ಬೆಳ್ತಂಗಡಿ: ಶಿವರಾಮ ಕಾರಂತ ಪ್ರತಿಷ್ಠಾನ ಮೂಡಬಿದರೆ ಇದರ ವತಿಯಿಂದ ದ.ಕ.ಜಿಲ್ಲೆ ಮತ್ತು ಬೆಳ್ತಂಗಡಿ ತಾಲೂಕು ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಇಲ್ಲಿನ ಸಪ್ತವರ್ಣ ಸಭಾಭವನದಲ್ಲಿ 2021ರ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಶಿವರಾಮ ಕಾರಂತ ಪುರಸ್ಕಾರ ಪ್ರದಾನ ಸಮಾರಂಭ ಎ. 29 ರಂದು ನಡೆಯಿತು.
ಜಸ್ಟೀಸ್ ಕೆ.ಎಸ್.ಹೆಗ್ಡೆ , ಹಾಗೂ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ದಿl ಕೆ.ಅಮರನಾಥ ಶೆಟ್ಟಿ ಸ್ಮ ರಣಾರ್ಥ ಶಿವರಾಮ ಕಾರಂತ ಪ್ರಶಸ್ತಿಯನ್ನು ಹಂಪಿ ಕನ್ನಡ ವಿ.ವಿ. ಹಾಗೂ ಮೈಸೂರು ಮುಕ್ತ ವಿ.ವಿ. ಮಾಜಿ ಕುಲಪತಿ ಪ್ರೊ. ಬಿ.ಎ.ವಿವೇಕ ರೈ, ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಪ್ರದಾನ ಮಾಡಲಾಯಿತು.
ಎಂ.ಸಿ.ಎಸ್ ಬ್ಯಾಂಕ್ ಮೂಡಬಿದರೆ ಮತ್ತು ಸೊಂದಲಗೆರೆ ಮಲ್ಲಮ್ಮ ಪಟೇಲ್ ನಾರಸಿಗೌಡ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಾಗೂ ದಿl ವನಜಾಕ್ಷಿ , ದಿl ಕೆ.ಶೀನಪ್ಪ, ಪ್ರೊ.ಎಂ.ರಾಮಚಂದ್ರ ಸ್ಮರಣಾರ್ಥ ಶಿವರಾಮ ಕಾರಂತ ಪುರಸ್ಕಾರಗಳನ್ನು ಕೈ ಹಿಡಿದು ನಡೆಸಬೇಕೇ ಕೃತಿಗಾಗಿ ಡಾl ಮಹಾಬಲೇಶ್ವರ ರಾವ್, ಚೆನ್ನಭೈರಾದೇವಿ ಕೃತಿಗಾಗಿ ಡಾl ಗಜಾನನ ಶರ್ಮ, ಪಠ್ಯದ ಪ್ರಭಾವಳಿ ಕೃತಿಗಾಗಿ ಡಾl ವಿಕ್ರಮವಿಸಾಜಿ, ಸಂಸ್ಕೃತಿ ಪೋಷಕರಾದ ಪ್ರೊ. ಜಯಪ್ರಕಾಶ ಗೌಡ ಮತ್ತು ವೈ.ಎ.ದಂತಿ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ವಿವೇಕ ರೈ ಅವರು, ಶಿವರಾಮ ಕಾರಂತರು ಕೇವಲ ಸಾಹಿತಿಗಳಾಗಿರದೆ, ಅಧ್ಯಯನಶೀಲರೂ ಆಗಿದ್ದರು. ಕಾರಂತರ ಸಾಹಿತ್ಯ ಸಂಸ್ಕೃತಿ ಪುನರುಜ್ಜೀವನ ಗೊಳ್ಳಬೇಕು. ಕನ್ನಡ ಕಲಿತರೆ ಸಂಸ್ಕಾರ ಸಿಗುತ್ತದೆ. ಯಾವುದಕ್ಕೂ ಭಯ ಪಡಬಾರದು ಎನ್ನುತ್ತಿದ್ದ ಕಾರಂತರು ವೈಚಾರಿಕವಾಗಿ ನಮ್ಮ ಅಳತೆಯನ್ನು ಮೀರಿದವರಾಗಿದ್ದರು. ಅವರ ಕುಡಿಯರ ಕೂಸು, ಚಿಗುರಿದ ಕನಸು ಕಾದಂಬರಿಗಳಲ್ಲಿ ಬೆಳ್ತಂಗಡಿ ತಾಲೂಕಿನ ಐದು ದಶಕಗಳ ಹಿಂದಿನ ಚಿತ್ರಣ ಕಣ್ಣಿಗೆಕಟ್ಟುವಂತೆ ಇದೆ. ಕಾರಂತ ಪರಂಪರೆ ಮುಂದುವರಿಯಬೇಕು ಎಂದು ಆಶಿಸಿದರು.
ಪ್ರಶಸ್ತಿ ಸ್ವೀಕರಿಸಿದ ಇನ್ನೋರ್ವ ಸಾಹಿತಿ ಕುಂವೀ ಅವರು ಶಿವರಾಮ ಕಾರಂತರನ್ನು ಮರು ಸೃಷ್ಟಿ ಮಾಡುವ ಪ್ರಯತ್ನ ಆಗಬೇಕಾಗಿದೆ. ಕಾರಂತರು ವೇದಿಕೆಯಲ್ಲಿದ್ದರೆ ಸಾಹಿತಿಗಳು, ರಾಜಕಾರಣಿಗಳು ಎಚ್ಚರಿಕೆಯಿಂದ ಮಾತನಾಡುತ್ತಿದ್ದರು. ಇರುವುದನ್ನು ಇದ್ದಹಾಗೆ ಹೇಳುವುದೂ ಅಪಾಯಕಾರಿಯಾಗಿದೆ. ವ್ಯವಸ್ಥೆಯನ್ನು ಪ್ರಶ್ನಿಸುವ ಸಾಹಿತಿಗಳು ಬೇಕು ಎಂದ ಅವರು ಇಂದು ಸರಕಾರ ಕೊಟ್ಟ ಹಣವನ್ನು ಬೇಕು ಬೇಕಾದವರಿಗೆ ಬಟವಾಡೆ ಮಾಡುವ ವ್ಯವಸ್ಥೆ ನಮ್ಮಕನ್ನಡ ಮತ್ತು ಸಂಸ್ಕತಿಯಲ್ಲಿ ಇರುವುದಕ್ಕೆ ವಿಷಾದಿಸಿದರು.
ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಮಾತನಾಡಿ ಶುಭ ಹಾರೈಸಿದರು. ಮೂಡಬಿದಿರೆ ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಪ್ರಾಯೋಜಕರಾದ ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್, ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಭಾನುಮತಿ ಶೀನಪ್ಪ, ಲಕ್ಷ್ಮೀಪತಿ ಸೊಂದಲಗೆರೆ, ಪ್ರತಿಷ್ಠಾನದ ರಾಜಾರಾಮ ಮೂಡಬಿದರೆ ತಾಲೂಕು ಕ.ಸಾ.ಪ. ಅಧ್ಯಕ್ಷ ಯದುಪತಿ ಗೌಡ ಉಪಸ್ಥಿತರಿದ್ದರು.
ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಸ್ವಾಗತಿಸಿದರು. ಪ್ರತಿಷ್ಠಾನದ ಪ್ರ.ಕಾರ್ಯದರ್ಶಿ ಡಾ. ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು.