ಚನ್ನಪಟ್ಟಣ: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ರಾಜ್ಯ ಘಟಕ, ಮಂಡ್ಯ ಇವರು ಮಂಡ್ಯದ ಎಸ್.ಪಿ.ಕಛೇರಿ ಹಿಂಭಾಗದಲ್ಲಿನ ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಮೇ 1 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಿರುವ ‘ಕಾನನ’ ರಾಜ್ಯ ಮಟ್ಟದ ಕವನ ಸಂಕಲನ ಬಿಡುಗಡೆ ಮತ್ತು 25ನೇ ಕವಿಕಾವ್ಯಮೇಳ ಹಾಗೂ ಅಭಿನಂದನಾ ಸಮಾರಂಭದ ಸಮ್ಮೇಳಾಧ್ಯಕ್ಷರಾಗಿ ಸಾಹಿತಿ ಎಲೇಕೇರಿ ಡಿ.ರಾಜಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ.
ಡಿ.ರಾಜಶೇಖರ್ ಅವರು, ವಿಶ್ವಖ್ಯಾತಿಯ ಬೊಂಬೆನಾಡಿನ ಚನ್ನಪಟ್ಟಣ ನಗರದ ಎಲೇಕೇರಿ ಗ್ರಾಮದ ಎಲ್.ದಾಸಪ್ಪ ಮತ್ತು ಜಯಮ್ಮನವರ ದಂಪತಿಗಳ ಜ್ಯೇಷ್ಠ ಪುತ್ರರಾಗಿ 1968ನೇ ಜೂನ್ ೫ರಂದು ಜನಿಸಿದವರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು ಆನಂತರ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು, ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು , ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ.ಪದವಿ ಮುಗಿಸಿದರು. ವಿದ್ಯಾರ್ಥಿ ಜೀವನದಿಂದಲೂ ಶಿಕ್ಷಕರು ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಕಲೆ, ಸಾಹಿತ್ಯ, ಕವಿತೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಶಾಲಾ ಕಾಲೇಜಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ:ಪ್ರಶಸ್ತಿಗಳನ್ನು ಪಡೆದು ಎಲ್ಲರಿಂದ ಸೈ ಎನಿಸಿಕೊಂಡರು.
1998ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಆಯ್ಕೆಗೊಂಡು ತಾಲ್ಲೂಕಿನ ರಾಂಪುರ ಸರ್ಕಾರಿ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದ ಡಿ.ರಾಜಶೇಖರ್ ಅವರು, ಹಲವು ಶಾಲೆಗಳಲ್ಲಿ ಶಿಕ್ಷಕರಾಗಿ ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಮತ್ತು ಶಾಲಾ ಅಭಿವೃದ್ಧಿಗಾಗಿ ಶ್ರಮಿಸಿದವರು. ಹಾಗೂ ಎರಡು ಬಾರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ನೀಲಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ವೃತ್ತಿಯಲ್ಲಿ ಆದರ್ಶ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಸಾಹಿತಿಯಾಗಿ,ಕವಿಯಾಗಿ, ಹಾಡುಗಾರರಾಗಿ, ರಂಗಭೂಮಿ ಕಲಾವಿದರಾಗಿ, ಕಸಾಪ, ಸಿರಿಗನ್ನಡ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ, ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ ಎಲ್ಲರಿಂದ ಪ್ರಶಂಸೆಗೆ ಶ್ರೀಯುತರು ಪಾತ್ರರಾಗಿದ್ದಾರೆ. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಹಲವು ಕವಿಗೋಷ್ಠಿಯಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆಗಳನ್ನು ವಾಚಿಸಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.