ಬೆಳ್ತಂಗಡಿ: ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಹೆಚ್ಚಿಸಿ ಶಿಕ್ಷಣ ರೂಪದಲ್ಲಿಯು ಶಕ್ತಿ ತುಂಬುವ ಕಲೆ ಎಂದರೆ ಅದು ಯಕ್ಷಗಾನ. ಕರಾವಳಿಯ ಈ ಕಲೆಯು ಆಧ್ಯಾತ್ಮಿಕ, ಸಾಂಸ್ಕೃತಿಕವಾಗಿಯೂ ಜನರನ್ನು ಆಕರ್ಷಿಸಿದೆ. ಈ ಕಲೆಯ ಬೆಳವಣಿಗೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಹೆಚ್ಚಿನ ಪ್ರೋತ್ಸಾಹ ಹಾಗೂ ಅವಕಾಶಗಳನ್ನು ನೀಡುತ್ತಿದೆ ಎಂದು ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಶ್ರಯದಲ್ಲಿ ಯಕ್ಷಜನ ಸಭಾ ಉಜಿರೆ ಇದರ ವತಿಯಿಂದ ಬೆಳ್ತಂಗಡಿಗೆ ರೋಟರಿ ಕ್ಲಬ್ ಸಹಯೋಗದಲ್ಲಿ ಜರಗಿದ ಯಕ್ಷೋತ್ಸವ 2021ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ಗುರುವಿನ ಆಶೀರ್ವಾದವಿದ್ದರೆ ಕಲಾವಿದ ಬೆಳೆಗಲು ಸಾಧ್ಯ, ಅಭಿಮಾನಿಗಳ ಪ್ರೀತಿ ವಿಶ್ವಾಸ ಕಲಾವಿದರ ಉನ್ನತಿಗೆ ಮೂಲ ಎಂದರು.
ಯಕ್ಷಜನ ಸಭಾದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಸದಸ್ಯೆ ಉಷಾಕಿರಣ್ ಕಾರಂತ್, ಶ್ರೀಶ ಮುಚ್ಚಿನ್ನಾಯ, ದಯಾನಂದ ಎಳಚಿತ್ತಾಯ, ಗಂಗಾಧರ ಕೆವುಡೇಲು, ಕೃಷ್ಣ ಕುಮಾರ ಐತಾಳ, ರಘುರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.