ಮಂಗಳೂರು,ಮಾ.3(ಕ.ವಾ) : ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಎ.ಜೆ. ಇನ್ಸಿಟ್ಯೂಟ್ ಆಫ್ ಎಂಜಿನಿಯರ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿನ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ಮಾ.3ರ ಗುರುವಾರ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್, ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯತೆ ಇವೆರಡನ್ನು ಜೊತೆ ಜೊತೆಯಲ್ಲಿಯೇ ಪಡೆದುಕೊಳ್ಳಬೇಕು. ಯುವಕರು ಅಸಹಾಯಕರಾಗಿ ಇರಬಾರದು, ಸದೃಢ ಹಾಗೂ ಸ್ವಾಭಿಮಾನಿಯಾಗಿರಬೇಕು. ಎಲ್ಲಾ ಯುವಕರಿಗೂ ಉದ್ಯೋಗ ಸಿಗಬೇಕು ಅನ್ನೋ ದ್ಯೇಯದೊಂದಿಗೆ ಮುಖ್ಯ ಮಂತ್ರಿಬೊಮ್ಮಾಯಿಯವರ ನಾಯಕತ್ವದಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ.
ಇಂದು ಮುಂದುವರಿದ ರಾಷ್ಟ್ರಗಳಲ್ಲಿ ಟ್ಯುಟೋರಿಯಲ್ಸ್ ಸಾಕಷ್ಟು ಆವಿಷ್ಕಾರ ಮಾಡುತ್ತಿವೆ. ಸ್ಟಾರ್ಟಪ್ನಲ್ಲಿ ಅಮೇರಿಕ, ಚೀನಾ ಬಿಟ್ಟರೆ ಭಾರತ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನ ಯಾವುದು ಅಂತ ಹುಡುಕಿದ್ರೆ ಅದು ಕರ್ನಾಟಕ ಇದೆ. ಹತ್ತು ವರ್ಷದಲ್ಲಿ ಸ್ಟಾರ್ಟಪ್ನಲ್ಲಿ ಕರ್ನಾಟಕ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ವೇಗ ನೀಡಿದರೆ ನಾವು ಎಲ್ಲಿಗೋ ಹೋಗಿಬಿಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ನಳೀನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಮೇಯರ್ ಪ್ರೇಮಾನಂದ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಕೌಶಲ್ಯಾಭಿವೃದ್ದಿ ಇಲಾಖೆಯ ಹೇಮಚಂದ್ರ ಹಾಗೂ ಇತರರಿದ್ದರು.