ಬಂಟ್ವಾಳ: ದುರ್ಬಲವಾಗಿದ್ದ ಜೈನಸಮುದಾಯ ಇದೀಗ ಸಬಲೀಕರಣ ದತ್ತ ಹೆಜ್ಜೆ ಹಾಕುವುದರ ಮೂಲಕ ಜೈನರ ಗತ ಇತಿಹಾಸ ಮತ್ತೆ ಮರುಕಳಿಸುತ್ತಿದೆ, ಇದು ಜೈನಸಮುದಾಯದ ಅತ್ಯಂತ ಹರ್ಷದಾಯಕ ಬೆಳವಣಿಗೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹಗ್ಗಡೆ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಬಳಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ 1008 ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ , ಪ್ರತಿಷ್ಠಾಮಹೋತ್ಸವ ದಲ್ಲಿ ಶುಕ್ರವಾರ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ” ಧರ್ಮಸಿರಿ” ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ವಿಶಿಷ್ಟ ಹಾಗೂ ಕಲಾತ್ಮಕವಾದ ಬಸದಿ ಪಂಜಿಕಲ್ಲುವಿನಲ್ಲಿ ನಿರ್ಮಾಣಗೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಬಹುದು ಎಂದು ಅವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜಿಲ್ಲೆಯಲ್ಲಿ ಸುಮಾರು 500 ದೇವಸ್ಥಾನ, ದೈವಸ್ಥಾನದ ಜೀರ್ಣೋದ್ದಾರ ಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದ ಡಾ.ಹೆಗ್ಗಡೆ ಅವರು ವಿಶ್ವಕ್ಕೆ ಅಹಿಂಸಾ ಮಾರ್ಗದ ಕೊಡುಗೆಯನ್ನು ಜೈನ ಧರ್ಮ ನೀಡಿದೆ ಎಂದರು.
ಮುನಿಶ್ರೀಗಳಾದ ೧೦೮ ಅಮೋಘಕೀರ್ತಿ ಮಹಾರಾಜರು, ಅಮರಕೀರ್ತಿ ಮಹಾರಾಜರು ಹಾಗೂ ೨೦೫ ಕ್ಷುಲ್ಲಕ್ ಮಹಾರಾಜರು ಉಪಸ್ಥಿತರಿದ್ದರು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಚ ಡಿ.ಸುರೇಂದ್ರಕುಮಾರ್, ಭಾರತೀಯ ಜೈನ್ ಮಿಲನ್ ನ ಪ್ರಸನ್ನ ಕುಮಾರ್, ಉದ್ಯಮಿ ರವೀಂದ್ರ ಪಾಟೀಲ್ ದಂಪತಿ ನಾಸಿಕ್, ಬಸದಿಯ ಜೀರ್ಣೋದ್ದಾರ ಸಮಿತಿ ಖಜಾಂಚಿ ರತ್ನವರ್ಮ ಇಂದ್ರ ವೇದಿಕೆಯಲ್ಲಿದ್ದರು. ಇದೇ ವೇಳೆ ನಿರಂಜನ್ ಜೈನ್ ಕುಡ್ಯಾಡಿ ಹಾಗೂ ಶಿಲ್ಪಿ ಶ್ರೀನಿವಾಸ್ ಅವರನ್ಮು ಸನ್ಮಾನಿಸಲಾಯಿತು.
ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಪ್ರಸ್ತಾವನೆಗೈದು, ಸ್ವಾಗತಿಸಿದರು.ಪತ್ರಕರ್ತೆ ನಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.
ಸುವರ್ಣ ಕವಚ ಸಮರ್ಪಣೆ: ಬಸದಿಯಲ್ಲಿ ಬೆಳಗ್ಗೆ ಯಕ್ಷ ಪ್ರತಿಷ್ಠೆ,ನಾಗಪ್ರತಿಷ್ಠೆ,ಆಶ್ಲೇಷಾ ಬಲಿ,ಧ್ವಜಾರೋಹಣ, ಮಾತೆ ಪದ್ಮಾವತಿ ಅಮ್ಮನವರ ಪ್ರತಿಷ್ಠೆ ,ಲಕ್ಷ ಹೂವಿನ ಪೂಜೆ ಹಾಗೂ ಮಾತೆ ಪದ್ಮಾವತಿ ಅಮ್ಮನವರಿಗೆ ಸುವರ್ಣ ಕವಚ ಸಮರ್ಪಣೆಯು ಮುನಿಶ್ರೀಗಳಾದ ೧೦೮ ಅಮೋಘಕೀರ್ತಿ ಮಹಾರಾಜರು, ಅಮರಕೀರ್ತಿ ಮಹಾರಾಜರು ಹಾಗೂ ಕ್ಷುಲ್ಲಕ್ ಮಹಾರಾಜರು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ನೆರವೇರಿತು. ಮಧ್ಯಾಹ್ನ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಅಮೃತಾ ಅಡಿಗ ಅವರ ಹಾಡುಗಾರಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುನಿರಾಜ ರೆಂಜಾಳ ಅವರು “ಕಾವ್ಯ ವಾಚನ ಪ್ರವಚನ ವೈಭವ” ಜಿನಕಥಾ ಪ್ರಸಂಗ ” ಶ್ರೀದೇವಿ ಪದ್ಮಾವತಿ ಚರಿತ್ರೆ” ಯ ಪ್ರವಚನಗೈದರು.