ಮಂಗಳೂರು: ದ್ವೇಷ ಮತ್ತು ಉದಾಸೀನತೆಯನ್ನು ತ್ಯಜಿಸಿ ಪರಸ್ಪರರನ್ನು ಪ್ರೀತಿಸಲು ಕ್ರಿಸ್ಮಸ್ ನಮಗೆ ಆಹ್ವಾನಿಸುತ್ತದೆ ಕ್ರಿಸ್ಮಸ್ ಎಂದರೆ ಕನ್ಯಾ ಮರಿಯಮ್ಮನವರ ಮೂಲಕ ಆದ ದೇವ ಪುತ್ರ ಯೇಸು ಕ್ರಿಸ್ತರ ಜನನ ಎಂಬುದು ಇದರಲ್ಲಿರುವ ಏಕಮಾತ್ರ ಹೊಸ ವಿಷಯ. ಇದೊಂದು ಮಗದೊಮ್ಮೆ ಪುನರಾವರ್ತನೆಗೊಳ್ಳದ ಅನನ್ಯ ಘಟನೆ. ಆ ಪವಿತ್ರ ರಾತ್ರಿಯಂದು ಕುರುಬರಿಗೆ ದೇವದೂತನು ಹೀಗೆಂದನು “ಇಗೋ ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭ ಸಂದೇಶವನ್ನು ನಿಮಗೆ ತಿಳಿಸುತ್ತೇನೆ”. ನಿಜವಾಗಿಯೂ ಮಾನವ ರೂಪದಲ್ಲಿರುವ ದೇವರನ್ನು ಅನೇಕರು ಅನುಭವ ಹೊಂದಿದರು ಹಾಗೂ ಸಂತೋಷಪಟ್ಟರು.
“ಜೀಸಸ್” ಅಥವಾ “ಯೇಸು” ಎಂದರೆ “ದೇವರು ರಕ್ಷಕರು” ಎಂದು ಅರ್ಥವಾಗುತ್ತದೆ. ಯೇಸು ನಮ್ಮನ್ನು ಪಾಪ ಮತ್ತು ಮರಣದಿಂದ ರಕ್ಷಿಸುತ್ತಾರೆ. ಅವರು ನಮ್ಮನ್ನು ದ್ವೇಷ ಮತ್ತು ಹಿಂಸಾತ್ಮಕ ಮನೋಭಾವದಿಂದ ರಕ್ಷಿಸುತ್ತಾರೆ. ಅವರು ಸಾರ್ವತ್ರಿಕ ಪ್ರೀತಿ ಮತ್ತು ಸಹೋದರತೆಯನ್ನು ಬೆಳೆಸುತ್ತಾರೆ. ಅವರ ಆಗಮನದ ನಂತರ ನಾವು ಜೀವಿಸುತ್ತಿರುವುದು ನಮ್ಮ ಪುಣ್ಯ. ಯೇಸು ಹೀಗೆಂದರು “ನೀವಾದರೂ ಭಾಗ್ಯವಂತರು, ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ, ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ, ಅಪೇಕ್ಷಿಸಿದ್ದರು.
ಆದರೆ ಅವರು ನೋಡಲು ಇಲ್ಲ ಕೇಳಲು ಇಲ್ಲ”. ನಮ್ಮ ಕುಟುಂಬಗಳಲ್ಲಿ ಸಂತೋಷದ ಸಂಭ್ರಮಗಳ ಸಂದರ್ಭದಲ್ಲಿ ನಾವು ನಮ್ಮ ಆತ್ಮೀಯರಿಗೆ i love you “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎನ್ನುತ್ತೇವೆ ಹಾಗೆಂದರೇನು? ಹಾಗೆದರೆ I want you to live “ನೀವು ಜೀವಿಸುವುದು ನನಗೆ ಬೇಕಾಗಿದೆ” ಎಂದು ಅರ್ಥ.
ಮಾನವ ಜನಾಂಗವೇ ನಮ್ಮ ಕುಟುಂಬವಾಗಿರಲು ನಾವು ಎಷ್ಟು ಜನರಿಗೆ “ನೀನು ಜೀವಿಸುವುದು ನನಗೆ ಬೇಕಾಗಿದೆ” ಎಂದು ಹೇಳಲು ಶಕ್ತರಾಗುವಿರಿ? ಇಂದಿನ ಬಹು ದೊಡ್ಡ ಅಪಾಯವೆಂದರೆ ಉದಾಸೀನತೆಯ, ನಿರ್ಲಿಪ್ತತೆಯ ಸಂಸ್ಕೃತಿ ಬೆಳೆಯುತ್ತ ಇದೆ.
