿದ್ದಿದೆ.
ಮರ ತಲೆಯ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಮನುವಿಗೆ ತೀವ್ರವಾದ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟನೆಂದು ತಿಳಿದುಬಂದಿದೆ. ಸ್ಥಳಕ್ಕೆ ಪಟ್ಟಣ ಠಾಣೆಯ ಸಿಪಿಐ ಕೃಷ್ಣಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.ಮನುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.