ಮಂಗಳೂರು : ನಗರದ ಜಪ್ಪಿನಮೊಗರು ಬಳಿ ಗ್ರಾಹಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2.20ಕೋಟಿ ರೂ. ವೌಲ್ಯದ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಯನ್ನು ಮಂಗಳೂರು ನಗರ ಪೊಲೀಸರು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ಕರಿಕೆ ನಿವಾಸಿ ಜಾಬೀರ್ (35), ಹೊಸದುರ್ಗ ಪಡನಕ್ಕಾಡ್ ನಿವಾಸಿ ಆಸೀರ್ (36), ಹೊಸದುರ್ಗ ನೀಲಂಗರ ನಿವಾಸಿ ಶರೀಫ್ ಎನ್. (32), ಭಾಗಮಂಡಲ ಕಿಲ್ಲತ್ ಮಂಜಿಲ್ ನಿವಾಸಿ ಶಬಾದ್ (27) ಪ್ರಕರಣದ ಆರೋಪಿಗಳು.
ನಾಲ್ವರು ಆರೋಪಿಗಳು ಅಂಬರ್ಗ್ರೀಸ್ ಅನ್ನು ಜಪ್ಪಿನಮೊಗರು ಬಳಿ ಗ್ರಾಹಕರಿಗೆ ಮಾರಾಟ ಮಾಡಲು ಕಾಯುತ್ತಿದ್ದರು. ಆರೋಪಿಗಳಿಂದ 2.20ಕೋಟಿ ರೂ. ವೌಲ್ಯದ ತಿಮಿಂಗಿಲದ ವಾಂತಿ, 5 ಮೊಬೈಲ್, ಸ್ವಿಪ್ಟ್ ಕಾರು 1, ನಗದು 1070 ರೂ. ಸೇರಿದಂತೆ 2.25 ಕೋಟಿ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನಿರ್ದೇಶನದಂತೆ ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ನಿರೀಕ್ಷಕ ಅಶೋಕ್ ಪಿ., ಪೊಲೀಸ್ ಉಪನಿರೀಕ್ಷಕ ಕೃಷ್ಣ ಬಿ. ಅವರ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರೆಜಿ, ದಯಾನಂದ, ನಂದೀಶ್ ಕುಮಾರ್, ಮಹೇಶ್, ಮಂಜುನಾಥ ಹೆಗ್ಡೆ, ಜೀವನ್ ಕುಮಾರ್, ಕಾರ್ತಿಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.