ಇದು ದ್ವೇಷಕ್ಕಿಂತಲು ಕೆಟ್ಟದ್ದು. ನಾವು ಯಾವುದೇ ವ್ಯಕ್ತಿಯನ್ನು ಪ್ರೀತಿಸುವುದಾದರೆ ಆ ವ್ಯಕ್ತಿಗೆ ನಮ್ಮ ಹೃದಯದಲ್ಲಿ ಸ್ಥಾನವಿದೆ ಮತ್ತು ನಾವು ವ್ಯಕ್ತಿಯನ್ನು ದ್ವೇಷಿಸುವುದು ಆದರೆ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿ ಸ್ಥಾನವಿರುತ್ತದೆ. ಆದರೆ ನಾವು ಉದಾಸೀನತೆಯನ್ನು ಬೆಳೆಸಿದಲ್ಲಿ ಆ ವ್ಯಕ್ತಿ ನಮಗೆ ಅಸ್ತಿತ್ವದಲ್ಲಿ ಇಲ್ಲದಂತೆ. ಆ ವ್ಯಕ್ತಿ ಬದುಕಿದ್ದರೂ ಸತ್ತರೂ ನಾವು ಗಮನಿಸುವುದೇ ಇಲ್ಲ. ಇದು ನಮಗಾಗಿರುವ ದೊಡ್ಡ ಅಪಾಯ.
ಹೀಗೆ ಅನೇಕರು ವಿಭಜನೆ, ಹಿಂಸೆ ಮತ್ತು ಸಾವನ್ನು ಬೆಳೆಸುತ್ತಿದ್ದಾರೆ. ಯೇಸು ತನ್ನ ಜೀವನದ ಆದರ್ಶದ ಮೂಲಕ ಇತರರ ವಿಚಾರದಲ್ಲಿ ಕಾಳಜಿ ವಹಿಸಲು ಮತ್ತು ಹಂಚಿ ಬಾಳಲು, ವಿರೋಧಿಗಳನ್ನು ಕ್ಷಮಿಸಲು ಎಂದಿಗೂ ಯಾರನ್ನು ದ್ವೇಷಿಸದಿರಲು ಕಲಿಸುತ್ತಾರೆ. ದ್ವೇಷ ಮತ್ತು ಉದಾಸೀನತೆ ಇತರರನ್ನು ಹೊತ್ತಿ ಉರಿಸುವ ಮೊದಲು ನಮ್ಮನ್ನು ಬೂದಿ ಮಾಡುವುದು. ಅದು ನಮ್ಮ ಮನಸ್ಸಾಕ್ಷಿಯನ್ನು ನಾಶಗೊಳಿಸುತ್ತದೆ. ಅದು ನಮ್ಮಲ್ಲಿರುವ ಒಳಿತನ್ನು ನಾಶಗೊಳಿಸುತ್ತದೆ. ನಾವು ನಡೆದಾಡುವ ಸತ್ತ ವ್ಯಕ್ತಿಗಳಾಗುತೇವೆ. ಸ್ವಚ್ಛ ಭಾರತ ನಿರ್ಮಾಣಕ್ಕಾಗಿ “ಗೋ ಗ್ರೀನ್” ವಿಚಾರವಾಗಿ ಈ ದಿನಗಳಲ್ಲಿ ನಾವು ಮಾತನಾಡುವುದಿದೆ. ದ್ವೇಷ ಮತ್ತು ಉದಾಸೀನತೆ ಇಲ್ಲದ, ಸ್ವಚ್ಛ ಮನಸ್ಸು ಮತ್ತು ಶುದ್ಧ ಹೃದಯವನ್ನು ನಾವು ನಮ್ಮಲ್ಲಿ ಬೆಳೆಸಲು ಸಾಧ್ಯವೇ? ಈ ಕ್ರಿಸ್ಮಸ್ ನಮಗೆಲ್ಲರಿಗೂ ಒಂದು ಶುದ್ಧ ಹೃದಯವನ್ನು ಬೆಳೆಸಲು ಒಂದು ಪಂಥಾಹ್ವಾನವಾಗಲಿ. ಈ ಮೂಲಕ ನಾವು ನಮ್ಮ ನೆರೆಕರೆಯವರಲ್ಲಿ ಮತ್ತು ಪ್ರಕೃತಿಯಲ್ಲಿ ದೇವರನ್ನು ಕಾಣಲು ಸಾಧ್ಯವಾಗಲಿ. ಈ ತಮ್ಮ ಉಪಸ್ಥಿತಿಯಲ್ಲಿ ಇತರರು ಪರಮಾನಂದವನ್ನು ಅನುಭವಿಸಲು ಸಾದ್ಯವಾಗಲಿ.
ನಿಮಗೆಲ್ಲರಿಗೂ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು